ಮೂಡಬಿದಿರೆಯಲ್ಲಿ 22ನೇ ಆಳ್ವಾಸ್ ವಿರಾಸತ್ ಸಂಭ್ರಮ
ಮೂಡುಬಿದಿರೆ, ಡಿಸೆಂಬರ್, 25: ಕಲೆ ಮತ್ತು ಸಂಸ್ಕೃತಿಯ ನಿತ್ಯೋತ್ಸವಕ್ಕೆ ವೇದಿಕೆಯಾಗುತ್ತಿರುವ ಜ್ಞಾನಕಾಶಿ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕಾಲ ಆಳ್ವಾಸ್ ವಿರಾಸತ್ ಗೆ ಗುರುವಾರ ಅದ್ದೂರಿ ಚಾಲನೆ ದೊರೆತಿದೆ.
ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುತ್ತಿರುವ 'ಆಳ್ವಾಸ್ ವಿರಾಸತ್-2015"ಗೆ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಹೆಗ್ಗಡೆ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸುವ ಗುಣಗಳನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ, ಸಂಗೀತದ ಮೂಲಕ ಬದುಕನ್ನು ಆಸ್ವಾದಿಸುವ ಕಲೆಯನ್ನು ಮಕ್ಕಳಿಗೆ ನೀಡುತ್ತಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಬಗ್ಗೆ ವಿಶ್ವದ ವಿಶ್ವ ವಿದ್ಯಾನಿಲಯಗಳು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು. ಇದಲ್ಲದೆ ಮಜ, ಮೋಜು ಇವುಗಳ ಬದಲಾಗಿ ಸಾತ್ವಿಕವಾದ ಕೆಲಸಗಳಲ್ಲಿ ತಮ್ಮನ್ನು ವಿನಿಯೋಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಾಜರಿದ್ದ ಗಣ್ಯರು
ರಾಜ್ಯ ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ,ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ, ಕೆನರಾ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಕೇಶ್ ಶರ್ಮ ಇದ್ದರು.
ಸಂಪೂರ್ಣ ಸಹಕಾರ
ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಆಡಳಿತ ನಿರ್ದೇಶಕ ಪಿ.ಜಯರಾಮ ಭಟ್, ಹೋಟೆಲ್ ಪೆನಿನ್ಸುಲಾ, ಮುಂಬೈ ಮತ್ತು ಯು.ಎ.ಇಯ ಆಡಳಿತ ನಿರ್ದೇಶಕ ಕರುಣಾಕರ ಆರ್ ಶೆಟ್ಟಿ, ಅದಾನಿ ಸಂಸ್ಥೆಯ ಎಂ.ಡಿ. (ವ್ಯವಸ್ಥಾಪಕ ನಿರ್ದೇಶಕ) ಶ್ರೀ ರಾಜೇಶ್, ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮುಂಬೈನ ಸುರೇಶ್ ಭಂಡಾರಿ, ಹೋಟೆಲ್ ಗೋಲ್ಡ್ ಫಿಂಚ್ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಅವರ ಉಪಸ್ಥಿತಿ ಇತ್ತು.
ಸಂಗೀತ ವೈಭವ
ಶ್ರೀ ಧನಲಕ್ಷ್ಮೀ ಸಂಸ್ಥೆ ಆಡಳಿತ ನಿರ್ದೇಶಕ ಕೆ. ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ಮೋಹನ ಆಳ್ವರ ಕುಟುಂಬಿಕರಾದ ಮೀನಾಕ್ಷಿ, ಜಯಕರ ಆಳ್ವ, ಬಾಲಕೃಷ್ಣ ಶೆಟ್ಟಿ, ಅಮಿತಾ ಶೆಟ್ಟಿ, ರಾಮಚಂದ್ರ ಶೆಟ್ಟಿ, ಊರ್ಮಿಳಾ ಶೆಟ್ಟಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
ಎಸ್ ಪಿಬಿಗೆ ಗೌರವ
ಖ್ಯಾತ ಹಿನ್ನಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ 22ನೇ ವರ್ಷದ ವಿರಾಸತ್ನ ಉದ್ಘಾಟನಾ ಸಮಾರಂಭದಲ್ಲಿ ಪ್ರತಿಷ್ಠಿತ 'ಆಳ್ವಾಸ್ ವಿರಾಸತ್ 2015' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, 1 ಲಕ್ಷ ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿತ್ತು.
ಸಂಗೀತ ಸಂಜೆ
ವಿಶೇಷವಾಗಿ ಕರ್ನಾಟಕದ ಹಿರಿಯ ಶಾಸ್ತ್ರೀಯ ಸಂಗೀತದ ವಿದ್ವಾಂಸರಾದ ಆರ್.ಕೆ.ಪದ್ಮನಾಭ ಶಾಸ್ತ್ರೀಯ ಸಂಗೀತದ ಗೌರವವನ್ನು ಸಮರ್ಪಿಸಿದರು. ನಂತರ ಸತ್ಯನಾರಾಯಣ ಪುಣಿಂಚಿತ್ತಾಯ ಮತ್ತು ಬಳಗದವರಿಂದ ಯಕ್ಷ ಸಂಗೀತ, ಆಳ್ವಾಸ್ ವಿದ್ಯಾರ್ಥಿಗಳಿಂದ ಯಕ್ಷ ನಮನ, ಮಣಿಪುರಿ ಮತ್ತು ಶ್ರೀಲಂಕಾದ ಕಲಾ ಗೌರವ ಹಾಗೂ ಭಾವ ಸಂಗೀತದ ಮೂಲಕ ಗಾನ ಗಂಧರ್ವರಿಗೆ ಅಭಿವಂದನೆ ಸಲ್ಲಿಸಲಾಯಿತು.
ಬಾಲಸುಬ್ರಹ್ಮಣ್ಯ ಮಾತು
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಸ್ಪಿಬಿ ಅವರು ನಾನು ಇಂತಹ ಸನ್ಮಾನವನ್ನು ನನ್ನ ಈವರೆಗಿನ ಜೀವನದಲ್ಲಿ ನೋಡಿಲ್ಲ ಹಾಗೂ ಇಂತಹ ಸನ್ಮಾನವನ್ನು ಯಾರೂ ಮಾಡಿಲ್ಲ. ಭವಿಷ್ಯದಲ್ಲಿ ಈ ರೀತಿಯ ಸನ್ಮಾನ ಮಾಡುತ್ತಾರೆಂಬ ನಂಬಿಕೆ ಕೂಡಾ ಇಲ್ಲ ಎಂದು ತಮ್ಮ ಮನದಾಳದಿಂದ ನುಡಿದರು.
ಕಲಾವಿದರ ಹಾಜರಿ
ಸ್ವಚ್ಛ ಪರಿಸರ ಮತ್ತು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಈ ವರ್ಷದ ಆಳ್ವಾಸ್ ವಿರಾಸತ್ನ ವಿಶೇಷ. ವಿದ್ಯಾಗಿರಿಯಿಂದ ಸಮೀಪದ ಪುತ್ತಿಗೆಯ ಆಳ್ವಾಸ್ ಆವರಣಕ್ಕೆ ವಿರಾಸತ್ ಮೊದಲ ಬಾರಿಗೆ ಲಗ್ಗೆ ಇರಿಸಿದ್ದು ಮೊದಲ ದಿನ್ದ ಮೊದಲ ಸಾಂಸ್ಕøತಿಕ ಕಾರ್ಯಕ್ರಮವಾಗಿ ನಾಲ್ಕು ವಯೋಲಿನ್ಗಳ ವಿಶೇಷ ಫ್ಯೂಜನ್ "ನಾದಸುರಭಿ" ಪ್ರಸ್ತುತಗೊಂಡಿತು.
ಸಂಗೀತ ಲೋಕ
ಪದ್ಮಶ್ರೀ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ತಂಡ ಬೆಂಗಳೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವು ಸಂಗೀತಾಸಕ್ತರನ್ನು ಸಂಗೀತ ಲೋಕಕ್ಕೆ ಕರೆದೊಯ್ಯಿತು.
ನೆರೆದ ಜನಸಮೂಹ
ಏಕಕಾಲಕ್ಕೆ 35,000 ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅವಕಾಶವಿರುವ ವಿಶಿಷ್ಟ ಬೃಹತ್ ಬಯಲುರಂಗ ಮಂದಿರದ ಅತೀ ಭವ್ಯ ವಿಶಾಲ ವೇದಿಕೆಯಲ್ಲಿ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಅತ್ಯದ್ಭುತ ಸಂವಹನ ನಡೆದು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಇನ್ನಿಲ್ಲದ ಮೆರುಗು ತುಂಬಿತು.