ಸಾವಿನ ಅಂಚಿನಲ್ಲಿದ್ದಾಗ ಜೀವ ಉಳಿಸುವ ಸಂಶೋಧನೆ ನಡೆಸಿದ ಮಂಗಳೂರು ಮಹಿಳೆ
ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಅಪೂರ್ವ ಸಂಶೋಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಮಂಗಳೂರಿನ ಪ್ರೆಸಿಲ್ಲಾ ವೇಗಸ್. ಮಾತ್ರವಲ್ಲ ಇದಕ್ಕಾಗಿ ಕೆನಡಾ ವಿವಿಯಿಂದ ವಿಶೇಷ ಪಿಎಚ್ಡಿ ಪದವಿಯನ್ನೂ ಸ್ವೀಕರಿಸಿದ್ದಾರೆ.
ಮಂಗಳೂರು, ಮೇ 21: ಆಕೆ ಸ್ವತಃ ತಾವೇ ಸಾವಿನ ಅಂಚಿನಲ್ಲಿದ್ದಾರೆ. ಹೀಗಿದ್ದೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಜೀವವನ್ನು ಉಳಿಸುವ ಕುರಿತು ಸಂಶೋಧನೆ ಮಾಡಿದ್ದಾರೆ. ಮಾತ್ರವಲ್ಲ ಈ ಸಂಶೋಧನೆಗೆ ಕೆನಡಾ ವಿವಿಯೊಂದರಿಂದ ವಿಶೇಷ ಘಟಿಕೋತ್ಸವದಲ್ಲಿ ಪಿಎಚ್ಡಿ ಪದವಿಯನ್ನೂ ಸ್ವೀಕರಿಸಿದ್ದಾರೆ.
ಮಂಗಳೂರು ಮೂಲದ ಪ್ರೆಸಿಲ್ಲಾ ವೇಗಸ್ ಇಂಥಹದ್ದೊಂದು ಸಾಧನೆ ಮಾಡಿದ ಮಹಿಳೆ. ಇವರ ಬದುಕೇ ಒಂದು ರೋಚಕ ಹಾದಿ. ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ, ಇನ್ನೇನು ಕೆಲವೇ ತಿಂಗಳುಗಳಲ್ಲಿ ಸಾಯಲಿದ್ದರೂ ಅಪೂರ್ವ ಸಂಶೋಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಎಂಬಲ್ಲಿ ಅರ್ಬನ್ ವೇಗಸ್ ಹಾಗೂ ಯೂಜಿನ್ ಮಾಡ್ತಾ ಎಂಬ ದಂಪತಿಗೆ 1972 ಜುಲೈ 13ರಂದು ಪ್ರೆಸಿಲ್ಲಾ ಜನಿಸಿದರು. ಇವರ ತಂದೆ ತಾಯಿ ಸರ್ಕಾರಿ ಉದ್ಯೋಗದಲ್ಲಿದ್ದರು. ಹೀಗಾಗಿ ಮುಂದೆ ವೈಯಕ್ತಿಕ ಕಾರಣಗಳಿಂದ ಕಾರ್ಕಳ ಎಂಬಲ್ಲಿಗೆ ಸ್ಥಳಾಂತರಗೊಂಡರು.
ತದನಂತರ ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದರು ಪ್ರೆಸಿಲ್ಲಾ. ಈ ವೇಳೆ ತಂದೆ ಮಿದುಳು ರಕ್ತಸ್ರಾವದಿಂದ ತೀರಿಕೊಂಡರು. ಹೀಗಾಗಿ ಇಡೀ ಕುಟುಂಬವನ್ನು ತಾಯಿ ನಿಭಾಯಿಸಿದರು. ತದನಂತರ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಸಸ್ಯಶಾಸ್ತ್ರ, ಜೀವಿಶಾಸ್ತ್ರ ಪದವಿ ಮುಗಿಸಿದರು. ಬಳಿಕ ಇವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಸಂಸ್ಥೆಯಲ್ಲಿ ಮೆಡಿಕಲ್ ಮೈಕ್ರೋಬಯಾಲಜಿಯಲ್ಲಿ ಪದವಿ ಮುಗಿಸಿದರು.
ಸಂಸಾರದ ನೌಕೆಯಲ್ಲಿ ಪಯಣ
1997ರಲ್ಲಿ ಮದುವೆಯಾಗಿ ಪತಿಯೊಂದಿಗೆ ದುಬೈನಲ್ಲಿ ಸಂಸಾರ ಹೂಡಿದರು ಪ್ರೆಸಿಲ್ಲಾ. ಅದೇ ವೇಳೆ ಭಾರತದಿಂದ ಕ್ಷಯರೋಗ ಸಂಶೋಧನೆಯಲ್ಲಿ ಪಿಎಚ್ಡಿ ಮಾಡುವ ಅವಕಾಶ ಅವರಿಗೆ ಸಿಕ್ಕಿದ್ದರೂ ಕಾರಣಾಂತರಗಳಿಂದ ಅದು ತಪ್ಪಿ ಹೋಯಿತು.
ಈ ವೇಳೆ ಪತಿಗೆ ಕೆನಡಾದಲ್ಲಿ ಕೆಲಸ ದೊರಕಿದ್ದರಿಂದ ಅಲ್ಲಿಗೆ ಕುಟುಂಬ ಸಮೇತ ವರ್ಗಾವಣೆಯಾದರು. ಈ ವೇಳೆಯೂ ತನ್ನ ಸಂಶೋಧನಾ ಕನಸನ್ನು ಬಿಟ್ಟಿರದ ಅವರು ಒಂಟಾರಿಯೋದ ಹ್ಯಾಮಿಲ್ಟನ್ ಮೆಕ್ಮಾಸ್ಟರ್ ವಿ.ವಿ ಮತ್ತು ಟೊರಂಟೋದ ಹಂಬರ್ ಕಾಲೇಜಿನಲ್ಲಿ ಪ್ರೆಸಿಲ್ಲಾ ಪ್ರವೇಶ ಪಡೆದರು.
ಪಿಎಚ್ಡಿ ಆಸೆಗೆ ಜೀವ ನೀಡುವ ಪ್ರಯತ್ನ
ಈ ವೇಳೆ ಪುಟ್ಟ ಮಗು ಹೊಂದಿದ್ದರೂ, ಮಗುವನ್ನು ಪೋಷಿಸುವ ಜತೆಗೆ ಸಾರ್ವಜನಿಕ ಸಾರಿಗೆಯಲ್ಲಿ ಸತತ ಮೂರು ಗಂಟೆಗಳ ಕಾಲ ಪ್ರಯಾಣಿಸಿ ಎರಡೂ ತರಗತಿಗಳಿಗೆ ಹಾಜರಾಗುತ್ತಿದ್ದರು. ಈ ಮಧ್ಯೆ 75ಕ್ಕಿಂತಲೂ ಅಧಿಕ ಆಸ್ಪತ್ರೆಗಳನ್ನೊಳಗೊಂಡ ಬೃಹತ್ ಕ್ಲಿನಿಕಲ್ ಅಧ್ಯಯನ ಕಾರ್ಯಕ್ರಮದಲ್ಲಿ ಸಹ-ಸಮನ್ವಯಿಕಿಯಾಗಿ ನೇಮಕಗೊಂಡಿದ್ದರು.
ಅಲ್ಲಿ ರಿರೆಲಿ ಎಂಬುವವರು ಅಲ್ಲಿನ ಟ್ರಾಮಾ ಕೇರ್ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಪ್ರೆಸಿಲ್ಲಾರನ್ನು ಉತ್ಸಾಹ ನೋಡಿ ಟೊರೆಂಟೋ ವಿವಿಯ ಮೆಡಿಸಿನ್ ಫ್ಯಾಕಲ್ಟಿಯಲ್ಲಿ ಪಿಎಚ್ಡಿ ಅಭ್ಯರ್ಥಿಯಾಗಿ ಸೇರಿಸಿಕೊಂಡಿದ್ದರು. ಈ ವೇಳೆ ಪ್ರೆಸಿಲ್ಲಾರ ಪಿಎಚ್ಡಿ ಕನಸು ನನಸಾಗುವ ಹಂತದಲ್ಲಿತ್ತು. ಜೊತೆಗೆ ಸುಮಾರು 80% ಪಿಎಚ್ಡಿ ಅಧ್ಯಯನ ಮುಗಿದಿತ್ತು.
ಕ್ಯಾನ್ಸರ್ ಎಂಬ ಮಾಹಾಮಾರಿಯ ಆಕ್ರಮಣ
2015ರ ವೇಳೆಗೆ ಪ್ರೆಸಿಲ್ಲಾ ಪಿತ್ತರಸ ನಾಳಕ್ಕೆ ತಗುಲಿತ್ತು. ಅದಾಗಲೇ ಅಂಡಾಶಯ, ಯಕೃತ್ ಮತ್ತು ಶ್ವಾಸಕೋಶಕ್ಕೆ ಹರಡಿದ್ದರಿಂದ ಹೆಚ್ಚೆಂದರೆ ಆರು ತಿಂಗಳ ಕಾಲ ಬದುಕಬಹುದೆಂಬ ಗಡುವನ್ನು ವೈದ್ಯರು ನೀಡಿದ್ದರು.
ಈ ವಿಷಯ ಪ್ರೆಸಿಲ್ಲಾ ಅವರಿಗೆ ತಿಳಿದಿದ್ದರೂ ತನ್ನ ಅಧ್ಯಯನ ಮುಗಿಸಬೇಕೆಂಬ ಧೃಡ ನಿಶ್ಚಯದೊಂದಿಗೆ ಮುಂದುವರಿಸಿದ್ದರು. ಈ ವೇಳೆ ಅವರಿಗೆ ಕಿಮೋಥೆರಪಿಯಂತಹ ಚಿಕಿತ್ಸೆಯ ನಡುವೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಪ್ರಯೋಗಶಾಲೆ ಮತ್ತು ಗ್ರಂಥಾಲಯಗಳಿಗೆ ಓಡಾಡುತ್ತ ಕೇವಲ 20 ತಿಂಗಳ ಅವಧಿಯಲ್ಲಿ ಹಲವಾರು ಪ್ರಬಂಧಗಳನ್ನು ಪ್ರಕಟಿಸಿ ಅದನ್ನು ಮಂಡಿಸಿ ಪಿಎಚ್ಡಿ ಪದವಿ ಮುಗಿಸಿಯೇ ಬಿಟ್ಟರು.
ವಿಶೇಷ ಘಟಿಕೋತ್ಸವ ಆಯೋಜನೆ
ಪಿಎಚ್ಡಿ ಪದವಿ ಮುಗಿಸಿದ್ದರೂ, ಅದನ್ನು ಪಡೆಯಲು ಜೂನ್ ತಿಂಗಳವರೆಗೆ ಕಾಯಬೇಕಿತ್ತು. ಈ ಮಧ್ಯೆ ತಾನು ಬದುಕುಳಿಯುತ್ತೇನೋ ಎಂಬ ಅನುಮಾನ ಅವರನ್ನು ಕಾಡಿತ್ತು. ಅವರ ಈ ಸಾಧನೆ ನೋಡಿದ ವಿವಿಯೂ ಮೇ 9ರಂದು ಪ್ರೆಸಿಲ್ಲಾ ಅವರಿಗೆ ವಿಶೇಷ ಘಟಿಕೋತ್ಸವ ಆಯೋಜಿಸಿತು.0 ಅವರ ಸಂಶೋಧನೆ ಗುರುತಿಸಿ ಅವರಿಗೆ ಪಿಎಚ್ಡಿ ಪದವಿ ಪ್ರದಾನವೂ ಮಾಡಿತು. ಈ ಅಪರೂಪದ ಸುಂದರ ಕ್ಷಣಕ್ಕೆ ಭಾರತದ ಅವರ ಕುಟುಂಬ ವರ್ಗವೂ ಸಾಕ್ಷಿಯಾಗಿತ್ತು.
ಕನಸು ನನಸಾಗಿಸಿ: ಪ್ರೆಸಿಲ್ಲಾ
ಪ್ರೆಸಿಲ್ಲಾ ಸಂಶೋಧನೆ ಟೊರೆಂಟೋದ ಸೈಂಟ್ ಮೈಕೇಲ್ಸ್ ಆಸ್ಪತ್ರೆಯಲ್ಲಿ ಟ್ರಾಮಾ ರೋಗಿಗಳ ಪಾಲಿಗೆ ವರದಾನವಾಗಿದೆ. ರಕ್ತಸ್ರಾವ ನಿಯಂತ್ರಿಸಿ ಅವರ ಜೀವಗಳನ್ನುಳಿಸಲು ಅತ್ಯಂತ ಪರಿಣಾಮಕಾರಿ ಸಂಶೋಧನೆಯನ್ನು ಪ್ರೆಸಿಲ್ಲಾ ಮಾಡಿದ್ದಾರೆ.
ಈ ಮಧ್ಯೆ ತನ್ನ ಜೀವನದಲ್ಲಿ ಗುರಿಗಳನ್ನು ಸಾಧಿಸಲು ನಾನು ಸಮರ್ಥೆ ಎಂಬ ಸಂದೇಶ ನೀಡುತ್ತಿದ್ದೇನೆ ಎಂಬ ತೃಪ್ತಿ ಪ್ರೆಸಿಲ್ಲಾ ಅವರಿಗಿದೆ. ಜೊತೆಗೆ ತಮ್ಮ ಕನಸು ನನಸು ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ದಾರೆ ಪ್ರೆಸಿಲ್ಲಾ.