ಮಂಗಳೂರಿಗೆ ಶೀಘ್ರದಲ್ಲೇ 24 ಗಂಟೆ ನೀರು ಪೂರೈಕೆ
ಮಂಗಳೂರು, ಜುಲೈ 29 : ಈ ಬಾರಿಯ ಬೇಸಿಗೆಯಲ್ಲಿ ನೀರಿನ ಬವಣೆ ಅನುಭವಿಸಿದ್ದ ಮಂಗಳೂರು ನಗರದ ನಿವಾಸಿಗಳಿಗೆ ಇನ್ನೂ ನಿರಂತರವಾಗಿ ನೀರಿನ ಸೌಕರ್ಯ ದೊರೆಯಲಿದೆ. ನಿತ್ಯ ನೀರು ಪೂರೈಸುವ ನಿರಂತರ ನೀರು ಯೋಜನೆಯ ಅನುಷ್ಟಾನಕ್ಕೆ ಮಂಗಳೂರು ಮಹಾನಗರ ಪಾಲಿಕೆ ಸಿದ್ಧತೆ ಆರಂಭಿಸಿದೆ.
ಏಷ್ಯಾ ಅಭಿವೃದ್ಧಿ ಬ್ಯಾಂಕ್ನ (ಎಡಿಬಿ) 2ನೇ ಹಂತದ ಜಲಸಿರಿ ಯೋಜನೆಯಡಿ ಮಹಾನಗರ ವ್ಯಾಪ್ತಿಯಲ್ಲಿ ನಿರಂತರ ನೀರು ಯೋಜನೆ ಅನುಷ್ಟಾನ ಗೊಳಿಸಲಾಗುತ್ತದೆ. ಈಗಾಗಲೇ ಯೋಜನೆಗಾಗಿ ಸರ್ಕಾರ 160 ಕೋಟಿ ರೂ.ಹಣ ಮಂಜೂರು ಮಾಡಿದೆ.[ಬಯಲು ಶೌಚ ಮುಕ್ತ ನಗರವಾಗಿ ಮಂಗಳೂರು ಘೋಷಣೆ]
ಯೋಜನೆಯ ಅನುಷ್ಟಾನಕ್ಕೆ ಅಗತ್ಯ ಸಿದ್ದತೆಗಳು ಆರಂಭವಾಗಿದ್ದು, ನೀರು ಪೂರೈಕೆಗೆ ಅಗತ್ಯವಾಗಿರುವ ಓವರ್ ಹೆಡ್ ಟ್ಯಾಂಕರ್ಗಳ ನಿರ್ಮಾಣ ಮಾಡಲು ಭೂ ಸ್ವಾಧೀನಕ್ಕೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.[ಮಂಗಳೂರು : ತುಂಬೆ ವೆಂಟೆಡ್ ಡ್ಯಾಂ ಕಾಮಗಾರಿ ಪೂರ್ಣ]
ಬೆಳೆಯುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ನಗರ ವ್ಯಾಪ್ತಿಯಲ್ಲಿ ದಿನದ 24 ಗಂಟೆ ನೀರು ಪೂರೈಸುವ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಕೋಲ್ಕತ್ತಾದ ಜಿ.ಕೆ.ಡಬ್ಲ್ಯೂ ಕನ್ಸಲ್ಟೆಂಟ್ ಕಂಪೆನಿಯು ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಈ ಯೋಜನೆಯಡಿ ಮೇಲ್ಮಟ್ಟ ಹಾಗೂ ಕೆಳಮಟ್ಟದ ಜಲಸಂಗ್ರಹಾಗಾರಗಳನ್ನು ನಿರ್ಮಿಸಲು ಸಲಹೆ ನೀಡಲಾಗಿದೆ......[ನೇತ್ರಾವತಿ ನದಿಗೆ ಕಾವಲು!]
ನೀರು ಶುದ್ಧೀಕರಣ ಘಟಕ ನಿರ್ಮಾಣ
ತುಂಬೆ ಅಣೆಕಟ್ಟಿನಿಂದ ನಿರ್ಮಾಣವಾಗುವ ನೀರಿನ ಶುದ್ಧಿಕರಣಕ್ಕೆ ಈ ಯೋಜನೆಯಡಿ ಒತ್ತು ನೀಡಲಾಗಿದೆ. ರಾಮಲ್ ಕಟ್ಟೆಯ 18 ಎಂಜಿಡಿ ಪ್ರಥಮ ಹಂತದ ನೀರು ಶುದ್ಧೀಕರಣ ಘಟಕದಿಂದ ಬೆಂದೂರ್ ವೆಲ್ ನೀರು ಘಟಕದ ವರೆಗಿನ ಸುಮಾರು 17 ಕಿ.ಮೀ.ನಷ್ಟು ಹಳೆಯ ಪೈಪ್ಲೈನ್ ಅನ್ನು ಬದಲಾವಣೆ ಮಾಡಬೇಕಾಗಿದೆ.
ಪೈಪ್ ಲೈನ್ ಬದಲಾವಣೆ
ಬೆಂದೂರ್ ವೆಲ್ನಲ್ಲಿರುವ 40.85 ಎಂಜಿಡಿ ನೀರು ಶುದ್ಧೀಕರಣ ಘಟಕವನ್ನು ನವೀಕರಿಸುವ ಪ್ರಸ್ತಾವನೆಯನ್ನು ಹೊಸ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಹಳೆಯದಾಗಿರುವ 25.31 ಕಿ.ಮೀ.ಮುಖ್ಯ ಕೊಳವೆ ಮಾರ್ಗದ ಪೈಪ್ಲೈನ್ ಹಾಗೂ ಸುಮಾರು 60 ಕಿ.ಮೀ. ನಷ್ಟು ವಿತರಣಾ ಕೊಳವೆ ಮಾರ್ಗದ ಪೈಪ್ಲೈನ್ ಗಳನ್ನು ಸಂಪೂರ್ಣ ಬದಲಾಯಿಸುವುದು ಅವಶ್ಯಕವಾಗಿದೆ.
24 ಓವರ್ ಹೆಡ್ ಟ್ಯಾಂಕ್ ನಿರ್ಮಾಣ
ಸದ್ಯದ ನೀರು ಸಂಗ್ರಹಾಗಾರಗಳ ಜತೆಗೆ ಹೆಚ್ಚುವರಿಯಾಗಿ 24 ಓವರ್ ಹೆಡ್ ಟ್ಯಾಂಕ್ಗಳ ನಿರ್ಮಾಣ ಮಾಡಬೇಕು ಎಂದು ವರದಿ ಹೇಳಿದೆ. ನಗರದ ಜಲ್ಲಿಗುಡ್ಡೆ, ನೆಕ್ಕಿಲಗುಡ್ಡೆ, ಲೋಹಿತನಗರ, ಜಯನಗರ, ಶಕ್ತಿನಗರ, ವಾಮಂಜೂರು, ಸಂತೋಷನಗರ, ಲೇಡಿಹಿಲ್, ಡೊಮಿನಿಕ್ ಚರ್ಚ್ ರಸ್ತೆ, ಮಂಗಳಾನಗರ, ಅಮೃತನಗರ, ನೆಹರು ಮೈದಾನದ ಮಕ್ಕಳ ಉದ್ಯಾನ, ನಂದಿಗುಡ್ಡೆ ವಲೆನ್ಸಿಯ, ಸುರತ್ಕಲ್ ಸೇರಿದಂತೆ 24 ಕಡೆಗಳಲ್ಲಿ ಹೊಸ ಟ್ಯಾಂಕ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಸ್ಥಳವಕಾಶ ಬೇಕಾಗಿದೆ
24 ಸ್ಥಳಗಳ ಪೈಕಿ 16ರಲ್ಲಿ ಸರ್ಕಾರಿ ಹಾಗೂ ಮಹಾನಗರ ಪಾಲಿಕೆಯ ಜಾಗೆಯಿದ್ದು, ಇನ್ನೂ 8 ಸ್ಥಳಗಳಲ್ಲಿ ಖಾಸಗಿ ಜಮೀನನ್ನು ಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಶೀಘ್ರ ಭೂಸ್ವಾಧೀನ ಪ್ರಕ್ರಿಯೆ ನಿರ್ವಹಿಸಲು ಸೂಚಿಸಲಾಗಿದೆ.
ಗ್ರಾಮಗಳಿಗೂ ನೀರು ಪೂರೈಕೆ
ತುಂಬೆಯಿಂದ ನಗರಕ್ಕೆ ನೀರು ಪೂರೈಸುವ 2.5 ಎಂ.ಜಿ.ಡಿ ಸಾಮರ್ಥ್ಯದ ಪೈಪ್ಲೈನ್ ಹಾದು ಹೋಗುವ ನಾಲ್ಕು ಗ್ರಾಮಗಳಿಗೆ ಈ ಯೋಜನೆಯಡಿ ನೀರು ಸರಬರಾಜು ಮಾಡಲಾಗುತ್ತಿದೆ. 'ಕೊಳವೆ ಮಾರ್ಗ ಹಾದು ಬಂದಿರುವ ಮೂಲ್ಕಿ ಮತ್ತು ಉಳ್ಳಾಲದಲ್ಲಿ ಮಹಾನಗರ ಪಾಲಿಕೆಯಿಂದ ಮೀಟರ್ ಅಳವಡಿಸಿ, ನೀರು ಪೂರೈಸಲಾಗುತ್ತಿದೆ. ಅದೇ ಮಾದರಿಯಲ್ಲಿ ಈ ನಾಲ್ಕು ಗ್ರಾಮಗಳಲ್ಲಿ ಮೀಟರ್ ಅಳವಡಿಸುವ ಮೂಲಕ ನೀರು ಪೂರೈಸಬೇಕು' ಎನ್ನುತ್ತಾರೆ ಪಾಲಿಕೆಯ ಸದಸ್ಯ ಮಹಾಬಲ ಮಾರ್ಲ.