ಕುಮಾರಧಾರಾ ನದಿಗೆ ಬಿದ್ದ ಟ್ಯಾಂಕರ್, ಪರದಾಡಿದ ಪ್ರಯಾಣಿಕರು
ಮಂಗಳೂರು, ಆಗಸ್ಟ್ 11 : ಗ್ಯಾಸ್ ಟ್ಯಾಂಕರ್ ಕುಮಾರಧಾರಾ ನದಿಗೆ ಉರುಳಿ ಬಿದಿದ್ದರಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು 24 ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು. ಟ್ಯಾಂಕರ್ ಉರುಳಿಬಿದ್ದ ಸ್ಥಳದಲ್ಲಿ ಸೇತುವೆ ಬಿರುಕು ಬಿಟ್ಟಿದೆ ಎಂಬ ಶಂಕೆ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಎಸ್.ಟಿ.ಪ್ರಕಾಶ್ ನೇತೃತ್ವದ ತಜ್ಞ ಇಂಜಿನಿಯರ್ಗಳ ತಂಡ ಸೇತುವೆ ಸುರಕ್ಷಿತವಾಗಿದೆ ಎಂದು ಹೇಳಿದ ಬಳಿಕ ವಾಹನ ಸಂಚಾರವನ್ನು ಪುನಃ ಆರಂಭಿಸಲಾಗಿದೆ. ಸಂಚಾರ ಸ್ಥಗಿತಗೊಂಡ ಕಾರಣ ಭಾರೀ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು.[ಕುಮಾರಧಾರ ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್]
ಮಂಗಳೂರಿನಿಂದ ಬೆಂಗಳೂರಿಗೆ ಗ್ಯಾಸ್ ಸಾಗಣೆ ಮಾಡುತ್ತಿದ್ದ ಎಚ್ಪಿಎಲ್ ಕಂಪನಿಗೆ ಸೇರಿದ ಟ್ಯಾಂಕರ್ ಶಿರಾಡಿ ಗ್ರಾಮದ ಉದನೆ ಸಮೀಪ ಕುಮಾರಧಾರಾ ನದಿಗೆ ಬಿದ್ದಿತ್ತು. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಟ್ಯಾಂಕರ್ ಬಿದ್ದಿದ್ದು, ಬುಧವಾರ ಮಧ್ಯಾಹ್ನದ ತನಕ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು.
ಹೆದ್ದಾರಿ ಬಂದ್ ಆದ ಹಿನ್ನಲೆಯಲ್ಲಿ ಬಸ್ಸು, ಇತರೆ ಲಘು ವಾಹನಗಳು ಪರ್ಯಾಯ ರಸ್ತೆಯ ಮೂಲಕ ಹೋಗುತ್ತಿದ್ದವು. ಆದರೆ, ಭಾರೀ ವಾಹನಗಳು, ಟ್ಯಾಂಕರ್ ಹೆದ್ದಾರಿ ಉದ್ದಕ್ಕೂ ಅಲ್ಲಲ್ಲಿ ನಿಲುಗಡೆ ಗೊಂಡಿದ್ದವು. ಸಂಚಾರ ಮುಕ್ತವಾದ ಬಳಿಕ ಓಡಾಟ ಆರಂಭಿಸಿವೆ......
ನದಿಗೆ ಬಿದ್ದ ಟ್ಯಾಂಕರ್, ಸಂಚಾರ ಬಂದ್
ಮಂಗಳೂರಿನಿಂದ ಬೆಂಗಳೂರಿಗೆ ಗ್ಯಾಸ್ ಸಾಗಣೆ ಮಾಡುತ್ತಿದ್ದ ಎಚ್ಪಿಎಲ್ ಕಂಪನಿಗೆ ಸೇರಿದ ಟ್ಯಾಂಕರ್ ಶಿರಾಡಿ ಗ್ರಾಮದ ಉದನೆ ಸಮೀಪ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಮಾರಧಾರಾ ನದಿಗೆ ಬಿದ್ದಿತ್ತು. ಇದರಿಂದಾಗಿ ಬುಧವಾರ ಮಧ್ಯಾಹ್ನ 3.30ರ ತನಕ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಸೇತುವೆ ಬಿರುಕು ಬಿಟ್ಟಿರುವ ಶಂಕೆ
ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಈ ಮಾರ್ಗದಲ್ಲಿ ಟ್ಯಾಂಕರ್ ಬಿದ್ದ ಸ್ಥಳದಲ್ಲಿ ಸೇತುವೆ ಬಿರುಕು ಬಿಟ್ಟಿದೆ ಎಂಬ ಅನುಮಾನವಿತ್ತು. ಆದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಮಧ್ಯಾಹ್ನದ ತಕನ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿತ್ತು.
ತಜ್ಞರಿಂದ ಪರಿಶೀಲನೆ
ಬುಧವಾರ ಮಧ್ಯಾಹ್ನ ಬೆಂಗಳೂರಿನಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಎಸ್.ಟಿ. ಪ್ರಕಾಶ್ ನೇತೃತ್ವದ ತಜ್ಞ ಇಂಜಿನಿಯರ್ಗಳ ತಂಡ ಸ್ಥಳಕ್ಕೆ ಆಗಮಿಸಿತು. ಪರಿಶೀಲನೆ ನಡೆಸಿದ ತಂಡ ಸೇತುವೆಯಲ್ಲಿ ಘನ ವಾಹನ ಸಂಚಾರಕ್ಕೆ ಅಡ್ಡಿಯಿಲ್ಲ ಎಂದು ಒಪ್ಪಿಗೆ ನೀಡಿದ ಬಳಿಕ ವಾಹನ ಸಂಚಾರವನ್ನು ಪುನಃ ಆರಂಭಿಸಲಾಯಿತು.
ಪರದಾಡಿದ ಪ್ರಯಾಣಿಕರು
ಬುಲೆಟ್ ಟ್ಯಾಂಕರ್ ಚಾಲಕನ ನಿಯಂತ್ರಣ ಕಳೆದುಕೊಂಡು ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ, ಇಂಜಿನ್ ಬೇರ್ಪಟ್ಟು ಟ್ಯಾಂಕರ್ ಮಾತ್ರ ಹೊಳೆಗೆ ಬಿದ್ದಿತ್ತು. ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗಿತ್ತು. ಸೇತುವೆ ಮೇಲಿನ ಸಂಚಾರವನ್ನು ಬಂದ್ ಮಾಡಿದ್ದರಿಂದ, ಪ್ರಯಾಣಿಕರು ಪರದಾಡಿದರು.