ಮಂಗಳೂರಿಗೆ ಕೇರಳ ಸಿಎಂ ಆಗಮನ: ಹಿಂದೂ ಸಂಘಟನೆಗಳ ವಿರೋಧ
ಮಂಗಳೂರು, ಫೆಬ್ರವರಿ 18: ಕರಾವಳಿಯ ಕೋಮು ಶಕ್ತಿಗಳ ಅಟ್ಟಹಾಸದ ವಿರುದ್ಧ ಸಿಪಿಎಂ ಪಕ್ಷ ಫೆ. 25ರಂದು ಮಂಗಳೂರಿನಲ್ಲಿ ಆಯೋಜಿಸಿರುವ ಐಕ್ಯತಾ ಮೆರವಣಿಗೆಗೆ ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯಂ ಆಗಮನವನ್ನು ಜಿಲ್ಲೆಯ ಹಿಂದೂ ಪರ ಸಂಘಟನೆಗಳು ವಿರೋಧಿಸಿ ಅದೇ ದಿನ (ಫೆ. 25) ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿವೆ.
ಸಾಮರಸ್ಯದ ಕರಾವಳಿಯಲ್ಲಿ ದಿನೇ ದಿನೇ ಕೋಮು ಶಕ್ತಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಇದರಿಂದ ಕರಾವಳಿಯಲ್ಲಿ ಅಶಾಂತಿ ನೆಲೆಸಿದೆ ಎಂದು ಆರೋಪಿಸಿ ಸಿಪಿಎಂ ನಗರದಲ್ಲಿ ಐಕ್ಯತಾ ಮೆರವಣಿಗೆ ಆಯೋಜಿಸಿದೆ. ಅದರಂತೆ ಫೆ.25 ರಂದು ಮಧ್ಯಾಹ್ನ ಬೃಹತ್ ಮೆರವಣಿಗೆಯ ಜತೆ ನೆಹರೂ ಮೈದಾನದಲ್ಲಿ ಭಾರೀ ಸಮಾವೇಶ ಆಯೋಜಿಸಲಾಗಿದೆ.[ಎಡರಂಗದ ಕೈಗೆ ಕೇರಳ, ಮುಖ್ಯಮಂತ್ರಿ ಗಾದಿ ಯಾರಿಗೆ?]
ಈ ಸಮಾವೇಶದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯಂ ಆಗಮಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ. ಆದರೆ ಪಿಣರಾಯಿ ಆಡಳಿತದಲ್ಲಿರೋ ಕೇರಳದಲ್ಲಿ ಹತ್ತಾರು ಹಿಂದೂಗಳ ಹತ್ಯೆ ನಡೆದಿದ್ದು, ಈ ಘಟನೆಗಳಿಗೆ ಕೇರಳ ಸಿಎಂ ಕಾರಣ ಅನ್ನೋದು ಅಲ್ಲಿನ ಹಿಂದೂ ಸಂಘಟನೆಗಳ ಆರೋಪ.[ಮಂಗಳೂರು ಬಂದ್ : ಸಂಚಾರ ಅಸ್ತವ್ಯಸ್ಥ, ಚಿತ್ರಗಳು]
ಹೀಗಾಗಿ ಯಾವುದೇ ಕಾರಣಕ್ಕೂ ಅವರು ಮಂಗಳೂರಿಗೆ ಬರಬಾರದು ಎಂದು ವಿಎಚ್ ಪಿ, ಬಜರಂಗದಳ ಮತ್ತು ಹಿಂಜಾವೆ ಆಗ್ರಹಿಸಿದೆ. ಅಲ್ಲದೆ ಅವರ ಆಗಮನವನ್ನು ವಿರೋಧಿಸಿ ಫೆ. 25ರಂದು ಸ್ವಯಂ ಪ್ರೇರಿತ ಮಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಅಲ್ಲದೆ ಅದೇ ದಿನ ಮಧ್ಯಾಹ್ನ ನಗರದಲ್ಲಿ ಬೃಹತ್ ಪ್ರತಿಭಟನೆಗೂ ಹಿಂದೂ ಸಂಘಟನೆಗಳು ನಿರ್ಧರಿಸಿವೆ ಎನ್ನಲಾಗಿದೆ.