ಮಂಗಳೂರಲ್ಲಿ ಹಾಲು ಸಿಗದಿದ್ರು, ಆಲ್ಕೊಹಾಲ್ ಮಾತ್ರ ಪಕ್ಕಾ ಸಿಗುತ್ತೆ
ನಮಗೆ ನಿಮಗೆ ಗೊತ್ತಿರುವ ಹಾಗೇ ಮದ್ಯದಂಗಡಿಗಳು ಸೂರ್ಯಾಸ್ತವಾದ ಬಳಿಕ ಹೆಚ್ಚು ಲವಲವಿಕೆಯಲ್ಲಿರುತ್ತವೆ. ಮುಂಜಾನೆ ಗಾಢ ನಿದ್ರೆಯಲ್ಲಿರುತ್ತವೆ. ಮತ್ತೆ ಏಳುವುದು ಜನದಟ್ಟಣೆ ಇರುವಾಗಲೇ. ಆದರೆ, ಮಂಗಳೂರಿನ ಕೆಲ ಮದ್ಯದಂಗಡಿಗಳು ಮುಂಜಾನೆ ಆರು ಗಂಟೆಗೆ ತೆರೆದಿರುತ್ತವೆ. ಅಂದರೆ ಹಾಲು ಸಿಗುತ್ತೋ ಇಲ್ವೋ ಗೊತ್ತಿಲ್ಲ ಬೆಳ್ಳಂಬೆಳಗ್ಗೆ ಆಲ್ಕೊಹಾಲ್ ಮಾತ್ರ ಧಾರಾಳವಾಗಿ ಸಿಗುತ್ತೆ.
ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಕಡೆಗಳಲ್ಲಿ ಅಬಕಾರಿ ಇಲಾಖೆಯ ಸಮಯದ ನಿಯಮವನ್ನು ಮೀರಿ ಮದ್ಯದಂಗಡಿಗಳು ತೆರೆದಿರುತ್ತವೆ. ಇಷ್ಟಾದರೂ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಬೆಳ್ಳಂಬೆಳಿಗ್ಗೆಯೇ ತೆರೆದಿರುವ ಮದ್ಯದಂಗಡಿಗಳ ಬಗ್ಗೆ ಅಬಕಾರಿ ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗಿದೆ. ಆದರೂ ಯಾವ ಅಧಿಕಾರಿಗಳು ಆ ಅಂಗಡಿಗಳ ಹತ್ತಿರವೂ ಸುಳಿದಿಲ್ಲ ಎಂಬುದು ಸಾರ್ವಜನಿಕರ ಬೇಸರ.[ಏ.1 ರಿಂದ ಬಿಹಾರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ]
ನಿಯಮದ ಪ್ರಕಾರ ವೈನ್ ಶಾಪ್ ಗಳು ಬೆಳಗ್ಗೆ 10 ರಿಂದ ರಾತ್ರಿ 10.30ರವರೆಗೆ, ಬಾರ್ ಆಂಡ್ ರೆಸ್ಟೊರೆಂಟ್ ಗಳು ಬೆಳಗ್ಗೆ 10 ರಿಂದ ರಾತ್ರಿ 11.30ರವರೆಗೆ ಕಾರ್ಯಾಚರಿಸಬೇಕೆಂಬುದು ನಿಯಮ ಇದೆ. ಆದರೆ, ಈ ನಿಯಮಗಳನ್ನು ಕೆಲ ಬಾರ್ ಮಾಲೀಕರು ಗಾಳಿಗೆ ತೂರಿ ರಾಜಾರೋಷವಾಗಿ ಶಾಪ್ ಗಳನ್ನು ತೆರೆದಿರುತ್ತಾರೆ.
ಆಲ್ಕೋಹಾಲ್ ಶಾಫ್ ಮುಚ್ಚದಿರಲು ಕಾರಣವೇನು?
ಲಕ್ಷಾಂತರ ರೂಪಾಯಿ ತೆತ್ತು ಲೈಸೆನ್ಸ್ ಪಡೆಯುವ ಬಾರ್ ಮಾಲೀಕರು ಅತ್ಯಂತ ಪ್ರಭಾವಶಾಲಿಗಳಾಗಿರುತ್ತಾರೆ ಎಂಬುದೇನೊ ನಿಜ. ಆದರೆ, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ. ಇಷ್ಟಾದರೂ ಅಬಕಾರಿ ಅಧಿಕಾರಿಗಳು ಇವರಿಗೆ ಚುರುಕು ಮುಟ್ಟಿಸದಿರಲು ಕಾರಣ ಸಿಬ್ಬಂದಿ ಕೊರತೆ. ಇಲಾಖೆಯಲ್ಲಿ ಇರಬೇಕಾದ ಸಿಬ್ಬಂದಿ ಬಲಕ್ಕಿಂತ ಶೇ.40ರಷ್ಟು ಮಾತ್ರವೇ ಜಿಲ್ಲೆಯಲ್ಲಿದ್ದಾರೆ.[ಮಕ್ಕಳ ಕೈಯಲ್ಲಿ ಮದ್ಯ ಸಿಕ್ಕರೆ ಬಾರ್ ಮಾಲೀಕರಿಗೆ ಜೈಲೂಟ]
ಮುಂಜಾನೆಯೇ ವೈನ್ಶಾಪ್ ಬಾಗಿಲು ತೆಗೆದು ವ್ಯಾಪಾರ ಮಾಡಲು ನಮಗೂ ಮನಸ್ಸಿಲ್ಲ. ಆದರೆ ಮುಂಜಾನೆ ಶಾಪ್ ಬಾಗಿಲು ತೆರೆಯದಿದ್ದರೆ ಕೆಲವರು ಬಂದು ಗಲಾಟೆ ಮಾಡುತ್ತಾರೆ, ಅಂಗಡಿಯ ಶೆಟರ್ ಗೆ ಕಲ್ಲಿನಿಂದ ಹೊಡೆಯುತ್ತಾರೆ. ಆದ್ದರಿಂದ ಅವಧಿಗೂ ಮೊದಲು ಬಾಗಿಲು ತೆರೆಯುವುದು ಅನಿವಾರ್ಯ ಎನ್ನುತ್ತಾರೆ ಮಂಗಳೂರಿನ ವೈನ್ಶಾಪ್ ಮಾಲಿಕರೊಬ್ಬರು.[ಮದ್ಯಪ್ರಿಯರಿಗೆ ಕಿಕ್ ಕೊಡುವ ಸುದ್ದಿ : ಓಲ್ಡ್ ಮಾಂಕ್ ಅಲೈವ್!]
ಇದು ಹೀಗೆಯೇ ಮುಂದುವರಿದರೆ ಸೂಕ್ಷ್ಮ ಪ್ರದೇಶವಾಗಿರುವ ಕರಾವಳಿ ಮತ್ತೆ ಪ್ರಕ್ಷುಬ್ಧವಾಗುವುದಕ್ಕೆ ಹೆಚ್ಚು ಸಮಯ ಬೇಕಾಗದು. ಹೆಂಡದ ಸಹವಾಸ ಹೆಂಡತಿ ಮಕ್ಕಳ ಉಪವಾಸ, ಹೆಂಡ ಬಿಡಿ ಮನೆ ಕಾಪಾಡಿ ಎಂಬ ಅರಿವು ಜನರಲ್ಲಿದ್ದರೂ ಮದ್ಯದ ಸಹವಾಸದಿಂದ ದೂರವಾಗದಿರುವುದು ಮಾತ್ರ ವಿಷಾದನೀಯ.