ಕಟೀಲು ದೇಗುಲ ಮುಕ್ತೇಸರ ಮನೆ ಕಳವು: 12ನೇ ಆರೋಪಿ ಬಂಧನ
ಮಂಗಳೂರು, ಫೆಬ್ರವರಿ. 10 : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಶ್ರೀ.ವಾಸುದೇವ ಅಸ್ರಣ್ಣರವರ ಮನೆಯಲ್ಲಿ ನಡೆದ ಡಕಾಯತಿ ಪ್ರಕರಣಕ್ಕೆ ಸಂಬಂಧಿಸಿದಂತೆ 12ನೇ ಆರೋಪಿಯನ್ನು ಗುರುವಾರ ಸಂಜೆ ಬಜ್ಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ತೆಂಕ ಎಕ್ಕಾರು ನಿವಾಸಿ ಪ್ರದೀಪ್ ಶೆಟ್ಟಿ(22) ಎಂದು ಗುರುತಿಸಲಾಗಿದೆ. ಈಗಾಗಲೇ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಇನ್ನೂ 6 ಮಂದಿ ತಲೆಮರಿಸಿಕೊಂಡಿದ್ದು ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.[ಕಟೀಲು ದೇಗುಲ ಮೊಕ್ತೇಸರರ ಮನೆಯಲ್ಲಿ ಲಕ್ಷಾಂತರ ರುಪಾಯಿ ಕಳವು]
ಆರೋಪಿ ಪ್ರದೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸುಧೀಂದ್ರ, ಭರತ್ ಶೆಟ್ಟಿ ಅವರನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ. ಆರೋಪಿ ಪ್ರದೀಪ್ ಶೆಟ್ಟಿ ತೆಂಕ ಎಕ್ಕಾರುವಿನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಘಟನೆ ವಿವರ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಾಸುದೇವ ಅಸ್ರಣ್ಣ ಅವರ ಮನೆಗೆ ಅಕ್ಟೋಬರ್ 3ರ ತಡರಾತ್ರಿ ಎಂಟು ಮಂದಿ ಮುಸುಕುಧಾರಿಗಳ ತಂಡ ನುಗ್ಗಿ ಮನೆಯವರನ್ನೆಲ್ಲಾ ಕಟ್ಟಿ ಹಾಕಿ ಸುಮಾರು 55 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿ ಪರಾರಿಯಾದ ಘಟನೆ ನಡೆದಿತ್ತು.
ಈ ಹಿನ್ನಲೆಯಲ್ಲಿ ಡಕಾಯತಿ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದರು. ಇದೀಗ 12ನೇ ಆರೋಪಿಯಾದ ಪ್ರದೀಪ್ ಶೆಟ್ಟಿಯನ್ನು ಬಂಧಿಸಿದ್ದಾರೆ.
ಇದಲ್ಲದೆ ಆರೋಪಿಯನ್ನು ನ್ಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.