ಮಂಗಳೂರಿನಲ್ಲಿ 4 ಕಳ್ಳರ ಬಂಧನ, 7 ಬೈಕ್, 5 ಮೊಬೈಲ್ ವಶ
ಮಂಗಳೂರು, ಡಿಸೆಂಬರ್ 25: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ 4 ಜನ ಕಳ್ಳರನ್ನು ಇತ್ತೀಚೆಗೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕದ್ರಿ ಶಿವಬಾಗ್ ನಿವಾಸಿ ಅಫ್ರಿಮ್ ಶಿಯಾದ್ (20), ಮಿಸ್ಬಾ ಕಾಲೇಜು ಬಳಿ ನಿವಾಸಿ ಹಂಝ (19), ಮಂಗಳೂರು ಟಿ.ಟಿ ರಸ್ತೆಯ ರಾಘವೇಂದ್ರ ಮಠದ ಬಾಲಸುಬ್ರಮಣ್ಯ (37) ಹಾಗೂ ಬಂಟ್ವಾಳ ತಾಲೂಕಿನ ನಾಗನಾಗಿನಿ ಕ್ಷೇತ್ರದ ಬಳಿಯ ನಿವಾಸಿ ಕಾರ್ತಿಕ್ ಸುವರ್ಣ (20) ಬಂಧಿತ ಆರೋಪಿಗಳು.
ಆರೋಪಿಗಳಿಂದ 5 ಮೊಬೈಲ್ ಫೋನ್, 7 ದ್ವಿಚಕ್ರ ವಾಹನ ಸಹಿತ ಒಟ್ಟು 4,67,000 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಹಿಂದೆ ಹಲವು ಬೈಕ್, ಮನೆ, ಸರಗಳ್ಳತನ ಮಾಡಿರುವ ಪ್ರಕರಣಗಳು ಈ ಆರೋಪಿಗಳ ಮೇಲಿವೆ.
ಇದೇ ಡಿಸೆಂಬರ್ 23 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿಶೂಲೇಶ್ವರ ದೇವಸ್ಥಾನದ ಬಳಿ ನೋಂದಣಿ ಸಂಖ್ಯೆ ಇಲ್ಲದ ರಾಯಲ್ ಎನ್ಫೀಲ್ಡ್ ದ್ವಿಚಕ್ರ ವಾಹನದೊಂದಿಗೆ ಅನುಮಾನಸ್ಪದ ರೀತಿಯಲ್ಲಿ ನಿಂತಿದ್ದ ಈ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಒಂದು ರೋಯಲ್ ಎನ್ ಫೀಲ್ಡ್ ಬುಲೆಟ್ ಹಾಗೂ ಯಮಹಾ ಎಫ್ ಝೆಡ್ ಬೈಕನ್ನ ಸುಮಾರು 10 ದಿನಗಳ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್ ಹಾಗೂ ಮೇರ್ಲಪದವುನಲ್ಲಿ ಮತ್ತು ಇತರೆ ಬೈಕ್ ಗಳನ್ನು ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ್ದರು.
ಅಫ್ರಿಮ್ ಶಿಯಾದ್ ಎಂಬಾತ ಈ ಹಿಂದೆ 2015ರಲ್ಲಿ ಬೈಕ್ ಕಳವು, ಸರಕಳ್ಳತನ ಮುಂತಾದ 20 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನನ್ನು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದರು.
ಅಲ್ಲದೇ ಈತ 10 ತಿಂಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ. ಮತ್ತೆ ಬೈಕ್ ಕಳ್ಳತನದಲ್ಲಿ ಸಿಕ್ಕಿಕೊಂಡು ಜೈಲು ಸೇರಿದ್ದಾನೆ.
ಆರೋಪಿ ಹಂಝ ಎಂಬಾತ ಈ ಹಿಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಅಲ್ಲದೇ ಈತನ ವಿರುದ್ಧ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ನಡೆಸಿದ ಪ್ರಕರಣ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಬೈಕ್ ಕಳ್ಳತನ ಪ್ರಕರಣದಲ್ಲಿ ದಾಖಲಾಗಿತ್ತು.
ಇನ್ನೋರ್ವ ಆರೋಪಿ ಬಾಲಸುಬ್ರಮಣ್ಯ ಎಂಬಾತನ ವಿರುದ್ಧ ಬಜ್ಪೆ, ಮಂಗಳೂರು ಉತ್ತರ, ಮಂಗಳೂರು ಪೂರ್ವ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 6 ಮನೆ ಕನ್ನ ಕಳವು ಪ್ರಕರಣ ದಾಖಲಾಗಿವೆ.
ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.