2015ನೇ ಸಾಲಿನ ಪ.ಗೋ.ಪ್ರಶಸ್ತಿಗೆ ಚಂದ್ರಹಾಸ ಚಾರ್ಮಾಡಿ ಆಯ್ಕೆ
ಮಂಗಳೂರು, ಮಾ 29: ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರಿಗೆ ನೀಡಲಾಗುವ 2015ನೇ ಸಾಲಿನ 'ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ 'ನಿರಂತರ ಪ್ರಗತಿ' ಪತ್ರಿಕೆಯ ಉಪಸಂಪಾದಕರಾದ ಚಂದ್ರಹಾಸ ಚಾರ್ಮಾಡಿ ಆಯ್ಕೆಯಾಗಿದ್ದಾರೆ.
2015ರ ಸೆಪ್ಟೆಂಬರ್ 15 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೇಹ ನಾಡಲ್ಲಿ, ಮನಸ್ಸು ಕಾಡಲ್ಲಿ...'' ವರದಿಗೆ ಈ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು ರೂ.10,001/ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಕಟನೆ ತಿಳಿಸಿದೆ.
ಚಂದ್ರಹಾಸ ಚಾರ್ಮಾಡಿಯವರು ಪ್ರಸ್ತುತ ಕಳೆದ 7 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಕಟಿತ ನಿರಂತರ ಪ್ರಗತಿ ಮಾಸಪತ್ರಿಕೆಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಂದ್ರಹಾಸ ಚಾರ್ಮಾಡಿ ಅವರ 4,500ಕ್ಕೂ ಹೆಚ್ಚು ಲೇಖನ ಮತ್ತು ನುಡಿಚಿತ್ರಗಳು ವಿವಿಧ ಕನ್ನಡ ದೈನಿಕ, ಮಾಸಿಕ, ಸಾಪ್ತಾಹಿಕಗಳಲ್ಲಿ ಪ್ರಕಟಗೊಂಡಿದೆ.
ಪಿ ಗೋಪಾಲಕೃಷ್ಣ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡುವ ಈ ಪ್ರಶಸ್ತಿಯನ್ನು ಪ. ಗೋ ಮೆಮೋರಿಯಲ್ ಟ್ರಸ್ಟ್ ಮೂಲಕ ನೀಡಲಾಗುತ್ತದೆ.