ಆಡು ಮುಟ್ಟದ ಸೊಪ್ಪಿಲ್ಲ' ಮಂಗ್ಳೂರಿನ ಭವಾನಿ ಜೋಗಿ ಆಡದ ಕ್ರೀಡೆಗಳಿಲ್ಲ
ಮಂಗಳೂರು, ಮೇ 29: ವಿಧಿ ಕೆಲವರ ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತದೆ. ಆದರೆ, ಅದನ್ನೇ ಸವಾಲಾಗಿ ಸ್ವೀಕರಿಸಿ ದಿಟ್ಟ ಹೆಜ್ಜೆ ಇಟ್ಟು ಮುನ್ನಡೆಯುವವರು ಬೆರಳೆಣಿಕೆಯಷ್ಟು ಜನರು ಮಾತ್ರ, ಅಂತವರಲ್ಲಿ ಮಂಗಳೂರಿನ ಭವಾನಿ ಜೋಗಿ ಸಹ ಒಬ್ಬರು.
ಲೇಡಿಘೋಷನ್ ಆಸ್ಪತ್ರೆಯಲ್ಲಿ ಶುಶ್ರೂಕರ ಅಧೀಕ್ಷಕಿಯಾಗಿರುವ ಭವಾನಿ ಆಡು ಮುಟ್ಟದ ಸೊಪ್ಪಿಲ್ಲ' ಎಂಬ ನಾಣ್ಣುಡಿಯಂತೆ ಇವರು ಆಡಿದ ಕ್ರೀಡೆಗಳಿಲ್ಲ. ಹೌದು.. ವೃತ್ತಿಯಲ್ಲಿ ಭವಾನಿ ಓರ್ವ ಶುಶ್ರೂಕಿಯಾಗಿರದೆ. ಸರಕಾರಿ ನೌಕರರ ರಾಜ್ಯ ಕ್ರೀಡೆ, ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಟ್ರಿಪಲ್ ಜಂಪ್, ಡಿಸ್ಕಸ್ ಥ್ರೋ, ಶಾಟ್ ಪುಟ್ ನಲ್ಲಿ ಸೈ ಅನಿಸಿಕೊಂಡವರು.[ಬದುಕಿಗಾಗಿ ನಾನಾ ಅವತಾರವೆತ್ತುವ ಮಹಿಳೆಯೇ ನಮೋನ್ನಮಃ]
ದೇಶ ಮಾತ್ರವಲ್ಲ ವಿದೇಶದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದವರು. ಈ ವರೆಗೆ ಚೀನಾ, ಥಾಯ್ಲೆಂಡ್, ಮಲೇಷಿಯಾ, ಸಿಂಗಾಪುರ, ಶ್ರೀಲಂಕಾ ದೇಶಗಳಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಭವಾನಿ ಹಲವು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಭವಾನಿ, ತತಮ್ಮ 39 ನೇ ವಯಸ್ಸಿನಲ್ಲಿ ಕೇವಲ ಆರೇ ತಿಂಗಳಲ್ಲಿ ಈಜು ಕಲಿತು ಭೊಪಾಲ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ರನ್ನರ್ ಅಪ್ ಪದಕ ಪಡೆದು ಸಹಾಸ ಮೆರೆದಿದ್ದಾರೆ.
ಭವನಿಯ ಆಲ್ ರೌಂಡರ್ ಪ್ರದರ್ಶನ
ಮಂಗಳೂರು ನಗರದ ಉರ್ವಾಸ್ಟೋರ್ ನ ಭವಾನಿ ಇಲ್ಲಿನ ಲೇಡಿಘೋಶನ್ ಆಸ್ಪತ್ರೆಯಲ್ಲಿ ಶುಶ್ರೂಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭವಾನಿ ಅವರು ತಾನಾಯಿತು ತನ್ನ ಕೆಲಸವಾಯಿತು ಎಂದು ತೆಪ್ಪಗೆ ಕೂರುವವರಲ್ಲ. ಕ್ರೀಡೆ, ನಾಟಕ, ಯಕ್ಷಗಾನ, ಸಮಾಜಸೇವೆ, ಸಂಘಟನೆ, ಜೊತೆಗೆ ಕ್ರೀಡಾಕೂಟದಲ್ಲಿ ಇವರ ಸಾಧನೆ ಅಂತಾರಾಷ್ಟ್ರೀಯ ಮಟ್ಟಕ್ಕೇರಿದೆ.
ಯಕ್ಷಗಾನಕ್ಕೂ ಸೈ, ಸಂಘಟನೆಗೂ ಸೈ
ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲೂ ಸೈ ಅನಿಸಿಕೊಂಡಿದ್ದಾರೆ. ಈವರೆಗೆ ಭೀಮ, ವೀರಭದ್ರ, ಅಗ್ನಿಕಂಸ, ಅನುಸಾಲ್ವ ಎಂಬ ಪುರುಷ ಪಾತ್ರಕ್ಕೆ ಜೀವತುಂಬಿದ್ದಾರೆ. ಇನ್ನು ಗೆಳೆಯರ ಬಳಗದ ವಲಯದಲ್ಲಿ ನಡೆಯುವ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಮಿಂಚಿದ್ದಾರೆ. ಕ್ರೀಡೆ, ಕಲೆ ಮಾತ್ರವಲ್ಲದೇ ಭವಾನಿ ಅವರು ಒಬ್ಬ ಸಮರ್ಥ ಸಂಘಟಕಿ. ಕಳೆದ 30 ವರ್ಷದಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ಕ್ರೀಡಾಕಾರ್ಯದರ್ಶಿಯಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ದ.ಕ ಜಿಲ್ಲಾ ಜಿಲ್ಲಾ ಜೋಗಿ ಸಮಾಜ ಸುಧಾರಕ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ, ಕರ್ನಾಟಕ ರಾಜ್ಯ ಸರಕಾರಿ ಶುಶ್ರೂಷಕರ ಸಂಘದ ಜಿಲ್ಲಾಧ್ಯಕ್ಷರಾಗಿ, ಹಾಗೂ ಉರ್ವಸ್ಟೋರ್ ಪ್ರಗತಿ ಮಹಿಳಾ ಮಂಡಲದ ಸಂಘಟನಾ ಕಾರ್ಯದರ್ಶಿಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ.
ಹಲವು ಪುರಸ್ಕಾರಗಳಿಗೆ ಭಾಜನ
ಇವರಿಗೆ ಈವರೆಗೆ ಹಲವು ಪುರಸ್ಕರಗಳು ಅರಸಿ ಬಂದಿವೆ. ರಾಜ್ಯ ಸರಕಾರದ 'ಪೊಲೀರೇನ್ಸ್ ನೈಟಿಂಗೇಲ್' ಪ್ರಶಸ್ತಿ, ಮದರ್ ತೆರೆಸಾ ಪ್ರಶಸ್ತಿ, ಹೀಗೆ ಹತ್ತು ಹಲವು ಪುರಸ್ಕಾರಗಳು ಇವರಿಗೆ ದೊರಕಿದೆ.
ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ದುರ್ದೈವಿ
ಇವರು ಮೂಲತಃ ಪುತ್ತೂರಿನವರು. ಇವರ ತಂದೆ ಮೂಲತಃ ಕಾಸರಗೋಡಿನವರು. ಗಿರಿಜಮ್ಮ-ಸುಬ್ಬಣ್ಣ ದಂಪತಿಗಳ ಐದನೇ ಪುತ್ರಿ. ಮರದ ವ್ಯಾಪಾರಿಯಾಗಿದ್ದರಿಂದ ಸಕಲೇಶಪುರದಲ್ಲಿ ನೆಲೆಸಿದ್ದ ಭವಾನಿ ಪಿಯುಸಿವರೆಗಿನ ಶಿಕ್ಷಣವನ್ನು ಅಲ್ಲೇ ಮುಗಿಸಿದವರು. ತದನಂತರ ನರ್ಸಿಂಗ್ ಕೆಲಸಕ್ಕೆ ಸೇರಿದರು. ದುರಾದೃಷ್ಟವತ್ ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡವರು. ಈಗ ಒಬ್ಬಳು ಮಗಳಿದ್ದಾಳೆ.
ಭವಾನಿ ಜೋಗಿ ಅವರ ಮನದಾಳದ ಮಾತುಗಳು
ಇವರೇ ಹೇಳುವಂತೆ ಇವರ ಈ ಸಾಧನೆಗಳಿಗೆ ತಮ್ಮ ಸಹೋದ್ಯೋಗಿಗಳು, ಸಿಬ್ಬಂದಿ ವರ್ಗ, ಹಾಗೂ ಆಡಳಿತ ವರ್ಗದ ಬೆಂಬಲ ಮರೆಯಲಾರದ್ದು ಎನ್ನುತ್ತಾರೆ. ಜತೆಗೆ ಮಗಳು ದೀಪ್ತಿ ಸಹ ಒಬ್ಬಳು ಮಗಳಾಗಿರದೆ, ಗೆಳತಿಯಾಗಿ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ನೀಡಿದ್ದಾರೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಇವರು ಶುಶ್ರೂಕಿ ಅಧಿಕ್ಷಕಿ ವೃತ್ತಿಯಿಂದ ನಿವೃತ್ತಿಯಾಗುತ್ತಾರೆ. ಅವರ ನಿವೃತ್ತಿ ಕೇವಲ ಸರ್ಕಾರಿ ಸೇವೆಗೆ ಆದರೆ, ಅವರ ಸಾಧನೆಗಲ್ಲ.