ಆತ ಆಫ್ರಿಕಾದಲ್ಲಿ ಪೈಲಟ್, ದಕ್ಷಿಣ ಕನ್ನಡದಲ್ಲಿ ದೈವಾರಾಧನೆ ಪಾತ್ರಿ
ಮನೋಜ್ ಪೂಜಾರಿ ಮೂಲತಃ ಮಂಗಳೂರಿನವರು. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಪೈಲಟ್ ಆಗಿದ್ದಾರೆ. ಆದರೆ ದಕ್ಷಿಣ ಕನ್ನಡಕ್ಕೆ ಬಂದಾಗ ದೈವಾರಾಧನೆ ಪಾತ್ರಿ ಆಗುತ್ತಾರೆ. ಇಂಥ ಬೆರಗು ಮೂಡಿಸುವಂಥ ವಿಶೇಷ ವರದಿಯನ್ನು ಐಸಾಕ್ ರಿಚರ್ಡ್ ಮಾಡಿದ್ದಾರೆ
ಮಂಗಳೂರು, ಮಾರ್ಚ್ 22: ಎಲ್ಲಿಯ ಪೈಲಟ್, ಅದೆಲ್ಲಿಯ ದೈವಾರಾಧಾನೆ? ಮಂಗಳೂರು ಮೂಲದ ಯುವಕನ ಬಗ್ಗೆ ಬೆರಗು ಮೂಡಿಸುವಂಥ ವರದಿಯಿದು. ಈತ ವೃತ್ತಿಯಲ್ಲಿ ಪೈಲಟ್, ಅದೂ ದಕ್ಷಿಣ ಆಫ್ರಿಕಾದಲ್ಲಿ. ಆದರೆ ಕರಾವಳಿಯಲ್ಲಿ ದೈವಾರಾಧನೆ ಮಾಡುವ ಪಾತ್ರಿ.
29 ವರ್ಷದ ಮನೋಜ್ ಪೂಜಾರಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಎಳತ್ತೂರು ನಿವಾಸಿ. ತುಳುನಾಡಿನ ಕಾರಣಿಕ ವೀರ ಪುರುಷರಾದ ಕಾಂತಾಬಾರೆ ಬೂದಾಬಾರೆಯವರ ಮೂಲ್ಕಿ ಕೊಲ್ಲೂರು ಗರಡಿಯ ಗುಡ್ಡೆ ಜುಮಾದಿ (ಧೂಮಾವತಿ) ದೈವದ ಪಾತ್ರಿಯೂ ಹೌದು. ಶಿಮಂತೂರು ಮಜಲಗುತ್ತುವಿನ ಜಾರಂದಾಯ ದೈವದ ಮುಗ(ಮೊಗ) ಹಿಡಿಯುವ ಕಾಯಕ ನಿರ್ವಹಿಸುವ ಮೂಲಕ ಮನೋಜ್ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದಾರೆ.
ನಿಮಗೆ ಗೊತ್ತಿರಲಿ, ಮಂಗಳೂರಿನ ಈ ಯುವಕ ದಕ್ಷಿಣ ಆಫ್ರಿಕಾದ ಆರಿಕ್ ಎರ್ ವಿಮಾನ ಯಾನ ಸಂಸ್ಥೆಯಲ್ಲಿ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡಕ್ಕೆ ಬಂದರೆ ದೈವ ಪಾತ್ರಿಯಾಗಿ ದೈವ ಭಕ್ತಿಯ ಪ್ರತೀಕವಾಗಿ ಗಮನ ಸೆಳೆಯುತ್ತಾರೆ.[ಭೂತಕೋಲಕ್ಕೆ ಅಪಹಾಸ್ಯ, ಸೃಜನ್ ವಿರುದ್ಧ ಕರಾವಳಿಗರ ಆಕ್ರೋಶ]
ಮನೋಜ್ ಕುಟುಂಬದವರು ಕಾಂತಾಬಾರೆ ಬೂದಾಬಾರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆದಿ ಕಿಲ್ಲಾಡಿ, ನಡುಮಾನಾಡಿ (ಮಾನಂಪಾಡಿ) ಹಾಗೂ ಪುರುಪು ಗುಡ್ಡೆಸಾನಗಳಲ್ಲಿ ಮಾತ್ರ ಇರುವ ಗುಡ್ಡೆ ಜುಮಾದಿ (ಗುಡ್ಡೆ ಧೂಮಾವತಿ) ದೈವದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಆರಾಧನಾ ಕ್ರಮವನ್ನು ಕಲಿತ ಮನೋಜ್
ಕಳೆದ ವರ್ಷ ದೈವದಿಂದ ಎಣ್ಣೆ ಬೂಳ್ಯ (ಅನುಮತಿ) ಪಡೆದು, ಮಾರ್ಚ್ 6ರಂದು ಗಡಿ ಹಿಡಿದ ಮನೋಜ್, ಮಾನಾಡಿಯ ದೈವಪಾತ್ರಿ ಯಾದವ ಪೂಜಾರಿ ಅವರಿಂದ ಆರಾಧನಾ ಕ್ರಮವನ್ನು ಕಲಿತಿದ್ದಾರೆ. ಮಾರ್ಚ್ 19ರ ಭಾನುವಾರ ನಡೆದ ತುಡರಬಲಿ ಸಂದರ್ಭ ದೈವಪಾತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಕೋಲವೇ ನೋಡಿರಲಿಲ್ಲ
ಮಾರ್ಚ್ 25ರಂದು ಕಾಂತಾಬಾರೆ ಬೂದಾಬಾರೆ ದೈವಸ್ಥಾನದಲ್ಲಿ ನಡೆಯಲಿರುವ ನೇಮದಲ್ಲಿ ದೈವಪಾತ್ರಿಯಾಗಿ ಸೇವೆ ಮಾಡಲಿದ್ದಾರೆ. ಮನೋಜ್ 2003ರಲ್ಲಿ ದೈವದ ಪೂಜೆಯ ಸೇವೆಗೆ ತೊಡಗಿಕೊಳ್ಳುವವರೆಗೆ ಸರಿಯಾಗಿ ಕೋಲಗಳನ್ನು ನೋಡಿದವರೇ ಅಲ್ಲ. ಆದರೆ 2004ರಲ್ಲಿ ಎಳತ್ತೂರು ಮಜಲಗುತ್ತುವಿನ ಜಾರಂದಾಯ ದೈವದ ಮುಗ(ಮೊಗ) ಹಿಡಿಯುವ ಕಾಯಕವನ್ನು ಆರಂಭಿಸಿದ್ದರು.
2010ರಲ್ಲಿ ಪೈಲಟ್ ಲೆಸೆನ್ಸ್
ಮುಲ್ಕಿಯ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷ ಣ ಕಲಿತ ಮನೋಜ್, ಮುಲ್ಕಿ ವಿಜಯಾ ಕಾಲೇಜಿನಲ್ಲಿ ಪಿಯುಸಿ ಪೂರೈಸಿದರು. ಡೆಹ್ರಾಡೂನ್ ನಲ್ಲಿ ಎಎಂಇ ಕಲಿತು, 2008ರಲ್ಲಿ ಪೈಲೆಟ್ ಆಗಲು ತರಬೇತಿಗೆ ಸೇರಿದ್ದರು. 2010ರಲ್ಲಿ ಲೈಸನ್ಸ್ ಸಿಕ್ಕಿತು. ಬಳಿಕ ದಕ್ಷಿಣ ಆಫ್ರಿಕಾದ ಪೂರ್ವಭಾಗದಲ್ಲಿ ಪೈಲೆಟ್ ಆಗಿ ಸೇರ್ಪಡೆಗೊಂಡರು.
ಆರಿಕ್ ಏರ್ ಕಂಪೆನಿಯಲ್ಲಿ ಪೈಲಟ್
ಆ ನಂತರದ ದಿನಗಳಲ್ಲಿ ತಾಂಜಾನಿಯಾ, ಉಗಾಂಡಾ, ಕಾಂಗೋ, ರೇಮುಂಡಾ ದೇಶಗಳಲ್ಲಿ ಸುತ್ತಾಡುವ ಆರಿಕ್ ಏರ್ ಕಂಪೆನಿಯಲ್ಲಿ ಪೈಲೆಟ್ ಆಗುವ ಮುಂಚೆ ಜ್ಯೂಬಾ ಕಂಪನಿಯಲ್ಲಿ ಪೈಲೆಟ್ ಆಗಿದ್ದರು. ಇಂಗ್ಲಿಷ್, ಹಿಂದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು.
ದೈವ ನಂಬಿಕೆ ಹೆಚ್ಚು
ಆದರೂ ದೈವಾರಾಧನೆಗೆ ಭಕ್ತಿಯಿಂದ ತೊಡಗಿಸಿಕೊಂಡಿದ್ದಾರೆ. ವಿದ್ಯೆ, ಕಲಿಕೆ, ಉದ್ಯೋಗ ಯಾವುದೂ ದೈವಾರಾಧನೆ, ಪಾತ್ರಿಯಾಗಿ ತೊಡಗಿಸಿಕೊಳ್ಳುವುದಕ್ಕೆ ಅಡ್ಡಿ ಅಲ್ಲ, ಅದೂ ದೈವೇಚ್ಛೆಯಿಂದಲೇ ಇದೆಲ್ಲ ಆಗುವಂಥದ್ದು ಎಂದು ನಂಬಿ ನಡೆಯುತ್ತಿದ್ದಾರೆ.
ಆವೇಶ ವಿವರಿಸಲು ಆಗಲ್ಲ
ಈ ಬಗ್ಗೆ ಪ್ರತಿಕ್ರಿಯಿಸಿದ ಮನೋಜ್ ಪೂಜಾರಿ, ನಾನು ವೃತ್ತಿಯಲ್ಲಿ ಪೈಲೆಟ್ ಆಗಿದ್ದರೂ ನನಗೂ ದೈವ- ದೇವರ ಬಗ್ಗೆ ಅಪಾರ ನಂಬಿಕೆ ಭಕ್ತಿ ಇದೆ. ಎಳತ್ತೂರು ಜಾರಂದಾಯ ದೈವಸ್ಥಾನದಲ್ಲಿ ಮೊಗ ಹಿಡಿಯುವ ಸಂದರ್ಭ ನನ್ನ ಮೈಯೊಳಗೆ ದೈವದ ಆವೇಶವಾಗುವುದನ್ನು ವಿವರಿಸಲೂ ಆಗುವುದಿಲ್ಲ. ಆದರೆ ವಿದ್ಯುತ್ನಂತಹ ಶಕ್ತಿ ದೇಹದೊಳಗೆ ಬರುವಂತಹ ಅನುಭವವಾಗುತ್ತದೆ. ಆ ಮೇಲಿನದ್ದು ಗೊತ್ತಾಗುವುದಿಲ್ಲ. ವಿಮಾನದಲ್ಲಿ ಪೈಲಟ್ ಆದ ನನ್ನನ್ನು ನಂಬಿದ ದೈವಗಳು ರಕ್ಷ ಣೆ ನೀಡಿ, ಕಾಪಾಡಿವೆ. ದೈವಗಳು ಸತ್ಯ. ಅದರ ಅನುಭವಗಳೂ ಸತ್ಯ ಎಂದು ತಮ್ಮ ಮನದಾಳದ ಮಾತುಗಳನ್ನು ಮನೋಜ್ ಒನ್ಇಂಡಿಯಾ ಕನ್ನಡದ ಜತೆಗೆ ಹಂಚಿಕೊಂಡರು.