ಕಷ್ಟದ ಬದುಕನ್ನು ಗೆದ್ದ ಸ್ವಾವಲಂಬಿಯೇ ಅನುಪಮಾ ಶೆಣೈ
ಮಂಗಳೂರು, ಜನವರಿ,30: ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಶೆಣೈ ಅವರನ್ನು ಸರ್ಕಾರ ವಿಜಯಪುರದ ಇಂಡಿಯ ಡಿವೈಎಸ್ ಪಿಯಾಗಿ ವರ್ಗಾವಣೆ ಮಾಡಿರುವುದು ಭಾರೀ ವಿವಾದಕ್ಕೆ ಈಡಾಗಿದೆ. ಸರ್ಕಾರದ ನಿರ್ಧಾರ ವಿರೋಧಿಸಿ ಕೂಡ್ಲಿಗಿ ಜನತೆ ಬಂದ್ ಗೆ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅನುಪಮಾ ಶೆಣೈ ಅವರಿಗೆ ನೈತಿಕ ಬೆಂಬಲ ವ್ಯಕ್ತವಾಗಿದೆ.
ನೂರಾರು ಮಂದಿ ಅನುಪಮಾ ಶೆಣೈ ಅವರಿಗೆ ಬೆಂಬಲ ನೀಡಿರುವುದನ್ನು ನೋಡಿದರೆ ಅನುಪಮಾ ಮೂಲತಃ ಎಲ್ಲಿಯವರು? ಅವರ ಕಾರ್ಯ ವೈಖರಿ ಹೇಗಿದೆ? ಎಷ್ಟು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ? ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಡಿವೈಎಸ್ ಪಿ ಅನುಪಮಾ ಅವರ ತಂದೆ ಉತ್ತರಿಸಿದ್ದು, ಒನ್ ಇಂಡಿಯಾದೊಂದಿಗೆ ತಮ್ಮ ಮಗಳ ಬದುಕಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಅನುಪಮಾ ತಂದೆ ರಾಧಾಕೃಷ್ಣ ಶೆಣೈ ಕ್ಯಾಂಟೀನ್ ನಡೆಸುತ್ತಾ, ತಾಯಿ ಬಿಡಿ ಕಟ್ಟುವ ಮೂಲಕ ಮೂವರು ಮಕ್ಕಳನ್ನು ಉನ್ನತ ಹುದ್ದೆಗೇರುವಂತೆ ಮಾಡಿದ್ದಾರೆ. ಆದರೂ ಇವರು 45 ವರ್ಷದಿಂದ ಮಾಡಿಕೊಂಡು ಬಂದಿರುವ ವೃತ್ತಿಯನ್ನು ಬಿಟ್ಟಿಲ್ಲ.[ಡಿವೈಎಸ್ ಪಿ ಅನುಪಮಾ ವರ್ಗಾವಣೆ ಖಂಡಿಸಿ ಕೂಡ್ಲಿಗಿ ಬಂದ್]
ಮಗಳು ಅನುಪಮಾ ಶೆಣೈಯ ಕಾರ್ಯವೈಖರಿ ಬಗ್ಗೆ ಹೆಮ್ಮೆ ಪಡುವ ತಂದೆಯ ಮಾತುಗಳು, ಅನುಪಮಾ ಅವರ ವೈಯಕ್ತಿಕ ಬದುಕಿನ ಕಡೆ ಒಂದು ಕುಡಿ ನೋಟ ಇಲ್ಲಿದೆ.
ಅನುಪಮಾ ಶೆಣೈ ಮೂಲತಃ ಎಲ್ಲಿಯವರು?
ಡಿವೈಎಸ್ ಪಿ ಅನುಪಮಾ ಶೆಣೈ ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಫಣಿಯೂರಿನವರು. ಇವರ ತಂದೆ ರಾಧಾಕೃಷ್ಣ ಶೆಣೈ. ಇವರಿಗೆ ಅನುಪಮಾ ಶೆಣೈ, ಅರವಿಂದ್ ಶೆಣೈ, ಅಚ್ಯುತ ಶೆಣೈ ಎಂಬ ಮೂವರು ಮಕ್ಕಳು.
ಅನುಪಮಾ ಓದಿದ್ದು ಎಲ್ಲಿ?
ರಾಧಾಕೃಷ್ಣ ಶೆಣೈ ಅವರ ಮೊದಲ ಮಗಳಾದ ಅನುಪಮಾ ಶೆಣೈ ಮಂಗಳೂರಿನ ಅಜ್ಜಿ ಮನೆಯಲ್ಲಿ ಓದಿ ಬೆಳೆದವರು. ಸೈಂಟ್ ಅಲೋಶಿಯಸ್ ಮತ್ತು ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಅನುಪಮಾ ಸಹೋದರರಾದ ಅರವಿಂದ್ ಶೆಣೈ ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಚ್ಯುತ ಶೆಣೈ ವಿದೇಶದಲ್ಲಿ ನೆಲೆಸಿದ್ದಾರೆ.
ಸ್ವಾವಲಂಬಿ ಬದುಕು ಇಷ್ಟಪಟ್ಟ ಅನುಪಮಾ
ಬಾಲ್ಯದಲ್ಲಿ ಅನುಪಮಾ ಶೆಣೈ ಬಹಳ ಚುರುಕು. ಆದರೆ ಅವರ ಬದುಕು ಹೂವಿನಂತೆ ಕೋಮಲವಾಗಿರಲಿಲ್ಲ. ಆದರೆ ಅವರು ಎಂದಿಗೂ ಬಡತನದ ಬದುಕಿಗೆ ಅಂಜಿದವರಲ್ಲ. ಇದರಲ್ಲೇ ಈಜುತ್ತಾ ಯಶಸ್ಸಿನ ಶಿಖರ ಏರಿದವರು.ಬಡತನ ಗುರಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ತೋರಿಸಿಕೊಟ್ಟವರು. ಜೀವನದಲ್ಲಿ ಬಂದ ಕಷ್ಟವನ್ನೆಲ್ಲಾ ಸರಾಗವಾಗಿ ನಿಭಾಯಿಸಿಕೊಂಡು ಓದಿ ಡಿವೈಎಸ್ ಪಿ ಹುದ್ದೆಗೇರಿದ ಇವರು ಸ್ವಾವಲಂಬಿ ಬದುಕನ್ನು ಇಷ್ಟಪಟ್ಟವರು.(ಚಿತ್ರದಲ್ಲಿ ಅನುಪಮಾ ಗೆದ್ದ ಪ್ರಶಸ್ತಿ]
ಅನುಪಮಾ ಅವರ ತಂದೆ ರಾಧಾಕೃಷ್ಣ ಶೆಣೈ ಹೇಳುವುದೇನು?
ಅನುಪಮಾ ಅವರ ತಂದೆ ರಾಧಾಕೃಷ್ಣ, 'ಅನುಪಮಾ ಕಾರ್ಯವೈಖರಿ ಕಂಡು ಬಳ್ಳಾರಿ ಜನತೆ ಖುಷಿ ಪಟ್ಟಿದ್ದಾರೆ. ಅವಳನ್ನು ಅಲ್ಲಿಯೇ ಉಳಿಸಿಕೊಳ್ಳಲು ಪ್ರತಿಭಟನೆ ಕೂಡಾ ನಡೆಸುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ರಾಧಾಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರ ಕೆಂಗಣ್ಣಿಗೆ ಗುರಿಯಾಗಿರುವ ಅನುಪಮಾ ಅವರು ಸುದೀರ್ಘ ರಜೆ ಮೇಲೆ ತೆರಳಿದ್ದಾರೆಯೇ ಅಥವಾ ಅವರನ್ನು ವಿಜಯಪುರಕ್ಕೆ ವರ್ಗಾವಣೆ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಇವರಿಗೆ ಮಾಹಿತಿ ಇಲ್ಲ.