ಬಿಡದ ಗಾಂಜಾ ಮಾರಾಟ ಚಾಳಿ: ಜಾಮೀನು ರದ್ದು
ಮಂಗಳೂರು, ಅಕ್ಟೋಬರ್, 26: ಗಾಂಜಾ ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದು, ಕೋರ್ಟ್ ನಿಂದ ಜಾಮೀನು ಪಡೆದು ಹಳೆ ಚಾಳಿ ಬಿಡದೆ ಮತ್ತೆ ಅದೇ ದಂಧೆ ನಡೆಸುತ್ತಿದ್ದ ಇಲ್ಲಿಯ ಅನ್ಸಾರಿ ರಸ್ತೆ ನಿವಾಸಿ ಫಾರೂಕ್ ಎಂಬಾತನಿಗೆ ಸ್ಥಳೀಯ ನ್ಯಾಯಲಯ ಜಾಮೀನು ರದ್ದುಗೊಳಿಸಿದೆ.
ಮಂಗಳೂರಿನ ಬಂದರು ಪ್ರದೇಶದ ಅನ್ಸಾರಿ ರಸ್ತೆ ನಿವಾಸಿಯಾಗಿದ್ದ ಈತ ಈ ಹಿಂದೆಯೂ ಗಾಂಜಾ ಮಾರಾಟ ಪ್ರಕರಣದಲ್ಲಿ ಸಿಲುಕಿ ಬಂಧಿತನಾಗಿದ್ದ, ಕೋರ್ಟ್ ನಿಂದ ಜಾಮೀನು ಪಡೆದು ಹೊರಬಂದ ಬಳಿಕವೂ ಮತ್ತೆ ಅದೇ ಕೆಲಸ ಮುಂದುವರೆಸಿದ್ದ.
ಆರೋಪಿ ಫಾರೂಕ್ ದುರ್ನಡೆತೆಯನ್ನು ಪರಿಗಣನೆಗೆ ತೆಗೆದುಕೊಂಡು ಮಂಜೂರು ಮಾಡಿದ್ದ ಜಾಮೀನು ರದ್ದುಗೊಳಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಮೂರ್ತಿ ಕೆ.ಎಸ್.ಬಿಳಗಿ ಅವರು ಆದೇಶ ಹೊರಡಿಸಿದ್ದಾರೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಾಂತಾರಾಮ್ ನೇತೃತ್ವದ ತಂಡ ಫಾರೂಕ್ ನನ್ನು 2015ರ ಜೂನ್ 28ರಂದು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಿತ್ತು.
ಕೆಲ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಜಾಮೀನು ಪಡೆದು ಹೊರಬಂದಿದ್ದ. ನಂತರ ಅದೇ ಚಾಳಿ ಮುಂದುವರೆಸಿದ್ದ. 2016ರ ಏಪ್ರಿಲ್ 27ರಂದು ಅದೇ ಆರೋಪದ ಮೇಲೆ ಪೊಲೀಸರು ಪುನಃ ಆತನನ್ನು ಬಂಧಿಸಿದ್ದರು.
ಎರಡನೇ ಪ್ರಕರಣದಲ್ಲೂ ಕೆಲವು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಫಾರೂಕ್ , ಜಾಮೀನು ಪಡೆದು ಬಿಡುಗಡೆಯಾಗಿದ್ದ. ನಂತರ ಮತ್ತೆ ಗಾಂಜಾ ಮಾರಾಟ ಆರಂಭಿಸಿದ್ದ.
ಈ ಕುರಿತು ಮಾಹಿತಿ ಕಲೆಹಾಕಿದ್ದ ಇನ್ಸ್ಪೆಕ್ಟರ್ ಶಾಂತಾರಾಮ್ ನೇತೃತ್ವದ ತಂಡ ಆರೋಪಿಗೆ ಜಾಮೀನು ಮಂಜೂರು ಮಾಡಿರುವ ಆದೇಶವನ್ನು ರದ್ದುಗೊಳಿಸಲು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಮೇರೆಗೆ ನ್ಯಾಯಾಲಯ ಜಾಮೀನು ರದ್ದುಗೊಳಿಸಿದೆ.