ಮಂಗಳೂರಿನಲ್ಲಿ ಬಯಲಾಯ್ತು ಜ್ಯೋತಿಷಿ ಕಾಮಚೇಷ್ಟೆ
ಮಂಗಳೂರು, ಜನವರಿ. 08 : ಅತ್ತಾವರದ ವೈಷ್ಣವಿ ಜ್ಯೋತಿಷ್ಯಾಲಯದ ರಾಮಕೃಷ್ಣ ಶರ್ಮ ತನ್ನ ಬಳಿ ಜ್ಯೋತಿಷ್ಯ ಕೇಳಲು ಬರುವ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಅತ್ತಾವರದಲ್ಲಿ ವೈಷ್ಣವಿ ಜ್ಯೋತಿಷ್ಯಾಲಯ ನಡೆಸುತ್ತಿರುವ ರಾಮಕೃಷ್ಣ ಶರ್ಮ ಎಂಬವರ ವಿರುದ್ಧ ಯುವತಿ ಓರ್ವಳು ಲೈಂಗಿಕ ಕಿರುಕುಳ ನೀಡಿದ್ದಾನೆಂದು ನಗರದ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನರೇಂದ್ರ ನಾಯಕ್ (ಅಖಿಲ ಭಾರತ ವಿಚಾರವಾದಿ ವೇದಿಕೆಯ ಅಧ್ಯಕ್ಷ) ಅವರು ಇತ್ತೀಚೆಗೆ ಜ್ಯೋತಿಷ್ಯಾಲಯದ ವಂಚನೆಯನ್ನು ಬಯಲಿಗೆಳೆಯವ ಉದ್ದೇಶದಿಂದ ಯುವತಿಯೊಬ್ಬಳನ್ನು ತನ್ನ ಮಗಳೆಂದು ಹೇಳಿಕೊಂಡು ಈತನ ಬಳಿ ಕರೆದುಕೊಂಡು ಹೋಗಿದ್ದರು.
ಅಲ್ಲಿ ಜ್ಯೋತಿಷಿಯು ಆಕೆಯ ಸಂತಾನಭಾಗ್ಯಕ್ಕೆ 10,000 ರು ಹಣವನ್ನು ಕೇಳಿದ್ದನು ಎನ್ನಲಾಗಿದೆ. ಈ ಬಗ್ಗೆ ಜ್ಯೋತಿಷಿಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಆತ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ.
ಈ ಸುದ್ದಿಯನ್ನು ತಿಳಿದ ಯುವತಿ ನರೇಂದ್ರ ನಾಯಕ್ರಿಗೆ ಕರೆ ಮಾಡಿ ಈ ಜ್ಯೋತಿಷಿಯಿಂದ ತನಗೂ ವಂಚನೆಯಾಗಿದೆ ಎಂದು ಹೇಳಿಕೊಂಡಿದ್ದರು
ನರೇಂದ್ರ ನಾಯಕ್ರ ಮಾರ್ಗದರ್ಶನದಲ್ಲಿ ಯುವತಿ ಭಾನುವಾರ ದಕ್ಷಿಣ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.