ಪೊಲೀಸರು ಕರ್ತವ್ಯ ನಿಷ್ಠೆ, ಕಾನೂನು ಮರೆಯಬಾರದು: ಸಕ್ಸೇನಾ
ಮಂಗಳೂರು, ಜೂನ್ 19 : ಕೆಲವೊಮ್ಮೆ ಎಲ್ಲಾ ಸಮಸ್ಯೆಗಳನ್ನು ಭಾವನಾತ್ಮಕವಾಗಿ ಮಾನವೀಯ ನೆಲೆಯಲ್ಲಿ ಪೊಲೀಸರಿಗೆ ಪರಿಹರಿಸಲು ಸಾಧ್ಯವಾಗದಿದ್ದರೂ ಕರ್ತವ್ಯ ನಿಷ್ಠೆ ಹಾಗೂ ಕಾನೂನನ್ನು ಯಾವತ್ತೂ ಮರೆಯಬಾರದು ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮಿರಾ ಸಕ್ಸೇನಾ ಅವರು ಪೊಲೀಸರಿಗೆ ಸಲಹೆ ನೀಡಿದರು.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು (ಸೋಮವಾರ) ರಾಜ್ಯ ಮಾನವ ಹಕ್ಕುಗಳ ಆಯೋಗ, ಪೊಲೀಸ್ ಇಲಾಖೆ, ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾ, ಅಕಾಡೆಮಿ ಆಫ್ ಗಾಂಧಿಯನ್ ಸ್ಟಡೀಸ್ ಆಶ್ರಯದಲ್ಲಿ ಮಾನವ ಹಕ್ಕು, ಲಿಂಗತ್ವ ಸಮಾನತೆ ಮತ್ತು ಮಾನವ ಕಳ್ಳ ಸಾಗಾಣಿಕೆ ಕುರಿತು ಪೊಲೀಸ್ ಸಿಬ್ಬಂದಿಗೆ ಆಯೋಜಿಸಲಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿ, ಪೊಲೀಸರು ತಮ್ಮ ಜತೆ ಅನುಚಿತವಾಗಿ ವರ್ತಿಸಿದ್ದಾರೆ, ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂಬುದಾಗಿ ದೂರು ನೀಡುವವರು ಆಯೋಗಕ್ಕೆ ದೂರುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮಿರಾ ಸಕ್ಸೇನಾ ಬೇಸರ ವ್ಯಕ್ತಪಡಿಸಿದರು.
ಕೆಲ ದೂರುಗಳು ಸುಳ್ಳೂ ಆಗಿರಬಹುದು. ಆದರೆ, ತಮ್ಮನ್ನು ರಕ್ಷಿಸಬೇಕಾದವರಿಂದಲೇ ತಮಗೆ ರಕ್ಷಣೆ ದೊರೆಯದಂತಹ ಪರಿಸ್ಥಿತಿ ಸಾರ್ವಜನಿಕರಿಗೆ ಎದುರಾಗಬಾರದು. ರಾತ್ರಿ ಹೊತ್ತು ಮನೆಗಳಿಗೆ ನುಗ್ಗಿ ನೋಟಿಸ್ ನೀಡದೆ ಬಂಧಿಸುವುದು.
ಕೆಲ ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರ ವಿಚಾರಣೆ ವೇಳೆ ಸತ್ಯವನ್ನು ಹೊರತರಲೆಂದು ಅಮಾನುಷವಾಗಿ ಹೊಡೆಯುವುದು. ಹೊಡೆತ ತಿಂದವ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀಳುತ್ತದೆ. ಇದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದರು.