ಬೆಕ್ಕು ಸತ್ತಿದ್ದ ಬಾವಿಯ ನೀರು ಬಳಕೆ, ಕೆನರಾ ಕಾಲೇಜಿನಲ್ಲಿ ಪ್ರತಿಭಟನೆ
ಮಂಗಳೂರು, ನವೆಂಬರ್ 12: ನಗರದ ಜೈಲ್ ರೋಡ್ ಬಳಿಯಿರುವ ಕೆನರಾ ಕಾಲೇಜಿನ ಕುಡಿಯುವ ನೀರು ಪೂರೈಕೆಯ ಬಾವಿಯಲ್ಲಿ ಬೆಕ್ಕೊಂದು ಮೃತಪಟ್ಟಿದ್ದು, ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ. ಆದ್ದರಿಂದ ಬಾವಿಯನ್ನು ಕೂಡಲೇ ಶುದ್ಧೀಕರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಕೆನರಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಧರಣಿ ನಡೆಸಿದರು.
ಬಾವಿ ನೀರಿನಲ್ಲಿ ಕಸ- ಕಡ್ಡಿಗಳು ತುಂಬಿಹೋಗಿದ್ದು ,ಇತ್ತೀಚೆಗೆ ಬೆಕ್ಕೊಂದು ಬಾವಿಗೆ ಬಿದ್ದು ಸತ್ತಿದೆ. ಬಾವಿಯ ನೀರು ಸಂಪೂರ್ಣ ಮಲಿನಗೊಂಡಿದ್ದು, ಕುಡಿಯಲು ಈ ನೀರು ಯೋಗ್ಯವಾಗಿಲ್ಲ. ಪ್ರಯೋಗಾಲಯ ಪರೀಕ್ಷೆಯಿಂದಲೂ ಇದು ದೃಢಪಟ್ಟಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.[ಮಂಗಳೂರು: ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಹಲ್ಲೆ]
ಆಡಳಿತ ಮಂಡಳಿಯು ಕಾಲೇಜಿನ ಅವಶ್ಯಕತೆಗಳಿಗೆ ಈ ಬಾವಿಯ ನೀರನ್ನು ಬಳಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ಬಾವಿಯಲ್ಲಿ ಬೆಕ್ಕು ಬಿದ್ದ ಹಿನ್ನೆಲೆಯಲ್ಲಿ ನೀರು ಕಲುಷಿತವಾಗಿದ್ದು, ಜತೆಗೆ ಕಸಕಡ್ಡಿಗಳಿಂದ ತುಂಬಿಹೋಗಿದೆ. ಆದ್ದರಿಂದ ಕಾಲೇಜಿನ ಅವಶ್ಯತೆಗಳಿಗೆ ಬಾವಿಯ ನೀರನ್ನು ಬಳಸುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.[ಜೆಎನ್ ಯು: ಮಣಿಪುರ ಮೂಲದ ವಿದ್ಯಾರ್ಥಿ ನಿಗೂಢ ಸಾವು]
ಈ ವಿಚಾರ ಶುಕ್ರವಾರ ಬೆಳಕಿಗೆ ಬಂದ ಕಾರಣ ವಿದ್ಯಾರ್ಥಿಗಳು ಬಾವಿಯ ಕಲುಷಿತ ನೀರನ್ನೇ ಕಾಲೇಜಿನ ಅವಶ್ಯತೆಗಳಿಗಾಗಿ ಬಳಸಲಾಗುತ್ತಿದೆ ಎಂದು ಭಾವಿಸಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಈಗಾಗಲೇ ಬಾವಿಯ ನೀರನ್ನು ಶುದ್ಧೀಕರಿಸುವ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಬೆಕ್ಕು ಮೃತಪಟ್ಟಿದ್ದು, ಯಾವುದೇ ಕಾರಣಕ್ಕೂ ಕಲುಷಿತ ನೀರಿನ ಬಳಕೆ ಮಾಡಿಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟನೆ ನೀಡಿದ್ದಾರೆ.