ಡಿ.17ರಂದು ಕಟೀಲು ಮೇಳದಿಂದ 50ನೇ ಸೇವಾ ಬಯಲಾಟ
ಇದೇ ಡಿಸೆಂಬರ್ 17ರಂದು ಕೃಷ್ಣಪುರದಲ್ಲಿ ಕಟೀಲು ದುರ್ಗಾಪರಮೇಶ್ವರಿಯ 50ನೇ ಸೇವಾ ಬಯಲಾಟ ನಡೆಯಲಿದೆ. ಈ ಸಂದರ್ಭದಲ್ಲಿ ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾಸಿಸಲಾಗುತ್ತದೆ.
ಮಂಗಳೂರು, ಡಿಸೆಂಬರ್ 15: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಬಯಲಾಟ ಸೇವಾ ಸಮಿತಿ ಹಾಗೂ ಸುವರ್ಣ ಮಹೋತ್ಸವ ಸಮಿತಿ ವತಿಯಿಂದ ಕೃಷ್ಣಾಪುರದಲ್ಲಿ ಇದೇ ಶನಿವಾರ(ಡಿಸೆಂಬರ್ 17) 50ನೇ ವರ್ಷದ ಸೇವಾ ಬಯಲಾಟ ನಡೆಯಲಿದೆ.
ಕೃಷ್ಣಾಪುರದ ಐದನೇ ಬ್ಲಾಕಿನ ಕೇಂದ್ರ ಮೈದಾನದಲ್ಲಿ 50ನೇ ಸೇವಾ ಬಯಲಾಟವಾಗಿ ಶ್ರೀದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗ ಬಯಲಾಟ ಪ್ರದರ್ಶನಗೊಳ್ಳಲಿದೆ. [ಕಟೀಲು ದುರ್ಗಾಪರಮೇಶ್ವರಿ ದೇವಿ ಬಗ್ಗೆ ಅವಹೇಳನಕಾರಿ ಸಂದೇಶ]
ಇದೆ ವೇಳೆ ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೆಲ್ಲಿಕಟ್ಟೆ ಶ್ರೀ ನಾರಾಯಣ ಹಾಸ್ಯಗಾರ ಸೇರಿದಂತೆ ಇನ್ನಿತರ ಸಾಧಕರಿಗೆ ಸನ್ಮಾನಿಸಲಾಗುವುದು. ಜೊತೆಗೆ ಚೌಕಿ ಪೂಜೆ ಜೊತೆಗೆ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ಮಾಡಲು ತೀರ್ಮಾನಿಸಲಾಗಿದೆ.[ಕಟೀಲು ಪ್ರಕರಣ: ಮುಂಬೈ ಫೇಸ್ಬುಕ್ ಕಚೇರಿಗೆ ಮಂಗಳೂರು ಪೊಲೀಸ್ ಭೇಟಿ]
ಕಟೀಲು ಮೇಳದ ಇತಿಹಾಸವೇನು?: 1960 ರ ದಶಕದಲ್ಲಿ ನವಮಂಗಳೂರು ಬಂದರು ರಚನೆಗೊಂಡಾಗ ಪಣಂಬೂರು, ಬೈಕಂಪಾಡಿ ಮತ್ತಿತರ ಗ್ರಾಮಗಳಿಂದ ಜನರನ್ನು ಒಕ್ಕಲೆಬ್ಬಿಸಿ ಕಾಟಿಪಳ್ಳ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
1968 ರಲ್ಲಿ ಹೀಗೆ ಸ್ಥಳಾಂತರಿಸಲ್ಪಟ್ಟ ನೂರಾರು ಮನೆಗಳು ಹಾಗೂ ಆದಾಗಲೇ ಹತ್ತಿರದ ಬೊಳ್ಳಾಜೆ ಪ್ರದೇಶದಲ್ಲಿ ವಾಸ್ತವ್ಯವಿದ್ದ ಹತ್ತಾರು ಮನೆಗಳ ನಿವಾಸಿಗಳು ಒಟ್ಟು ಸೇರಿ ಆದುವರೆಗೆ ಯಾವುದೇ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಕಂಡರಿಯದ ಪ್ರದೇಶದಲ್ಲಿ ಯಕ್ಷಗಾನ ಬಯಲಾಟ ಸೇವೆಯನ್ನು ಮಾಡುವ ನಿರ್ಧಾರ ಮಾಡಲಾಯಿತು.
ಇದರ ಫಲವೇ ಕಟೀಲು ಮೇಳದವರಿಂದ ಊರಿನ ಹತ್ತು ಸಮಸ್ತರ ವತಿಯಿಂದ 1968ರ ಮಾರ್ಚ್ 24 ರಂದು ಪ್ರಥಮ ಯಕ್ಷಗಾನ ಸೇವಾ ಬಯಲಾಟ ನಡೆಸಲಾಯಿತು.
ಈ ಮೂಲಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಬಯಲಾಟ ಸೇವಾ ಸಮಿತಿ ಅಸ್ತಿತ್ವಕ್ಕೆ ಬಂತು. ಇದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಎರಡನೇ ಸೇವಾ ಬಯಲಾಟ ನಡೆಸಿದ ಸಮಿತಿಯು ಮುಂದೆ ಪ್ರತಿ ವರ್ಷ ಶ್ರೀ ಮಾತೆಯ ಸೇವಾ ಬಯಲಾಟ ನಡೆಸುವ ತೀರ್ಮಾನ ಮಾಡಿತು. ಈ ಬಾರಿ ಐವತ್ತನೇ ವರ್ಷದ ಸೇವಾ ಬಯಲಾಟ ನಡೆಯಲಿದೆ.