ಕರಾವಳಿ ತೆಂಗು ಬೆಳೆಗಾರರನ್ನು ಕಂಗೆಡಿಸಿದ 'ಹಳದಿ ರೋಗ'
ಮಂಗಳೂರು, ಜನವರಿ. 14 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಗಿನ ಹುಳಬಾಧೆ ಮತ್ತೆ ಕಂಡುಬಂದಿದೆ. ಇದರಿಂದ ರೈತರ ಆತಂಕಕ್ಕೆ ಕಾರಣವಾಗಿದೆ. ಕೇರಳ ಜಿಲ್ಲೆ ಸೇರಿದಂತೆ ಕರಾವಳಿಯ ಹಲವೆಡೆಗಳಲ್ಲಿ ತೆಂಗುಗಳು ಹಳದಿ ಬಣ್ಣಕ್ಕೆ ತಿರುಗಿವೆ.
ಕೆಲ ವರ್ಷಗಳ ಹಿಂದೆ ಕಂಡು ಬಂದ ಬಳಿಕ ದೂರವಾಗಿದ್ದ ಹುಳಬಾಧೆ ಇದೀಗ ಬಿಸಿಲ ತಾಪಕ್ಕೆ ಮತ್ತೆ ಹೆಚ್ಚಾಗಿದೆ. ಆರಂಭದಲ್ಲೇ ಈ ಕೀಟಬಾಧೆಗೆ ಕಡಿವಾಣ ಹಾಕದಿದ್ದಲ್ಲಿ ಇದು ತೆಂಗಿಗೆ ಮಾರಕವಾಗಿ ಪರಿಣಮಿಸಲಿದೆ.
ಕಾಸರಗೋಡು ಸುತ್ತಮುತ್ತಲಿನ ನೀಲೇಶ್ವರ, ಕಾಪಾಡ್, ಪರಪ್ಪನಂಗಡಿ ಮೊದಲಾದ ಪ್ರದೇಶಗಳಲ್ಲಿ ಈ ಕೀಟಬಾಧೆ ಕಾಣಿಸಿಕೊಂಡಿದೆ. ಇದು ಮಂಗಳೂರಿನ ಸುತ್ತ- ಮುತ್ತಲೂ ಕಾಣಿಸಿಕೊಂಡಿದೆ. ಇದೀಗ ದ.ಕ. ಜಿಲ್ಲೆಯ ಉಳ್ಳಾಲದಲ್ಲೂ ಈ ಕೀಟಬಾಧೆ ಪತ್ತೆಯಾಗಿದೆ.
ರೋಗದ ಲಕ್ಷಣಗಳೇನು.? ವೇಗವಾಗಿ ಒಂದು ಮರದಿಂದ ಇನ್ನೊಂದು ಮರಕ್ಕೆ ಈ ಕೀಟಬಾಧೆ ಹರಡುತ್ತಿದೆ. ಈ ರೋಗ ಕಾಣಿಸಿಕೊಂಡಲ್ಲಿ ತೆಂಗಿನ ಗರಿಗಳು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿ ಫಸಲು ಸಂಪೂರ್ಣ ಕುಸಿಯುತ್ತದೆ.
ತೆಂಗಿನಗರಿಗಳ ಅಡಿಭಾಗದಲ್ಲಿ ಹುಳಗಳು ಉತ್ಪತ್ತಿಯಾಗುತ್ತಿದ್ದು, ಇದು ಕ್ಷಿಪ್ರವಾಗಿ ವೇಗವಾಗಿ ಹರಡುತ್ತಿದೆ. ಆದರೆ, ಈ ಕೀಟಬಾಧೆ ಎಲ್ಲೆಡೆ ಹರಡುತ್ತಿದ್ದರೂ ಕೃಷಿ ಇಲಾಖೆ ಇದರ ನಿಯಂತ್ರಣಕ್ಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ.
ಈ ಮಧ್ಯೆ ಕೇಂದ್ರ ತೋಟಗಾರಿಕಾ ಸಂಶೋಧನಾ ಕೇಂದ್ರವು ಈ ರೋಗದ ನಿಯಂತ್ರಣಕ್ಕೆ ಗಂಭೀರವಾಗಿ ಚಿಂತನೆ ನಡೆಸಿದೆ. ಇದಕ್ಕಾಗಿ ರೋಗ ನಿಯಂತ್ರಣ ಕುರಿತು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಕೀಟಬಾಧೆ ದೊಡ್ಡ ಸವಾಲಾಗಿ ಪರಿಣಮಿಸಿದೆ.