ಮಂಗಳೂರು : ಡಾ.ಮೋಹನ್ ಆಳ್ವರ ಪರ ಫ್ಲೆಕ್ಸ್ಗಳಿಗೆ ಮಸಿ
ಮಂಗಳೂರು, ಆ, 12: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯ ಅಸಹಜ ಸಾವಿನ ಪಾರದರ್ಶಕ ತನಿಖೆಗೆ ಒತ್ತಾಯಿಸಿ ಹೋರಾಟಗಳು ಆರಂಭವಾಗಿವೆ. ಇನ್ನೊಂದೆಡೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವರ ಪರ ಸಭೆಗಳು ಆಯೋಜನೆಗೊಳ್ಳುತ್ತಿವೆ. ಈ ಪರ ಹಾಗೂ ವಿರೋಧ ನಿಲುವುಗಳು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ.
ಮಂಗಳೂರಿನಲ್ಲಿ ಕಾವ್ಯಳ ಸಾವಿಗೆ ನ್ಯಾಯ ಒದಗಿಸಬೇಕು ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ರಣಕಹಳೆ ಮೊಳಗಿಸಿದರು.
ಈ ನಡುವೆ ಆಳ್ವರ ಪರ ಕೂಗು ಕೂಡ ಗಟ್ಟಿಗೊಳ್ಳುತ್ತದೆ. ಡಾ.ಮೋಹನ್ ಆಳ್ವಾ ಅವರ ಚಾರಿತ್ರ್ಯವಧೆ, ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಮಂಗಳೂರಿನ ಪುರಭವನದಲ್ಲಿ 'ನುಡಿಸಿರಿಯ ಧ್ವನಿ ಆಳ್ವಾರೊಂದಿಗೆ ನಾವು' ಎನ್ನುವ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡಾ ಸಾಧಕ ಹಾಗೂ ಸಂಘಟಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಹಿಂದೂ ಮಹಾಸಭಾ ಕಾರ್ಯಕರ್ತರು ಬೆದರಿಕೆ ಒಡ್ಡಿದ್ದರು. ಕಾರ್ಯಕ್ರಮಕ್ಕೆ ನುಗ್ಗಲು ಯತ್ನಿಸಿದ ಹಿಂದೂ ಮಹಾಸಭಾದ ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.
ಶನಿವಾರ ಮೂಡಬಿದ್ರೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಮೋಹನ್ ಆಳ್ವಾರ ಅಭಿಮಾನಿ ಬಳಗ ಬೃಹತ್ ಬೆಂಬಲ ಸಭೆಯನ್ನು ಆಯೋಜಿಸಿದೆ. ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಈ ಬೆಂಬಲ ಸಭೆ ಆಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಭಾರೀ ಪ್ರಚಾರ ಕೂಡ ಮಾಡಲಾಗಿದೆ. ಅಲ್ಲಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕಲಾಗಿದೆ .
ಆದರೆ, ರಸ್ತೆ ಬದಿಯಲ್ಲಿ ಹಾಕಲಾಗಿರುವ ಈ ಬ್ಯಾನರ್, ಫ್ಲೆಕ್ಸ್ ಗಳಿಗೆ ಹಾನಿ ಉಂಟು ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಹಾಕಲಾಗಿರುವ ಫ್ಲೆಕ್ಸ್ ಗಳಿಗೆ ಮಸಿ ಎರಚಲಾಗಿದೆ. ಸಗಣಿ ಸಾರಲಾಗುತ್ತಿದೆ, ಕೆಲವೆಡೆ ಫ್ಲೆಕ್ಸ್ ಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಲಾಗಿದೆ. ಜನ ಬಲದ ಮುಂದೆ ನಿಮ್ಮ ಹಣ ಬಲ ಇಲ್ಲ ಎಂದು ಫ್ಲೆಕ್ಸ್ ಮೇಲೆ ಬರೆಯಲಾಗುತ್ತಿದೆ.
ಈ ಬೆಳವಣಿಗೆಗಳು ಕಾವ್ಯ ಪ್ರಕರಣದ ಪರ ವಿರೋಧದ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇನ್ನೊಂದೆಡೆ ಇದು ಬಿಲ್ಲವ, ಬಂಟರ ಪ್ರತಿಷ್ಠೆ ಅಖಾಡ ಆಗುತ್ತಿದೆಯೇ ಎನ್ನುವ ಸಂಶಯ ಕೂಡ ಮೂಡುತ್ತಿದೆ.