ಮೀನುಗಾರರಿಗೆ ಬಯೋಮೆಟ್ರಿಕ್ ಗುರುತಿನ ಚೀಟಿ ಕಡ್ಡಾಯ
ಮಂಗಳೂರು, ಜೂನ್ 14 : ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರು ಬಯೋಮೆಟ್ರಿಕ್ ಗುರುತಿನ ಚೀಟಿಯನ್ನು ಹೊಂದುವುದು ಕಡ್ಡಾಯವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಜೂ. 20ರಿಂದ 30ರವರೆಗೆ ಅಲ್ಲಲ್ಲಿ ಶಿಬಿರಗಳನ್ನು ಮಾಡಿ ಗುರುತಿನ ಚೀಟಿ ವಿತರಿಸಲು ಮೀನುಗಾರಿಕಾ ಇಲಾಖೆ ನಿರ್ಧರಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಮೀನುಗಾರಿಕೆ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಮೀನುಗಾರರ ಸಮಸ್ಯೆಗಳ ಕುರಿತಂತೆ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕರಾದ ಎಚ್.ಎಸ್. ವೀರಪ್ಪ ಗೌಡ ಅವರು ಗುರುತಿನ ಚೀಟಿ ಕಡ್ಡಾಯ ಎಂದು ಹೇಳಿದರು. [ಮಂಗಳೂರಿಗೆ ಬರುತ್ತಿದೆ ಚೆನ್ನೈ, ಆಂಧ್ರದ ಮೀನು!]
'ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕರಾವಳಿ ಭಾಗದ ಸುರಕ್ಷತೆಯ ಬಗ್ಗೆ ಕರಾವಳಿ ಪಡೆ ಗಂಭೀರವಾಗಿದ್ದು, ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಇದನ್ನು ವಿತರಿಸುವ ಕಾರ್ಯ ನಡೆಯುತ್ತಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಎಲ್ಲಾ ಮೀನುಗಾರರು ಬಯೋಮೆಟ್ರಿಕ್ ಕಾರ್ಡ್ ಹೊಂದಿರುವುದನ್ನು ಸಂಬಂಧಪಟ್ಟ ದೋಣಿಗಳ ಮಾಲೀಕರು ಖಾತರಿಪಡಿಸಿಕೊಳ್ಳಬೇಕು' ಎಂದರು. [ಕರಾವಳಿ ಬಂದರಿಗೆ ಬೊಂಬಾಟ್ ಬೂತಾಯಿ!]
'ಮೀನುಗಾರಿಕಾ ಇಲಾಖೆಯು ಜೂ.20ರಿಂದ 10 ದಿನಗಳ ಕಾಲ ಕರಾವಳಿ ಕರ್ನಾಟಕದಾದ್ಯಂತ ಬಂದರು, ಬೀಚ್ ಪ್ರದೇಶಗಳಲ್ಲಿ ಶಿಬಿರವನ್ನು ಹಮ್ಮಿಕೊಂಡು ಬಯೋ ಮೆಟ್ರಿಕ್ ಕಾರ್ಡ್ ವಿತರಿಸಲಿದೆ' ಎಂದು ಎಚ್.ಎಸ್. ವೀರಪ್ಪ ಗೌಡ ಅವರು ಹೇಳಿದರು. [ಕರಾವಳಿಗೆ ಬಂತು ಒಮಾನ್ ಬೂತಾಯಿ ಮೀನು!]
ಕರಾವಳಿ ಕರ್ನಾಟಕದ ದೋಣಿಗಳಲ್ಲಿ ಹೊರಗಿನ ರಾಜ್ಯಗಳಿಂದ ಬಂದು ದುಡಿಯುವ ಮೀನುಗಾರರು ಬಹಳಷ್ಟಿದ್ದು ಅವರಿಗೂ ಬಯೋ ಮೆಟ್ರಿಕ್ ಕಾರ್ಡ್ ಒದಗಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಭಯ ಚಂದ್ರಜೈನ್ ಅವರು, 'ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಸದ್ಯ, ಶಿಬಿರದಲ್ಲಿ ರಾಜ್ಯದ ಮೀನುಗಾರರಿಗೆ ಮಾತ್ರವೇ ಬಯೋಮೆಟ್ರಿಕ್ ಕಾರ್ಡ್ ನೀಡಲಾಗುವುದು' ಎಂದರು.
ಸಮಸ್ಯೆಗಳ ಸರಮಾಲೆ : ಸಭೆಯಲ್ಲಿ ಭಾಗವಹಿಸಿದ್ದ ಮೀನುಗಾರರು ತಮ್ಮ ಹಲವು ಸಮಸ್ಯೆಗಳನ್ನು ಹೇಳಿಕೊಂಡರು. ಮಾಸಿಕ ಸಬ್ಸಿಡಿ ಸೀಮೆಎಣ್ಣೆ ನೀಡುವಲ್ಲಿ ಆಹಾರ ಇಲಾಖೆಯಿಂದ ತಕರಾರು. ತಿಂಗಳ ಅಂತ್ಯದವರೆಗೆ ಅವಕಾಶವಿದ್ದರೂ, ತಿಂಗಳ 20ನೆ ತಾರೀಕಿನೊಳಗೆ ಪಡೆಯಬೇಕೆಂಬ ಒತ್ತಡ ಹಾಕಲಾಗುತ್ತಿದೆ ಎಂದು ದೂರಿದರು.