ಕರಾವಳಿ ಪತ್ರಕರ್ತರಿಂದ ಯಕ್ಷಗಾನ ಪ್ರದರ್ಶನ ಯಶಸ್ವಿ
ಮಂಗಳೂರು ಜಿಲ್ಲಾ ಪ್ರೆಸ್ ಕ್ಲಬ್ ದಿನಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲಾ ಪತ್ರಕರ್ತರು ಯಶ್ವಿಯಾಗಿ ಯಕ್ಷಗಾನ ಪ್ರದರ್ಶಿಸಿ ಗಮನಸೆಳೆದರು. ಹಾಗೂ ಇದೇ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.
ಮಂಗಳೂರು, ಡಿಸೆಂಬರ್ 18 : ದಿನಾಲೂ ಸುದ್ದಿಗಳನ್ನು ಬೆನ್ನಟ್ಟಿ ಸುದ್ದಿಗಳನ್ನು ಮಾಡುತಿದ್ದ ಪತ್ರಕರ್ತರು ಭಾನುವಾರ ವೇಷ ತೊಟ್ಟು ಕುಣಿದು ತಾವೇ ಸುದ್ದಿಯಾದರು.
ಹೌದು, ಮಂಗಳೂರಿನ ಮಂಗಳಾ ಸ್ಟೇಡಿಯಂ ಬಳಿಯ ಲಾಲ್ಬಾಗ್ ಸ್ಕೌಟ್ಸ್ ಭವನದಲ್ಲಿ ಭಾನುವಾರ ನಡೆದ ಪ್ರೆಸ್ ಕ್ಲಬ್ ದಿನಾಚರಣೆ ವೇಳೆ ಪತ್ರಕರ್ತರು ಯಕ್ಷಗನ ಪ್ರದರ್ಶಿಸಿ ಎಲ್ಲರನ್ನು ರಂಜಿಸಿದರು. ಮಂಗಳೂರಿನ ಪ್ರೆಸ್ಕ್ಲಬ್ ಇತಿಹಾಸದಲ್ಲಿಯೇ ಮೊದಲ ಯಕ್ಷಗಾನ ಪ್ರದರ್ಶನ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಧೀರಜ್ ಕೊಟ್ಟಾರಿ ನಿರ್ದೇಶನದ ರವಿ ಅಲೆವೂರಾಯ ಮಾರ್ಗದರ್ಶನದ ' ಮಹಿಷಮರ್ದಿನಿ' ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಈ ಪ್ರದರ್ಶನದಲ್ಲಿ ಮಹಿಷಾಸುರನಾಗಿ ವಿಶ್ವವಾಣಿಯ ಕಿಶೋರ್ ಭಟ್ ಕೊಮ್ಮೆ, ಶ್ರೀದೇವಿ ಪಾತ್ರದಲ್ಲಿ ವಿಶ್ವವಾಣಿ ವಿಶೇಷ ವರದಿಗಾರ ಜಿತೇಂದ್ರ ಅಭಿನಯಿಸಿದರು.
ಸುಪಾರ್ಶ್ವಕ ಪಾತ್ರದಲ್ಲಿ ಹೊಸದಿಗಂತ ಹಿರಿಯ ವರದಿಗಾರ ಸುರೇಶ್ ಡಿ. ಪಳ್ಳಿ, ಒಯ್ಯಾರದ ಮಾಲಿನಿಯಾಗಿ ಇಂಡಿಯನ್ ಎಕ್ಸ್ ಪ್ರೆಸ್ ಹಿರಿಯ ವರದಿಗಾರ ಗಣೇಶ್ ಮಾವಂಜಿ ಅಭಿನಯಿಸಿದರು.
ಹಾಸ್ಯಗಾರ ದೂತನಾಗಿ ವಿಶ್ವವಾಣಿ ವರದಿಗಾರ ಅಜಿತ ಆರಾಡಿ, ದೇವೇಂದ್ರನ ಪಾತ್ರದಲ್ಲಿ ದಿಗ್ವಿಜಯ ಸುದ್ದಿವಾಹಿನಿಯ ದಿವಾಕರ ಪದ್ಮುಂಜ, ವರುಣನ ಪಾತ್ರದಲ್ಲಿ ಉದಯವಾಣಿಯ ಭರತ್ರಾಜ್ ಕಲ್ಲಡ್ಕ, ವಾಯು ಪಾತ್ರದಲ್ಲಿ ಐಸಿರಿ ವಾಹಿನಿಯ ಸಚಿನ್ ಶೆಟ್ಟಿ ಅಭಿನಯಿಸಿದರು.
ತಡ್ಪೆ ಮುಂಡಾಸಿನ ಶಂಖಾಸುರನಾಗಿ ವಿಜಯವಾಣಿ ಹಿರಿಯ ವರದಿಗಾರ ಹರೀಶ್ ಮೋಟುಕಾನ, ದುರ್ಗಾಸುರನಾಗಿ ದಿಗ್ವಿಜಯ ವಾಹಿನಿಯ ವರದಿಗಾರ ಕಿಶನ್ ಶೆಟ್ಟಿ ಹಾಗೂ ಬಿಡಲಾಸುರನಾಗಿ ದ ಹಿಂದು ವರದಿಗಾರ ರಾಘವ ಮತ್ತಿಹಳ್ಳಿ ಅಭಿನಯಿಸಿದರು.
ಅಲ್ಲದೇ, ವಿಷ್ಣು ಮತ್ತು ಬ್ರಹ್ಮನ ಅಪರೂಪದ ಜೋಡಿಯಾಗಿ ಉದಯವಾಣಿ ವರದಿಗಾರ್ತಿಯರಾದ ಪ್ರಜ್ಞಾ ಮತ್ತು ಧನ್ಯಾ , ಈಶ್ವರನಾಗಿ ಕೋಸ್ಟಲ್ ಡೈಜೆಸ್ಟ್ನ ಸುರೇಶ್ ವಾಮಂಜೂರು ಅಭಿನಯಿಸಿದರು.
ಮುರಾರಿಯವರ ಚೆಂಡೆ, ಗಣೇಶ್ ಭಟ್ ನೆಕ್ಕರಮೂಲೆಯವರ ಮದ್ದಲೆ ಹಾಗೂ ಹಿಮ್ಮೇಳ ಭಾಗವತರಾದ ಭವ್ಯಶ್ರೀ ಮಂಡೆಕೋಲು ಸೇರಿದಂತೆ ಎಲ್ಲಾ ಕಲಾವಿದರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ನಾಲ್ವರು ಸಾಧಕರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿ ವಿತರಣೆ: ಇದೇ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ರೆನಿಟಾ, ಶಮಿತಾ ಹಾಗೂ ಫೌಝಿಯಾ , ಶಮೀರಾ ಇವರಿಗೆ 2016-17 ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅರಣ್ಯ ಸಚಿವ ಬಿ. ರಮಾನಾಥ ರೈ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದ್ದೀನ್ ಬಾವಾ ಈ ನಾಲ್ವರು ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಿದರು.