ಕುಮಾರಿ ಜಯಲಲಿತಾಗೂ ಇತ್ತು ನಮ್ಮ ತುಳುನಾಡ ನಂಟು
ಜಯಲಲಿತಾ ಬಾಲ್ಯದಿಂದಲೇ ಕರಾವಳಿಯ ಜನರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನುವುದಕ್ಕೆ ಹಲವು ಪುರಾವೆಗಳಿವೆ ಎಂದು ಹೇಳುತ್ತಾರೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ.
ಮಂಗಳೂರು, ಡಿಸೆಂಬರ್ 7: ತಮಿಳುನಾಡಿನ ಜನರ ಅಮ್ಮ ಜಯಲಲಿತಾ ಅವರಿಗೂ ಕರ್ನಾಟಕದ ಕರಾವಳಿ ಜಿಲ್ಲೆಗೂ ನಂಟು ಇತ್ತು.
ಜಯಲಲಿತಾ ಬಾಲ್ಯದಿಂದಲೇ ಕರಾವಳಿಯ ಜನರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನುವುದಕ್ಕೆ ಹಲವು ಪುರಾವೆಗಳಿವೆ ಎಂದು ಹೇಳುತ್ತಾರೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ.[ಜಯಲಲಿತಾ ಅಪರೂಪದ ಚಿತ್ರಗಳು]
1961ರಲ್ಲಿ ತೆರೆಕಂಡ 'ಶ್ರೀ ಶೈಲ ಮಹಾತ್ಮೆ 'ಎಂಬ ಕನ್ನಡ ಚಲನಚಿತ್ರದ ಮೂಲಕ ತನ್ನ ಹನ್ನೆರಡನೆ ವಯಸ್ಸಿನಲ್ಲಿ ಬಾಲನಟಿಯಾಗಿ ಜಯಲಲಿತಾ ಚಿತ್ರರಂಗವನ್ನು ಪ್ರವೇಶಿಸಿದ್ದರು. ಈ ಚಿತ್ರದ ನಿರ್ದೇಶಕರು ಕರಾವಳಿಯ ಅಂದಿನ ಪ್ರಖ್ಯಾತ ನಿರ್ದೇಶಕ ಆರೂರು ಪಟ್ಟಾಭಿ. ಇದೇ ಚಿತ್ರದಲ್ಲಿ ಅವರ ತಾಯಿ ಸಂಧ್ಯಾ ನಾಯಕಿಯಾಗಿದ್ದರು.ಈ ಚಲನಚಿತ್ರಕ್ಕೆ ರಾಷ್ಟ್ರ ಮಟ್ಟದ ಪುರಸ್ಕಾರವು ಲಭಿಸಿತ್ತು.
ಈ ಚಿತ್ರದಲ್ಲಿ ಬರುವ ಒಂದು ಹಾಡು 'ಅನುಪಮ ಭಾಗ್ಯವಿದೇ ಕಂಡೆನು ನಾ ಪರಶಿವನಾ ಚಿನ್ಮಯ, ತನ್ಮಯ ನಾನಾದೆ' ಹಾಡಿದವರು ಆರೂರು ಅವರ ಪತ್ನಿ ಸಿ.ಎಸ್. ಸರೋಜಿನಿ. ಹೀಗೆ ತಮಿಳುನಾಡು-ತುಳುನಾಡಿನ ಬಾಂಧವ್ಯವನ್ನು ನೆನಪಿಸಿಕೊಂಡವರು ಆರೂರು ಪಟ್ಟಾಭಿಯವರ ಮೊಮ್ಮಗ ಪ್ರದೀಪ್ ಕುಮಾರ್ ಕಲ್ಕೂರ.[ಜೀವನದುದ್ದಕ್ಕೂ ಕರ್ನಾಟಕದ ಪಾಲಿಗೆ ' ವಿಲನ್' ಆದ ಜಯಲಲಿತಾ]
ಜಯಲಲಿತಾ ಕೊಲ್ಲೂರು ಮುಕಾಂಬಿಕೆಯ ಪರಮ ಭಕ್ತೆಯಾಗಿದ್ದ ಕಾರಣ ಕೆಲವು ಬಾರಿ ಕೊಲ್ಲೂರಿಗೆ ಬಂದ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಹಾದು ಹೋಗಿದ್ದಾರೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ನೆನಪಿಸಿಕೊಳ್ಳುತ್ತಾರೆ. ಜಯಲಲಿತಾರವರಿಗೆ ಬಡವರ ಬಗ್ಗೆ ಬಹಳ ಕಾಳಜಿ ಇತ್ತು ಎಂದು ಕಲ್ಕೂರ ಅವರು ಜಯಲಲಿತಾ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದರು.
ನಗರದ ಸೆಂಟ್ರಲ್ ಮಾರುಕಟ್ಟೆ ಬಳಿ ಇರುವ ರಾಮಾಕಾಂತಿ ಚಿತ್ರಮಂದಿರಲ್ಲಿ ಜಯಲಲಿತಾ ಅಭಿನಯದ ಬಹಳಷ್ಟು ಸಿನಿಮಾಗಳು ತೆರೆಕಂಡಿದ್ದವು. ಇದಲ್ಲದೆ ಜಯಲಲಿತಾ ಅವರ ಹೆಚ್ಚಿನ ಸಿನಿಮಾಗಳನ್ನು ವೀಕ್ಷಿಸಲು ತುಳುನಾಡಿನ ಜನರು ಇದೇ ಚಿತ್ರಮಂದಿರಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.
ಜಯಾ ಅಭಿನಯದ ಅನೇಕ ಚಿತ್ರಗಳು ರಾಮಕಾಂತಿ ಚಿತ್ರಮಂದಿರದಲ್ಲೇ ತೆರೆಕಂಡಿವೆ ಎಂಬ ಹೆಗ್ಗಳಿಕೆಗೆ ಈ ಚಿತ್ರಮಂದಿರ ಸಾಕ್ಷಿಯಾಗಿದೆ. ಇಷ್ಟೇ ಅಲ್ಲದೆ ಜಯಲಲಿತಾ ಅಭಿನಯದ ಚಿತ್ರಗಳ ಮರು ಪ್ರದರ್ಶನವನ್ನು ಇದೇ ಚಿತ್ರಮಂದಿರ ಅನೇಕ ಬಾರಿ ಮಾಡಿದೆ.[ಅಮ್ಮ ಇಲ್ಲದ ಮೇಲೆ ರಾಜ್ಯ ನಡೆದೀತು ಹೇಗೆ ?]
ತಮಿಳುನಾಡಿನ ತಾರೆಯಾಗಿ ಮಿಂಚಿದ ಜಯಲಲಿತಾರ ಮೊದಲ ಚಿತ್ರವನ್ನು ತುಳುವಿನ ನಿರ್ದೇಶಕರೊಬ್ಬರು ನಿರ್ದೇಶನ ಮಾಡಿರುವುದು ನಿಜಕ್ಕೂ ಗಮನಾರ್ಹ. ಈ ರೀತಿ ಕರಾವಳಿಗೂ ಜಯಲಲಿತಾಗೂ ಅವಿನಾಭಾವ ನಂಟು ಇತ್ತು ಎನ್ನಲಾಗಿದೆ.
ದಿಗ್ಗಜ ನಿರ್ದೇಶಕ:
ತುಳು ಚಿತ್ರರಂಗದಲ್ಲಿ ಅತಿಹೆಚ್ಚು ತುಳು ಸಿನಿಮಾಗಳನ್ನು ನಿರ್ದೇಶನ ಮಾಡಿದವರಲ್ಲಿ ಆರೂರು ಪಟ್ಟಾಭಿಯವರು ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ. ತುಳುವಿನ ಚಿತ್ರ 'ದಾರೆದ ಬುಡೆದಿ' ಚಿತ್ರವನ್ನು ನಿರ್ದೇಶನದ ಜತೆಗೆ ನಿರ್ಮಾಣವನ್ನು ಮಾಡಿದ್ದರು. ಇದಲ್ಲದೆ 'ಪಗೇತ ಪುಗೆ', 'ಬಿಸತಿ ಬಾಬು', 'ಬಯ್ಯ ಮಲ್ಲಿಗೆ', 'ಬೊಳ್ಳಿ ದೋಟ', 'ಕರಿಯಣಿ ಕಟ್ಟಂದಿ ಕಂಡನಿ' ,'ಭಾಗ್ಯವಂತೆದಿ', 'ಬದ್ಕರೆ ಬುಡ್ಲೆ', 'ಸತ್ಯ ಒಲುಂಡು' ಮೊದಲಾದ ಖ್ಯಾತ ಚಿತ್ರಗಳ ನಿರ್ದೇಶಕ ಆರೂರು ಪಟ್ಟಾಭಿಯವರು ಕರಾವಳಿಯ ಆರೂರಿನವರು.