ನಾವು ಅಂತರಂಗದಲ್ಲಿ ಬದಲಾವಣೆಯಾಗಬೇಕಿದೆ: ಮಂಗ್ಳೂರು ಡಿಸಿ
ಮಂಗಳೂರು, ನವೆಂಬರ್. 25 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಹಿತಕರ ಘಟನೆಗಳು ನಡೆದ ಹಿನ್ನಲೆಯಲ್ಲಿ ಎಲ್ಲೆಡೆ ಶಾಂತಿ ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಕ್ಷೇತ್ರ ಮುಖಂಡರ ಮುಂದಾಳತ್ವದಲ್ಲಿ ಬುಧವಾರ ಮಂಗಳೂರಲ್ಲಿ ಶಾಂತಿ ಸಭೆ ನಡೆಸಲಾಯಿತು.
ಮಂದಿರ, ಚರ್ಚ್ ಮಸೀದಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲು 70 ಲಕ್ಷ ರೂ. ಜಾರಿಯಾಗಿದ್ದು, ಅದರಲ್ಲಿ 35 ಲಕ್ಷ ರೂ. ಬಿಡುಗಡೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ವಾತಾವರಣವಿರಬೇಕು. ಈ ಹಿನ್ನಲೆ ನಾವು ಅಂತರಂಗದಲ್ಲಿ ಬದಲಾವಣೆಯಾಗಬೇಕಾಗಿದೆ. ಸಮಾಜದಲ್ಲಿ ಅಸಹಿಷ್ಣುತೆ ನಿವಾರಿಸಲು ಗ್ರಾಮೋತ್ಸವ, ಯುವಜನೋತ್ಸವ ಆಚರಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು.[ಆರಕ್ಷಕರಿಗೊಂದು ಶುಭಾಶಯ ಹೇಳಲು ನಮ್ಮೊಂದಿಗೆ ಬನ್ನಿ]
ಸಾರ್ವಜನಿಕರ ಅಭಿಪ್ರಾಯಗಳು :
ಶಾಂತಿ ಸಭೆಯಲ್ಲಿ ಸಾರ್ವಜನಿಕರೂ ಪಾಲ್ಗೊಂಡಿದ್ದು ಮಂಗಳೂರಲ್ಲಿ ಶಾಂತಿ ಕಾಪಾಡುವುದರ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
* ಹಮೀದ್ ಕಂದಕ್ : ಘಟನೆಗಳು ಮರುಕಳಿಸದಂತೆ ಕನಿಷ್ಠ 1 ವರ್ಷ ನಿಷೇದಾಜ್ಞೆ ಮುಂದುವರಿಸಬೇಕು. ಇದರಿಂದ ನಮ್ಮ ವ್ಯಾಪಾರ ವಹಿವಾಟಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದರು.
* ವಸಂತಾಚಾರ್ಯ : ಬಂದ್ ಗೆ ಕರೆ ನೀಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಜಿಲ್ಲೆಯಲ್ಲಿ ಯಾವುದೇ ಸೆಕ್ಷನ್ ಜಾರಿಯಲ್ಲಿರಬಾರದು. ನಮ್ಮದು ನಾಗರಿಕ ಸಮಾಜ ಆಗಬೇಕೆ ಹೊರತು ಸೆಕ್ಷನ್ ಹಾಕುವ ಸಮಾಜ ಆಗಬಾರದು.[ಮಂಗಳೂರಿನ ಹೋಮ್ ಗಾರ್ಡ್ ಗೊಂದು ಸೆಲ್ಯೂಟ್ ಸಲ್ಲಿಸಿ]
* ಟಿ. ವಿಶ್ವನಾಥ್ : ಎಲ್ಲರೂ ಇಲ್ಲಿಯ ಕಾನೂನನ್ನು ಗೌರವಿಸಬೇಕು. ಪೊಲೀಸರು ಆರೋಪಿಗಳನ್ನು ಬಂಧಿಸಿದಾಗ ಬಿಡುಗಡೆಗೆ ಒತ್ತಾಯಿಸುವರ ಹೆಸರನ್ನು ದಾಖಲು ಮಾಡಿಕೊಳ್ಳಬೇಕು.
* ರವೀಂದ್ರ: ಡಿಸಿ ಮತ್ತು ಪೊಲೀಸ್ ಆಫೀಸರ್ ಗಳು ಖುದ್ದಾಗಿಯೇ ಮಾರುವೇಶದಲ್ಲಿ ಬಂದು ಸಮಾಜದ ಸಮಸ್ಯೆಗಳನ್ನು ಅರಿತರೆ ಉತ್ತಮ.
* ಫಾದರ್. ಜೋಸೆಫ್: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಗಳಲ್ಲಿ ಸೌಹಾರ್ದ ವೇದಿಕೆಯನ್ನು ಸ್ಥಾಪಿಸಲಿ, ಉತ್ತಮ ಕಾರ್ಯಕ್ರಮಗಳನ್ನು ಜರುಗಿಸಲಿ.
* ಬದ್ರಿಯ ಕಾಲೇಜ್ ಪ್ರಾಂಶುಪಾಲ ಇಕ್ಬಾಲ್ : ನಮ್ಮ ಮಕ್ಕಳಿಗೆ ಬುದ್ದಿ ಹೇಳಬೇಕೆನ್ನುವುದು ನಮ್ಮ ಕರ್ತವ್ಯ. ಆಗ ಉತ್ತಮ ನಾಡನ್ನು ಕಟ್ಟಬಹುದು. ಅಸಹಿಷ್ಣು ಮನಸ್ಸನ್ನು ಸರಿಪಡಿಸಬಹುದು.[ಟಿಪ್ಪು ಗಲಭೆಗೆ ವಾಟ್ಸಪ್, ಫೇಸ್ ಬುಕ್ ಗಳೇ ಕಾರಣ: ಗುಪ್ತಚರ ಇಲಾಖೆ]
ಈ ಸಂದರ್ಭದಲ್ಲಿ ಡಿಸಿಪಿ ಶಾಂತರಾಜ್ , ಸಿಇಒ ಶ್ರೀವಿದ್ಯಾ, ಎಸ್.ಪಿ ಶರಣಪ್ಪ, ಎ ಎಸ್ ಪಿ ಶಾಂತ ಕುಮಾರ್, ಎಡಿಸಿ ಕುಮಾರ್ ಸೇರಿದಂತೆ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರುಗಳು ಉಪಸ್ಥಿತರಿದ್ದು, ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳ ಬಗ್ಗೆ ಕಿವಿಮಾತು ಹೇಳಿದರು.