ಮತಬೇಟೆಗಾಗಿ ಭಟ್ಟರ ತಡವಿಕೊಂಡರೆ 'ಹುಲಿವಂಶ'ದ ರಮಾನಾಥ್ ರೈ!
ಮಂಗಳೂರು, ಜೂನ್ 20: ಕಲ್ಲಡ್ಕ ಪ್ರಭಾಕರ ಭಟ್ಟರ ಬಗ್ಗೆ ಹೇಳಿಕೆ ನೀಡುವ ಮೂಲಕ ವಿಪರೀತವಾಗಿ ಸುದ್ದಿಗೆ ಬಂದಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ. ಇದೀಗ ರೈ ಅವರ ಹೇಳಿಕೆಯ ಪರ ಹಾಗೂ ವಿರುದ್ಧವಾಗಿ ರಾಜ್ಯದಾದ್ಯಂತ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ವಿಚಾರ ವಿಧಾನಸಭೆ ಅಧಿವೇಶನದಲ್ಲೂ ಪ್ರತಿಧ್ವನಿಸಿ, ಕೋಲಾಹಲವನ್ನೇ ಎಬ್ಬಿಸಿತು. ಆದರೆ ರಮಾನಾಥ ರೈ ಅವರ ಹೇಳಿಕೆ ವಿಡಿಯೋ ಬಹಿರಂಗ ಆಗಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಎಂಬ ಸಂಶಯ ದಕ್ಷಿಣ ಕನ್ನಡದ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ನಾನು ಹುಲಿವಂಶದವನು: ಕಲ್ಲಡ್ಕ ಭಟ್ರಿಗೆ ರಮಾನಾಥ್ ರೈ ತಿರುಗೇಟು
ಈ ಎಲ್ಲ ವಿವಾದಗಳ ಮಧ್ಯೆ ಕಾಂಗ್ರೆಸ್ ವಲಯದಲ್ಲೇ ಹಲವು ಪ್ರಶ್ನೆಗಳು ಎದ್ದಿದ್ದು, ಇದು ಇಷ್ಟಕ್ಕೆ, ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ್. ಅಸಲಿಗೆ ಈ ವಿಡಿಯೋ ಬಿಡುಗಡೆ ಆಗಬೇಕು ಎಂಬುದು ರಮಾನಾಥ್ ರೈ ಅವರದೇ ರಾಜಕೀಯ ಲೆಕ್ಕಾಚಾರ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಪ್ರಭಾಕರ ಭಟ್ ವಿರುದ್ಧ ಕೇಸ್ ಜಡಿದು ಬಂಧಿಸಿ, ರೈ ವಿಡಿಯೋ ವೈರಲ್
ರಾಜಕೀಯ ಬದಲಾವಣೆಯನ್ನು ಸೂಚಿಸುವಂತಿರುವ ಈ ಬೆಳವಣಿಗೆಯ ಸುತ್ತ ಕುತೂಹಲದಿಂದ ಗಮನಿಸುತ್ತಿರುವವರು ಹಲವಾರು ಮಂದಿ ಇದ್ದಾರೆ. ಇನ್ನೂ ಏನೇನು ವಿಚಾರಗಳು ಗಿರಕಿ ಹೊಡೆಯುತ್ತಿವೆ ಅನ್ನೋದರತ್ತ ಒಮ್ಮೆ ಕಣ್ಣು ಹಾಯಿಸಿಬಿಡಿ.
ಬಿಸಿ ರಸ್ತೆಯ ಐಬಿಯಲ್ಲಿ ಸಂಭಾಷಣೆ
ಸ್ವತಃ ಸಚಿವ ರಮಾನಾಥ್ ರೈ ಅವರೇ ಈ ವಿಡಿಯೋ ಬಹಿರಂಗ ಆಗುವಂತೆ ನೋಡಿಕೊಂಡರಾ ಎಂಬ ಅನುಮಾನ ಮೂಡುವುದರಲ್ಲೂ ಅಸಹಜ ಅಂತೇನಿಲ್ಲ. ಎಸ್ ಪಿ ಹಾಗೂ ರೈ ಅವರ ಮಧ್ಯೆ ಸಂಭಾಷಣೆ ನಡೆದಿರುವುದು ಬಿಸಿ ರಸ್ತೆಯಲ್ಲಿರುವ ಐಬಿಯಲ್ಲಿ. ಅಲ್ಲಿ ರೈ ಹಿಂಬಾಲಕರನ್ನು ಬಿಟ್ಟರೆ ಯಾರೂ ಇರಲಿಲ್ಲ.
ಹೈಕಮಾಂಡ್ ಗೆ ಸಂದೇಶ
ಕೆಲ ತಿಂಗಳಿಂದ ಎಸ್ಡಿಪಿಐ ಪಕ್ಷದ ನಿಯೋಗವೊಂದು ಸಿದ್ದರಾಮಯ್ಯರನ್ನು ಭೇಟಿಯಾಗಿ, ರೈಗಳ ಮೇಲೆ ಗುರುತರವಾದ ಆಪಾದನೆ ಮಾಡಿದೆ ಎಂಬ ಸುಳಿವು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ತಾನು ಸಕ್ರಿಯವಾಗಿದ್ದೇನೆ ಎಂಬ ಸಂದೇಶವನ್ನು ಹೈಕಮಾಂಡ್ ಗೆ ಕಳುಹಿಸುವುದು ಅವರ ಉದ್ದೇಶವಾಗಿತ್ತು ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.
ಪರಸ್ಪರರು ಸಭೆ-ಸಮಾರಂಭಗಳಿಂದ ತಪ್ಪಿಸುತ್ತಾರೆ
ರಮಾನಾಥ್ ರೈ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಮಧ್ಯೆ ಹಾವು- ಮುಂಗುಸಿಯಂತೆ ದ್ವೇಷ ಇರುವ ಸಂಗತಿ ಜಿಲ್ಲೆಯ ಜನರಿಗೆ ಗೊತ್ತಿದೆ. ಇನ್ನು ರೈಗಳು ಇದ್ದ ಸಭೆ- ಸಮಾರಂಭಗಳಿಗೆ ಭಟ್ಟರು ಬರುವುದಿಲ್ಲ. ಅದೇ ರೀತಿ ಭಟ್ಟರಿದ್ದ ಕಡೆ ರೈ ಇರುವುದಿಲ್ಲ ಎಂಬುವುದು ಅಲಿಖಿತ ನಿಯಮ.
ಜಲೀಲ್ ಹತ್ಯೆ ಪ್ರಕರಣ
ಇದಕ್ಕೆ ತಿರುವು ಕೊಟ್ಟಿದ್ದು ಕರೋಪಾಡಿಯ ಜಲೀಲ್ ಹತ್ಯೆ ಪ್ರಕರಣ. ಜಲೀಲ್ ತಂದೆ ಕಾಂಗ್ರೆಸ್ಸಿಗರು. ತಾ.ಪಂ ಮಾಜಿ ಸದಸ್ಯ. ಅದಕ್ಕೂ ಮೇಲೆ ರೈಗಳ ಆಪ್ತರು ಎಂಬುದು ವಿಶೇಷ. ಜಲೀಲ್ ಹತ್ಯೆ ವೇಳೆ ಮನೆಗೆ ಭೇಟಿ ನೀಡಿದ್ದ ರೈಗಳಿಗೆ ಜಲೀಲ್ ತಂದೆ ತನ್ನ ಮಗನ ಹತ್ಯೆ ಹಿಂದೆ ಕೆಲವರ ಕೈವಾಡ ಇದೆ ಎಂದು ವಿವರಿಸಿದ್ದರು. ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಸರೂ ಉಲ್ಲೇಖ ಆಗಿತ್ತು. ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ತಂದೆ ಕೇಳಿಕೊಂಡರೂ ರೈಗಳು ತಲೆ ಆಡಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ ಎಂಬ ಆರೋಪ ಇದೆ.
ಭಟ್ಟರ ಬೈದರೆ ಮತ ಗ್ಯಾರಂಟಿ
ಈ ಪ್ರಕರಣದ ದಾರಿ ತಪ್ಪಿಸುವ ಉದ್ದೇಶದಿಂದ ಭಟ್ಟರನ್ನು ಬೈದರು ಎಂಬ ಮಾತು ಕೇಳಿಬರುತ್ತಿದೆ. ದ.ಕ ಜಿಲ್ಲೆಗೆ ಪ್ರಭಾಕರ್ ಭಟ್ ಅಂದ್ರೆ ಸುಪ್ರೀಂ ಲೀಡರ್. ಅವರನ್ನು ಬೈದರೆ ಕೆಲವು ಧರ್ಮದವರನ್ನು ಓಲೈಸಬಹುದು. ಬಿಜೆಪಿಗರನ್ನು ಬಿಟ್ಟು ಉಳಿದ ಮತಬೇಟೆಗೆ ಈಗಲೇ ತಯಾರಿ ನಡೆಸುವ ಇರಾದೆ ಕಂಡುಬರುತ್ತಿದೆ.
ಭಟ್ಟರ ಬಂಧನದ ಭರವಸೆ
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರೈಗಳು ಪಾದಯಾತ್ರೆ ನಡೆಸಿದ್ದನ್ನು ಯಾರೂ ಮರೆತಿಲ್ಲ. ಕಾಂಗ್ರೆಸ್ ಆಡಳಿತಕ್ಕೆ ಬಂದ ಒಂದು ವರ್ಷದೊಳಗೆ ಕಲ್ಲಡ್ಕ ಭಟ್ಟರನ್ನು ಬಂಧಿಸುತ್ತೇವೆ ಎಂದು ಜಿಲ್ಲೆಯ ಮತದಾರರಿಗೆ ಆಶ್ವಾಸನೆ ಕೊಟ್ಟಿದ್ದರು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮತ್ತೊಂದು ಚುನಾವಣೆಗೂ ತಯಾರಿ ನಡೆಯುತ್ತಿದೆಯಾದರೂ ಭಟ್ಟರನ್ನು ಬಂಧಿಸಿಲ್ಲ ಎಂಬ ಕೂಗು ಕಾಂಗ್ರೆಸ್ ಕಾರ್ಯಕರ್ತರಿಂದಲೇ ರೈಗಳ ಕಿವಿಗೆ ಬಿದ್ದಿದೆ.
ಮುಂದಿನ ಚುನಾವಣೆಗೆ ನಾಟಕ
ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಬಲವಾದ ಅಡಿಗಲ್ಲು ಹಾಕುವ ಪ್ಲಾನ್ ರೈಗಳದ್ದು, ಈ ಸಲವೂ ಭಟ್ಟರನ್ನು ಬಂಧಿಸುತ್ತೇವೆ ಎಂಬ ನಾಟಕವಾಡಿ ಮತದಾರರ ಕಿವಿಗೆ ಹೂ ಮುಡಿಸುವ ಕೆಲಸವನ್ನು ಅತ್ಯಂತ ನಾಜೂಕಾಗಿ ನಡೆಸುತ್ತಿದ್ದಾರೆ ಎಂಬುದು ಮತ್ತೊಂದು ವಾದ.
ಟಿಕೆಟ್ ಕೈ ತಪ್ಪುವ ಭೀತಿ
ರೈ ಅವರ ಸ್ವಕ್ಷೇತ್ರವಾದ ಕಲ್ಲಡ್ಕ, ಬಿ.ಸಿರೋಡ್ ಮುಂತಾದ ಕಡೆ ಆಗಾಗ ಮತೀಯ ಗಲಭೆ ನಡೆಯುತ್ತಲೇ ಇವೆ. ಇದನ್ನು ನಿಯಂತ್ರಿಸುವಲ್ಲಿ ರೈಗಳು ಸಂಪೂರ್ಣ ವಿಫಲವಾಗಿದ್ದಾರೆ. ಗಲಾಟೆಗಳಿಗೆ ಕಲ್ಲಡ್ಕ ಭಟ್ಟರೇ ಮುಖ್ಯ ಕಾರಣ ಎನ್ನುವ ಮೂಲಕ ಅನ್ಯಧರ್ಮೀಯರನ್ನು ಓಲೈಸುವ ತಂತ್ರ ರೈಗಳದ್ದು. ಇಲ್ಲದಿದ್ದರೆ ಮುಂದಿನ ಚುನಾವಣೆಗೆ ಟಿಕೆಟ್ ಪಡೆಯುವುದು ಕಷ್ಟ. ಏಕೆಂದರೆ ಈಗಿನಿಂದಲೇ ಎಐಸಿಸಿ ರಾಜ್ಯದಲ್ಲಿ ಆಂತರಿಕ ಸಮೀಕ್ಷೆ ನಡೆಸುತ್ತಿದೆ. ಟಿಕೆಟ್ ಕೈ ತಪ್ಪುತ್ತದೆ ಎಂಬ ಕಾರಣಕ್ಕೆ ಇಂತಹ ಗಿಮಿಕ್ ಮಾಡಿದರು ಎಂದು ಆರೋಪಿಸುತ್ತಾರೆ ಬಿಜೆಪಿ ನಾಯಕರು.
ಹುಲಿ ವಂಶದಲ್ಲಿ ಹುಟ್ಟಿದವನು
ಇನ್ನು ವಿವಾದಕ್ಕೆ ಸಂಬಂಧಿಸಿದಂತೆ ರೈಗಳು ತಲೆ ಕೆಡಿಸಿಕೊಂಡಂತಿಲ್ಲ. ರಾಜ್ಯದಲ್ಲಿ ಇಷ್ಟೊಂದು ಬಿಸಿಬಿಸಿಯಾಗಿ ಚರ್ಚೆ ನಡೆಯುತ್ತಿದ್ದರೂ ಮಾಧ್ಯಮಗಳ ಮುಂದೆ ತಾನು ಹೇಳಿದ್ದು ಸರಿ ಎಂದು ಸಮರ್ಥಿಸುತ್ತಾರೆ. ಜೊತೆಗೆ ತಾನು ಹುಲಿ ವಂಶದಲ್ಲಿ ಹುಟ್ಟಿದವನು. ಯಾರಿಗೂ ಹೆದರುವುದಿಲ್ಲ ಎನ್ನುವ ಮೂಲಕ ಚರ್ಚೆಗೆ ಆಹಾರವಾಗುತ್ತಿದ್ದಾರೆ. ಈ ಬಗ್ಗೆ ರೈಗಳಿಗೆ ಮುಂಬೈನಿಂದ ಬೆದರಿಕೆ ಕರೆಗಳೂ ಬಂದಿವೆ. ಪ್ರತಿಭಟನೆಗಳು ನಡೆದಿವೆಯಾದರೂ ಕ್ಯಾರೇ ಅನ್ನುತ್ತಿಲ್ಲ.