ಶಿವರಾತ್ರಿ ವಿಶೇಷ: ಕರಾವಳಿ ಎಲ್ಲಡೆ ಶಿವನ ಆರಾಧನೆ
ಶಿವರಾತ್ರಿ ಬಂದೆ ಬಿಟ್ಟಿತು. ಶಿವನ ದೇವಾಲಗಳಲ್ಲಿ ಜನವೋ ಜನ. ರಾತ್ರಿ ಇಡಿ ಜಾಗರಣೆ, ಭಜನೆ, ಶಿವನ ಆರಾಧನೆಗಳು ಎಲ್ಲಡೆ ನಡೆಯಲಿವೆ. ಅದರಲ್ಲೂ ಕರಾವಳಿ ಭಾಗದಲ್ಲಿ ಶಿವರಾತ್ರಿಯ ವಿಶೇಷತೆಗಳೇನು? ಇಲ್ಲಿದೆ ನೋಡಿ.
ಮಹಾಶಿವರಾತ್ರಿ ಹಿಂದೂ ಸಂಸ್ಕೃತಿಯ ಎಲ್ಲಾ ಜನಾಂಗದವರಿಗೂ ಅತ್ಯಂತ ಪವಿತ್ರವಾದ ಹಬ್ಬ ಮತ್ತು ಶಿವಭಕ್ತರಿಗೆ ಬಹು ಪ್ರಿಯವಾದದ್ದು. ಶಿವರಾತ್ರಿ ಎಂದರೆ ಶಿವಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರರಾಗುವ ಶುಭದಿನ.
ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ.
ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರುಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ದಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ ಸುಖ ಶಾಂತಿ, ಸಮೃದ್ದಿ ದೊರೆಯುವುದೆಂಬ ನಂಬಿಕೆ.
ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ಕರಾವಳಿಯಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಶಿವರಾತ್ರಿ ದಿನದಂದು ಜನರು ಬೆಳಗ್ಗೆಯಿಂದಲೇ ಶಿವನ ಆರಾಧನೆಯಲ್ಲಿ ತಲೀನರಾಗಿರುತ್ತಾರೆ. ಕೆಲ ಶಿವನ ದೇವಾಲಯಗಳಲ್ಲಿ ನಡೆಯು ವಿಶೇಷ ಪೂಜೆ-ಪುನಸ್ಕಾರಗಳ ವಿಶೇಷತೆ ಬಗ್ಗೆ ತಿಳಿಯಲು ಮುಂದೆ ಓದಿ.
ಶಿವರಾತ್ರಿ ದಿನ
ಶಿವರಾತ್ರಿ ದಿನದಂದು ಸಾವಿರಾರು ಜನರು ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಶಿವಪಂಚಾಕ್ಷರಿ ಜಪ, ಅರ್ಚನೆ-ಅಭಿಷೇಕ, ಮಂತ್ರ ಪಠಣ, ಭಜನೆ, ಸಂಕೀರ್ತನೆ, ಬಿಲ್ವಾಷ್ಟೋತ್ತರ, ಸಹಸ್ರನಾಮ, ಅರ್ಚನೆ, ಉಪವಾಸ, ಜಾಗರಣೆಯನ್ನು ಭಕ್ತರು ಕೈಗೊಳ್ಳುತ್ತಾರೆ.
ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಶಿವರಾತ್ರಿ
ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬಂದು ದೇವರ ದರುಶನ ಪಡೆಯುತ್ತಾರೆ. ಧರ್ಮಸ್ಥಳಕ್ಕೆ ರಾಜ್ಯದ ವಿವಿಧ ಊರುಗಳಿಂದ 48 ತಂಡಗಳಲ್ಲಿ 12550 ಮಂದಿ ಭಕ್ತರು ಪಾದಯಾತ್ರೆಯಲ್ಲಿ ಬರುವುದಾಗಿ ಧರ್ಮಸ್ಥಳದ ಆಡಳಿತ ಮಂಡಳಿ ತಿಳಿಸಿದೆ. ಈಗಾಗಲೇ ಹಲವು ಮಂದಿ ಪಾದಯಾತ್ರಿಗಳು ಧರ್ಮಸ್ಥಳ ತಲುಪಿದ್ದಾರೆ. ಇಲ್ಲಿ ಭಕ್ತರಿಂದ ಶಿವ ಪಂಚಾಕ್ಷರಿ ಮಂತ್ರ ಪಠನೆ, ಪ್ರಾರ್ಥನೆ, ಭಜನೆ, ಧ್ಯಾನ ಒಂದು ಕಡೆ ನಡೆಯುತ್ತಿದ್ದರೆ ಮಂಜುನಾಥ ಸನ್ನಿಧಿಯಲ್ಲಿ ವಿಶೇಷ ರೀತಿಯಲ್ಲಿ ಪುಷ್ಪಾಲಂಕಾರ ಮಾಡಲಾಗುವುದು. ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿ ದಿನದ ರಾತ್ರಿ ಇಡಿ ರಥೋತ್ಸವ, ಕಟ್ಟೆ ಪೂಜೆ ಬಳಿಕ ಭೂತ ಬಲಿ, ದರ್ಶನ ಬಲಿ ಇತ್ಯಾದಿ ಸಂಪ್ರದಾಯದಂತೆ ನೆರವೇರುತ್ತವೆ.
ಪುತ್ತೂರಿನ ಮಹಾಲಿಂಗೇಶ್ವರ
ಕಾಶಿಯಿಂದ ಬಂದ ಮಹಾದೇವನೆ ಮಹಾಲಿಂಗನಾಗಿ ನೆಲೆಸಿದ ಪುಣ್ಯಕ್ಷೇತ್ರ ಪುತ್ತೂರು. ಈ ಕ್ಷೇತ್ರದಲ್ಲಿ ರುದ್ರಯಾಗ, ಭಜನೆ, ಮಹಾಪೂಜೆ, ಬಳಿ ಕೆರೆ ಆಯನ ಇಲ್ಲಿನ ನಡೆಯಲಿದೆ. ಈ ಬಾರಿ ಶಿವರಾತ್ರಿ ಪ್ರಯುಕ್ತ ಮಹಾರುದ್ರಯಾಗ ನಡೆಸಲಾಗುತ್ತಿದೆ. ಅದಕ್ಕೂ ಮೊದಲು ಕಳೆದೊಂದು ವಾರದಿಂದ ನಿತ್ಯವೂ ರುದ್ರ ಪಾರಾಯಣ, ಶಿವ ಪುರಾಣ ಕಥಾ ವಾಚನ ನಡೆಯುತ್ತಿದೆ. ಪುತ್ತೂರು ಶಿವರಾತ್ರಿ ಮಹೋತ್ಸವವನ್ನು ಅತ್ಯಂತ ವಿಶಿಷ್ಟವಾಗಿ ಹಾಗೂ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿದೆ. ಈ ಬಾರಿಯೂ ಅನೇಕ ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ಆಶೀರ್ವಾದಕ್ಕೆ ಪಾತ್ರರಾಗಲಿದ್ದಾರೆ.
ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ
ಕುದ್ರೋಳಿ ಕ್ಷೇತ್ರದ ಶಿವರಾತ್ರಿ ಉತ್ಸವಕ್ಕೆ ಶತಮಾನದ ಇತಿಹಾಸವಿದೆ. ಶಿವರಾತ್ರಿಯೆ ಇಲ್ಲಿನ ವರ್ಷಾವಧಿ ಉತ್ಸವ. ಮಹಾಶಿವರಾತ್ರಿಯ ಜಾಗರಣೆ ಬಳಿಕ ದೇವರ ಕಟ್ಟೆಪೂಜೆ, ಕೆರೆದೀಪ , ಮಂಟಪ ಪೂಜೆ ನಡೆದು ಬಳಿಕ ಜಳಕ ಹಾಗೂ ಓಕುಳಿ ನಡೆಯುತ್ತದೆ. ಇದು ಅತ್ಯಂತ ಜನಾಕರ್ಷಣೆಯ ಕಾರ್ಯಕ್ರಮ. ನಾಳೆ ಬೆಳಿಗ್ಗೆ 9.30ಕ್ಕೆ ಹೋಮ, 11ಕ್ಕೆ ಮಹಾರುದ್ರಾಭಿಷೇಕ, ಶತ ಸೀಯಾಲಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ 8ಕ್ಕೆ ರಥೋತ್ಸವ, ಶಿವಬಲಿ, ಮಹಾಶಿವ ರಾತ್ರಿ ಜಾಗರಣೆ, ಕಟ್ಟೆ ಪೂಜೆ, ರಥೋತ್ಸವ, ಕೆರೆ ದೀಪ, ಮಂಟಪ ಪೂಜೆ ನಡೆಯಲಿದೆ.
ಕಾವೂರು ಶ್ರೀ ಮಹಾಲಿಂಗೇಶ್ವರ
ಕಾವೂರು ದೇವಸ್ಥಾನದ ಪ್ರಧಾನ ಆರಾಧನಾ ಮೂರ್ತಿ ಶ್ರೀ ಮಹಾಲಿಂಗೇಶ್ವರ. ಲಿಂಗ ಸ್ವರೂಪಿ. ಮೂಡಣಕ್ಕೆ ಮುಖ ಮಾಡಿ ನೆಲೆಸಿರುವ ಪರಮೇಶ್ವರ. ಈ ಕ್ಷೇತ್ರದಲ್ಲಿ ಶಿವರಾತ್ರಿಯಂದು ಶಿವನಿಗೆ ವಿಶೇಷ ಪೂಜೆ, ಜಾಗರಣೆ ಹಾಗೂ ಭಜನಾ ಕಾರ್ಯಕ್ರಮ ನಡೆಯುತ್ತದೆ.