ಪ್ರಭಾಕರ್ ಭಟ್ ವಿರುದ್ಧದ ವಿಚಾರಣೆಗೆ ಹೈ ಕೋರ್ಟ್ ತಡೆಯಾಜ್ಞೆ
ಮಂಗಳೂರು, ಆಗಸ್ಟ್ 23: ಪ್ರಚೋದನಕಾರಿ ಭಾಷಣ ಮಾಡಿ ಕೋಮು ಗಲಭೆಗೆ ಕಾರಣವಾದ ಆರೋಪದಲ್ಲಿ ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ.
ಗಾಲಿ ಜನಾರ್ದನ ರೆಡ್ಡಿಯಿಂದ ಕಲ್ಲಡ್ಕ ಶಾಲೆಗೆ 26 ಲಕ್ಷ ದೇಣಿಗೆ
ಪ್ರಕರಣದಲ್ಲಿ ತಮ್ಮ ವಿರುದ್ಧ ವಿಚಾರಣೆಗೆ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ನೀಡಿದ್ದ ಪೂರ್ವಾನುಮತಿ ಮತ್ತು ಬೆಳ್ತಂಗಡಿ ಸಿವಿಲ್ ಜೆಎಂಎಫ್ ನ್ಯಾಯಾಲಯ ನೀಡಿದ್ದ ಸಮನ್ಸ್ ರದ್ದು ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠವು ಮುಂದಿನ ಆದೇಶದವರೆಗೆ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬೆಳ್ತಂಗಡಿ ಸಿವಿಲ್ ಜೆಎಂಎಫ್ ಸಿ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು.
ಜತೆಗೆ ಅರ್ಜಿಯ ಸಂಬಂಧ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಅಧೀನ ಕಾರ್ಯದರ್ಶಿ ಮತ್ತು ಬಂಟ್ವಾಳ ನಗರ ಠಾಣಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಶೋಭಾ ಕರಂದ್ಲಾಜೆಯವರಿಂದ ಕಲ್ಲಡ್ಕ ಶಾಲೆಗೆ ಅಕ್ಕಿ ಭಿಕ್ಷೆ ಅಭಿಯಾನ
2014ರ ಫೆಬ್ರವರಿ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ತರುಣ ಸಮಾವೇಶ ಹಾಗೂ ಭಾರತ್ ಮಾತಾ ಪೂಜಾ ಉತ್ಸವದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಈ ವರ್ಷದ ಮಾರ್ಚ್ ನಲ್ಲಿ ಪೂರ್ವಾನುಮತಿ ನೀಡಲಾಗಿತ್ತು.
ಆ ನಂತರ ಪೊಲೀಸರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಂಟ್ವಾಳ ಪೊಲೀಸರು ದೂರು ದಾಖಲಿಸಿದ್ದರು. ಬೆಳ್ತಂಗಡಿ ಸಿವಿಲ್ ಜೆಎಂಎಫ್ ಸಿ ನ್ಯಾಯಾಲಯವು ವಿಚಾರಣೆಗೆ ಹಾಜರಾಗಲು ಸೂಚಿಸಿ ಕಳೆದ ಜೂನ್ 12 ರಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಪ್ರಭಾಕರ್ ಭಟ್ ಹೈಕೋರ್ಟ್ ಮೆಟ್ಟಿಲೇರಿದ್ದರು.