ಮಂಗಳೂರಿನಲ್ಲಿ ಮುಗಿಯದ ರಸ್ತೆ ನಾಮಕರಣ ರಗಳೆ
ಮಂಗಳೂರು, ಆ.5 : ನಗರದ ಲೈಟ್ ಹೌಸ್ ಹಿಲ್ ರಸ್ತೆ ನಾಮಕರಣ ವಿವಾದ ಕಗ್ಗಂಟಾಗಿಯೇ ಉಳಿದಿದೆ. ಒಮ್ಮತದ ನಿರ್ಧಾರ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆ ಮುರಿದು ಬಿದ್ದಿದೆ.
ಲೈಟ್ ಹೌಸ್ ಹಿಲ್ ರಸ್ತೆಯ ನಾಮಕರಣಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕೆ ತೆರೆ ಎಳೆಯಲು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಆದರೆ, ಒಮ್ಮತದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.
ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳು ರಸ್ತೆಗೆ ಈದ್ಗಾ ಮಸೀದಿ ರಸ್ತೆ ಎಂಬುದಾಗಿ ಹೆಸರಿಡಬೇಕು ಎಂದು ವಾದಿಸಿದರು. ಸಂತ ಅಲೋಶಿಯಸ್ ಕಾಲೇಜು ಪರವಾಗಿ ಆಗಮಿಸಿದ್ದ ಪ್ರತಿನಿಧಿಗಳು ರಸ್ತೆಗೆ ಅಲೋಶಿಯಸ್ ರಸ್ತೆ ಎಂಬುದಾಗಿ ಮುಂದುವರಿಸಬೇಕೆಂದು ತಮ್ಮ ವಾದವನ್ನು ಮುಂದುವರಿಸಿದರು.
ವಿಜಯ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಸಂಘಟನೆಯ ಪ್ರತಿನಿಧಿಗಳು ಕಾನೂನು ಬದ್ಧವಾಗಿ ಸರಕಾರದಿಂದ ಆದೇಶವಾಗಿರುವ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂಬುದಾಗಿ ನಾಮಕರಣ ಮಾಡಬೇಕೆಂದು ವಾದಿಸಿದರು.
ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಪ್ರತಿನಿಧಿಗಳು ಈ ಪ್ರದೇಶವು ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಘಟನೆಗೆ ಸಾಕ್ಷಿ ಯಾಗಿರುವುದರಿಂದ ರಸ್ತೆಗೆ ಬಾವುಟ ಗುಡ್ಡೆ ರಸ್ತೆ ಎಂಬುದಾಗಿ ಹೆಸರಿಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಚಿವರು ಪರಿಶೀಲನಾ ಸಮಿತಿ ರಚನೆಗೆ ಸೂಚಿಸಿದರು. ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟಾರ್, ಇತಿಹಾಸ ಪ್ರಾಧ್ಯಾಪಕರು, ಪಾಲಿಕೆ ಆಯುಕ್ತರು ಹಾಗೂ ಅಪರ ಜಿಲ್ಲಾಧಿಕಾರಿಯನ್ನು ಒಳಗೊಂಡ ಈ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಯಿತು.
ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ವಾಸ್ತವಿಕ ಅಂಶಗಳನ್ನು ಪರಿಗಣಿಸಿ ಸಮಿತಿ ವರದಿಯನ್ನು ನೀಡಲಿದೆ. ಮುಂದಿನ ಸಭೆಯಲ್ಲಿ ವರದಿ ಮಂಡಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.
ವಿಜಯ ಬ್ಯಾಂಕ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಮಾತನಾಡಿ, 'ಪಾಲಿಕೆ ವ್ಯಾಪ್ತಿಯ ಯಾವುದಾದರೂ ರಸ್ತೆ ಅಥವಾ ವೃತ್ತಕ್ಕೆ ಸುಂದರರಾಮ ಶೆಟ್ಟಿ ಅವರ ಹೆಸರಿಡಲು ಅವಕಾಶ ನೀಡುವಂತೆ ಪಾಲಿಕೆಗೆ ಮನವಿ ಮಾಡಿದ್ದೆವು' ಎಂದರು.
'ಲೈಟ್ ಹೌಸ್ ಹಿಲ್ ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರಿಡಲು ಪಾಲಿಕೆ ಸಭೆ ನಿರ್ಣಯ ಕೈಗೊಂಡಿತ್ತು. ರಾಜ್ಯ ಸರ್ಕಾರವೂ ಇದಕ್ಕೆ ಒಪ್ಪಿಗೆ ನೀಡಿತ್ತು. ಆದರೆ, ಕಾರ್ಯಕ್ರಮ ಆಯೋಜನೆ ಮಾಡುವಾಗ ತಡೆ ತರಲಾಯಿತು. ಇದು ಸರಿಯೇ?' ಎಂದು ಕರುಣಾಕರ ಶೆಟ್ಟಿ ಪ್ರಶ್ನಿಸಿದರು.
ಫಾದರ್ ಡಯಾನಿಸಸ್ ವಾಸ್ ಮಾತನಾಡಿ, 'ನಲವತ್ತು ವರ್ಷಗಳ ಹಿಂದೆ ಮಂಗಳೂರು ಪಾಲಿಕೆಯಲ್ಲಿ ಬ್ಲೇಸಿಯಸ್ ಡಿಸೋಜ ಅಧ್ಯಕ್ಷರಾಗಿದ್ದಾಗ ಸೈಂಟ್ ಅಲಾಯ್ ರಸ್ತೆ ಎಂದು ನಾಮಕರಣ ಮಾಡಲಾದ ಕುರಿತು ನಮ್ಮಲ್ಲಿ ಎಲ್ಲಾ ದಾಖಲೆಗಳು ಇವೆ' ಎಂದರು.