ಮಂಗಳೂರು: ಕದ್ರಿ ಹಿಂದೂಗಳ ಕ್ಷೇತ್ರ, ರಾಜಕೀಯ ದೊಂಬರಾಟಕ್ಕಲ್ಲ
ಅ.29ರಂದು ಕದ್ರಿಯ ಮಂಜುನಾಥೇಶ್ವರ ದೇವಸ್ಥಾನದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ನೇತೃತ್ವದಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಆಚರಿಸಲು ಬಿಡುವುದಿಲ್ಲವೆಂದು ವಿಎಚ್ ಪಿ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ ಪುರಾಣಿಕ್ ಹೇಳಿದ್ದಾರೆ.
ಮಂಗಳೂರು, ಅಕ್ಟೋಬರ್. 27 : ಇಲ್ಲಿನ ಕದ್ರಿಯ ಮಂಜುನಾಥೇಶ್ವರ ದೇವಸ್ಥಾನದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಅ.29 ರಂದು ನಡೆಸಲುದ್ದೇಶಿಸಿರುವ ಭಾವೈಕ್ಯದ ದೀಪಾವಳಿ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.
ಬುಧವಾರ ವಿ ಎಚ್ ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಎಂ.ಬಿ. ಪುರಾಣಿಕ್, "ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಅನ್ಯಮತೀಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲುದ್ದೇಶಿಸಲಾಗಿದೆ. ಇದರಿಂದಾಗಿ ದೇವಸ್ಥಾನದ ಆಚಾರವಿಚಾರಗಳಿಗೆ ಚ್ಯುತಿ ಬರುವುದರೊಂದಿಗೆ ಹಿಂದೂಗಳ ಭಾವನೆಗೆ ಧಕ್ಕೆಯಾಗಲಿದೆ. ಕದ್ರಿ ಕ್ಷೇತ್ರ ಹಿಂದುಗಳಿಗೆ ಸೇರಿದ್ದು. ರಾಜಕೀಯ ದೊಂಬರಾಟಕ್ಕಾಗಿ ಈ ರೀತಿಯ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದು ಸರಿಯಲ್ಲ ಎಂದರು.
ಈ ಕಾರ್ಯಕ್ರಮದಿಂದ ಅಶಾಂತಿ ಸೃಷ್ಟಿಯಾಗಲಿರುವುದರಿಂದ ಸಂಬಂಧಿತರು ಕೂಡಲೇ ಕಾರ್ಯಕ್ರಮವನ್ನು ನಿರ್ಬಂಧಿಸಬೇಕು" ಎಂದು ತಾಕೀತು ಮಾಡಿದರು.
ರಾಜಕೀಯ ಪಕ್ಷ ಮತ್ತು ಪಕ್ಷದ ಮುಂದಾಳುಗಳು ಸಮಾಜವನ್ನು ಒಡೆಯಲು ಮುಂದಾಗಿದ್ದಾರೆ. ಈ ನಡೆ ಧಾರ್ಮಿಕ ದತ್ತಿ ಕಾನೂನಿಗೆ ವಿರುದ್ಧವಾಗಿದೆ ಎಂದ ಅವರು, ಕಳೆದ ಬಾರಿ ಪುತ್ತೂರು ದೇಗುಲದ ಆಮಂತ್ರಣ ಪತ್ರಿಕೆ ವಿವಾದದ ಕಾನೂನು ಹೋರಾಟವನ್ನು ನೆನಪಿಸಿದರು.
ಈ ರೀತಿ ಯಾವುದೇ ಹಿಂದೂ ದೇವಸ್ಥಾನಗಳಲ್ಲಿ ಇಂತಹ ಚಟುವಟಿಕೆ ನಡೆದಿದ್ದಿಲ್ಲ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್ ವೆಲ್, ವಿಹಿಂಪ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಬಜರಂಗದಳ ಜಿಲ್ಲಾ ಸಂಯೋಜಕ ಭುಜಂಗ ಕುಲಾಲ್, ಮಂಗಳೂರು ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಕಿಶೋರ್, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಭರತ್ ಶೆಟ್ಟಿ ಉಪಸ್ಥಿತರಿದ್ದರು.