ಎಸ್ಸೆಸ್ಸೆಲ್ಸಿ ಫಲಿತಾಂಶ: ಹಳ್ಳಿಹೈದ ಪೂರ್ಣಾನಂದನ ಅಪ್ರತಿಮ ಸಾಧನೆ
ಇಂದು ಹೊರಬಿದ್ದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಗಳಿಸಿದ ಹಳ್ಳಿಹೈದ ಮಂಗಳೂರಿನ ಪೂರ್ಣಾನಂದ 'ಒನ್ ಇಂಡಿಯಾ' ಜೊತೆ ತಮ್ಮ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ್ದು ಹೀಗೆ.
ಮಂಗಳೂರು, ಮೇ 12: ದ.ಕ.ಜಿಲ್ಲೆಗೆ ಕಡಬ ಅಂದ್ರೆ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶ. ಆ ಕಡಬವನ್ನು ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದಾತ 15ರ ಬಾಲಕ ಪೂರ್ಣಾನಂದ. ಇಂದು ಹೊರಬಿದ್ದ ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕರ್ನಾಟಕಕ್ಕೇ ಈತ ಟಾಪರ್. 625ಕ್ಕೆ 625 ಮಾರ್ಕು ಗಳಿಸಿದ ಹಳ್ಳಿಹೈದ! 'ಒನ್ ಇಂಡಿಯಾ' ಜೊತೆ ಮಾತನಾಡಿದ ಪೂರ್ಣಾನಂದ ತಮ್ಮ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ್ದು ಹೀಗೆ.
ಕಡಬ ಸೈಂಟ್ ಜಾಕಿಮ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಎಚ್.ಪೂರ್ಣಾನಂದನ ಫಲಿತಾಂಶದಿಂದಾಗಿ ಇಂದು ಊರಿನಲ್ಲಿ ಪರಮಾನಂದದ ಛಾಯೆ. ಕಡಬಕ್ಕೆ ಕಡಬವೇ ಸಡಗರ ಪಡುತ್ತಿದೆ.[ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಅಂಕ ಪಡೆದ ಈ ಮೂವರಿಗೆ ಅಭಿನಂದನೆ]
ಪೂರ್ಣಾನಂದ ಬಡ-ಕೃಷಿಕುಟುಂಬದಲ್ಲಿ ಬೆಳೆದ ಹುಡುಗ. ಮನೆಯಿಂದ ಆರು ಕಿ.ಮೀ.ದೂರದಲ್ಲಿರುವ ಶಾಲೆಗೆ ಕುಟ್ರುಪ್ಪಾಡಿ ಗ್ರಾಮದ ಹಳ್ಳಂಗೇರಿ ಮನೆಯ ಕುಗ್ರಾಮದಿಂದ ದಿನನಿತ್ಯ 2 ಕಿ.ಮೀ. ನಡೆದುಕೊಂಡು ಹೊಸಮಠ ಮುಖ್ಯರಸ್ತೆಗೆ ಬರುತ್ತಿದ್ದ ಪೂರ್ಣಾನಂದ, ಅಲ್ಲಿಂದ 4 ಕಿ.ಮೀ. ಬಸ್ ಪ್ರಯಾಣ ಮೂಲಕ ಶಾಲೆಗೆ ತಲುಪುತ್ತಿದ್ದ. ಇದು 8ನೇ ತರಗತಿಯಿಂದ ಈ ತನಕ ದಿನನಿತ್ಯ ನಡೆಯುತ್ತಿತ್ತು. ಒಂದನೇ ತರಗತಿಯಿಂದ ಈ ತನಕ ಅದೇ ಸೈಂಟ್ ಜಾಕಿಮ್ಸ್ ಶಾಲೆಯಲ್ಲಿ ಕಲಿತ ಪೂರ್ಣಾನಂದನಿಗೆ ವಿದ್ಯಾ ಸಂಸ್ಥೆಯ ಸಿಬ್ಬಂದಿ, ಆಡಳಿತ ವರ್ಗದ ಪ್ರೋತ್ಸಾಹ ಸಾಕಷ್ಟು ಸಿಕ್ಕಿದೆ.
'ನನ್ನ ಹೆತ್ತವರ ಉತ್ತೇಜನದಿಂದ ಇಂದು ಅನಿರೀಕ್ಷಿತ ಫಲಿತಾಂಶ ಬಂದಿದೆ. ರಾಜ್ಯಕ್ಕೆ ಟಾಪರ್ ಅಂತ ಅನ್ನಿಸಿರಲಿಲ್ಲ. ಮುಂದೆ ಅಗ್ರಿಕಲ್ಚರ್ ಬಿಎಸ್ಸಿ ಮಾಡಬೇಕೆಂಬ ಬಯಕೆ ಇದೆ ಅಂತಾರೆ ಪೂರ್ಣಾನಂದ. ಚೆಸ್ ಹಾಗೂ ಕೇರಂ ನಲ್ಲೂ ಈತನಿಗೆ ಆಸಕ್ತಿಯಿದೆ.[SSLC ಫಲಿತಾಂಶ : ಉಡುಪಿಗೆ ಮೊದಲ ಸ್ಥಾನ, ಬೀದರ್ ಗೆ ಕೊನೆ ಸ್ಥಾನ]
ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ, ಕೃಷಿಕ ವಿಷ್ಣುಮೂರ್ತಿ ಹಾಗೂ ಸುಳ್ಯ ಪಾಲಿಟೆಕ್ನಿಕ್ ನಲ್ಲಿ ಲೈಬ್ರೆರಿಯನ್ ಆಗಿ ನಿವೃತ್ತಿಯಾಗಿರುವ ಸವಿತಾ ದಂಪತಿಯ ದ್ವಿತೀಯ ಪುತ್ರನಾಗಿರುವ ಪೂರ್ಣಾನಂದ, ರಾಜ್ಯಕಂಡ ಅಪೂರ್ವ ಪ್ರತಿಭೆ ಎನ್ನಲು ಖುಷಿಯಾಗುತ್ತಿದೆ ಎನ್ನುತ್ತಾರೆ ಹೆತ್ತವರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು.
ಮೊದಲನೆಯವ ಶ್ರೀರಾಮ ಮಂಗಳೂರಿನಲ್ಲಿ ಜಿಟಿಟಿಸಿ ಡಿಪ್ಲೊಮಾ ಮಾಡಿ ಪ್ರಸ್ತುತ ದೊಡ್ಡಬಳ್ಳಾಪುರದಲ್ಲಿ ತರಬೇತಿಯಲ್ಲಿದ್ದಾರೆ. ಪೂರ್ಣಾನಂದ ಸಾಧನೆ ಜೊತೆಗೆ ದೇವರ ಅನುಗ್ರಹ ಇದೆ ಅನ್ನುತ್ತಾರೆ ಆತನ ತಂದೆ ವಿಷ್ಣುಮೂರ್ತಿ. ಒಟ್ಟಿನಲ್ಲಿ ಈ ಫಲಿತಾಂಶ ಕರಾವಳಿ ಜಿಲ್ಲೆಗೆ ಹೆಮ್ಮೆ ತಂದಿದೆ. ಪೂರ್ಣಾನಂದನ ಮುಂದಿನ ಬಾಳು ಇದೇ ರೀತಿ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ.