ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ, ವಿಕೃತನ ಬಂಧನ
ಮಂಗಳೂರು, ಫೆಬ್ರವರಿ 16 : ಸುಳ್ಯ ನಗರದ ಕಾಲೇಜೊಂದರ ಶೌಚಾಲಯದಲ್ಲಿ ವಿದ್ಯಾರ್ಥಿನಿಯರು ಶೌಚಕ್ಕೆಂದು ಹೋದಾಗ ಚಿತ್ರೀಕರಣ ಮಾಡುತ್ತಿದ್ದ ವಿಕೃತ ಮನಸ್ಸಿನ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿ, ಸದ್ಯ ಸುಳ್ಯದ ಗಾಂಧಿನಗರದ ಹೋಟೆಲ್ನಲ್ಲಿ ಕೆಲಸಕ್ಕಿದ್ದ ಮಹಮ್ಮದ್ ಇರ್ಷಾದ್ ಬಂಧಿತ ಆರೋಪಿ. ಮಧ್ಯಾಹ್ನ ಊಟದ ಅವಧಿಯ ಸಮಯದಲ್ಲಿ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಬರುವ ಮುನ್ನವೇ ಆತ ಮಹಡಿ ಏರಿ ಒಳಗಿದ್ದ ಕೊಠಡಿಯೊಂದರ ಕಿಂಡಿಯಲ್ಲಿ ಇಣುಕಿ ಚಿತ್ರೀಕರಣ ಮಾಡುತ್ತಿದ್ದಾನೆನ್ನಲಾಗಿದೆ.
ಈ ವಿಷಯ ತಿಳಿದ ವಿದ್ಯಾರ್ಥಿನಿಯರು ಉಪನ್ಯಾಸ ವರ್ಗದವರಿಗೆ ತಿಳಿಸಿದ್ದರು. ಕೂಡಲೇ ಉಪನ್ಯಾಸಕರು ಬಂದು ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಹಲ್ಲೆ
ಅಡಿಕೆ ಮರದ ಸಲಾಕೆಯಿಂದ ಮಹಿಳೆಯೋರ್ವರಿಗೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಮುರುವ ಎಂಬಲ್ಲಿ ನಡೆದಿದೆ.
ಮುರುವ ನಿವಾಸಿ ಇಬ್ರಾಹಿಂ ಎಂಬುವವರ ಪತ್ನಿ ಜುಬೈದಾ ಎಂಬವರು ಹಲ್ಲೆಗೊಳಗಾದ ಮಹಿಳೆ. ಇವರು ಬುಧವಾರ ಮನೆಯಲ್ಲಿದ್ದ ವೇಳೆ ಅಕ್ರಮವಾಗಿ ಪ್ರವೇಶ ಮಾಡಿದ ಸ್ಥಳೀಯ ನಿವಾಸಿ ಸಿದ್ದಿಕ್ ಮನೆಯ ಅಂಗಳದಲ್ಲಿದ್ದ ಅಡಿಕೆ ಮರದ ಸಲಾಕೆಯನ್ನು ತೆಗೆದು ಇವರ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಸ್ಥಳೀಯರಾದ ಹಸನ್ ಮದನಿ ಎಂಬವರ ಪತ್ನಿ ಅವ್ವಾಬಿ ಎಂಬಾಕೆ ಆತನಿಗೆ ಬೆಂಬಲ ನೀಡಿರುವುದಾಗಿ ಆರೋಪಿಸಿ ಜುಬೈದಾ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳಾದ ಸಿದ್ದಿಕ್ ಮತ್ತು ಅವ್ವಾಬಿ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.