ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಉತ್ಸವಕ್ಕೆ ವಿದ್ಯುಕ್ತ ತೆರೆ
ಮಂಗಳೂರು, ಮೇ 29: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ 'ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಉತ್ಸವ'ವು ಭಾನುವಾರ ತೆರೆ ಕಂಡಿತು. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ಸರ್ಫರ್ಗಳನ್ನು ಹುರಿದುಂಬಿಸುತ್ತಿದ್ದ ದೃಶ್ಯಗಳು ಸಸಿಹಿತ್ಲು ಬೀಚ್ನಲ್ಲಿ ಕಂಡುಬಂದವು.
ಕೋವಳಂ ಸರ್ಫರ್ ರಮೇಶ್ ಮತ್ತು ಅಜೀಶ್ ಅಲಿ ಅವರು ಕ್ರಮವಾಗಿ ಜೂನಿಯರ್ ಮತ್ತು 14ರ ವಯೋಮಿತಿಯ ವಿಭಾಗದ ಪ್ರಶಸ್ತಿಗಳನ್ನು ಗೆದ್ದುಕೊಂಡರು.
ಮುಕ್ತ ವಿಭಾಗದ ವಿಜೇತರು 50 ಸಾವಿರ ರೂ. ಹಾಗೂ ರನ್ನರ್ 25 ಸಾವಿರ ರೂ. ಬಹುಮಾನ ಪಡೆದರು.
ಜೂನಿಯರ್ ರಾಷ್ಟ್ರಮಟ್ಟದ ವಿಜೇತರು ತಲಾ 25 ಸಾವಿರ ರೂ. ಹಾಗೂ ಎರಡು ಹಾಗೂ ಮೂರನೆ ಸ್ಥಾನ ಪಡೆದ ಸರ್ಫರ್ಗಳು ಕ್ರಮವಾಗಿ 15 ಸಾವಿರ ಹಾಗೂ 10 ಸಾವಿರ ನಗದು ಬಹುಮಾನ ಪಡೆದರು.14 ವರ್ಷ ವಯೋಮಿತಿ ವಿಭಾಗದಲ್ಲಿ ಪ್ರಥಮ ವಿಜೇತರು 10 ಸಾವಿರ, ದ್ವಿತೀಯ 5 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿ 3 ಸಾವಿರ ರೂ. ಬಹುಮಾನ ಗಳಿಸಿದರು.
ಚೆನ್ನೈನ ಶೇಖರ್ ಪಿಚ್ಚೈ ಪುರುಷರ ಸ್ಟ್ಯಾಂಡ್ ಅಪ್ ಪೆಡಲ್ ರೇಸ್ನಲ್ಲಿ ವಿಜೇತರಾದರು. ತಮಿಳುನಾಡಿನ ವಿಘ್ನೇಶ್ ವಿಜಯ್ ಕುಮಾರ್ ಎರಡನೇ ಸ್ಥಾನ ಗಳಿಸಿದರೆ, ಮಂಗಳೂರಿನ ಕಿಶೋರ್ ಕುಮಾರ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಮಾಸ್ಟರ್ಸ್ ವಿಭಾಗದಲ್ಲಿ ಚೆನ್ನೈನ ವೆಂಕಟ್ ಕೆ. ಹಾಗೂ ಮೂರ್ತಿ ಮೆಗವನ್ ಗಮನ ಸೆಳೆದರು. 30 ವರ್ಷ ಮೇಲ್ಪಟ್ಟವರ ಈ ವಿಭಾಗದಲ್ಲಿ ಈ ಇಬ್ಬರು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರೆ, ಗೋವಾದ ಸಂದೀಪ್ ಸ್ಯಾಮ್ಯುಯೆಲ್ ಮೂರನೇ ಸ್ಥಾನ ಗಳಿಸಿದರು.
16 ವರ್ಷ ವಯೋಮಿತಿ ವಿಭಾಗದಲ್ಲಿ ಕೋವಳಂನ ಅಜೇಶ್ ಅಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಸಂತೋಷ್ ಶಾಂತಕುಮಾರ್ ಹಾಗೂ ಶಿವರಾಜ್ ಬಾಬು ಎರಡು ಹಾಗೂ ಮೂರನೇ ಸ್ಥಾನ ಪಡೆದರು.
ಸ್ಟಾರ್ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರ ಆಗಮನ ಸ್ಪರ್ಧಿಗಳು ಮತ್ತು ಅಭಿಮಾನಿಗಳಿಗೆ ಮುದ ನೀಡಿತು. ಜಾಂಟಿ ರೋಡ್ಸ್ ಸ್ವತಃ ಸರ್ಫರ್ ಕೂಡಾ ಆಗಿದ್ದಾರೆ.
ಇನ್ನು ಮಂಗಳೂರು ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡಾ ವಿಶೇಷ ಭೇಟಿ ನೀಡಿ ಟೂರ್ನಿಗೆ ಮಹತ್ವ ನೀಡಿದರು. ಕರ್ನಾಟಕ ಬೀಚ್ ಉತ್ಸವ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಇದನ್ನು ಆಯೋಜಿಸಿದ್ದು, ಇಂಡಿಯನ್ ಸರ್ಫಿಂಗ್ ಫೆಡರೇಷನ್ ಇದಕ್ಕೆ ಮಾನ್ಯತೆ ನೀಡಿತ್ತು.
ಮಂತ್ರ ಸರ್ಫ್ ಕ್ಲಬ್ ಹಾಗೂ ಕೆನರಾ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಸಂಯುಕ್ತವಾಗಿ ಕೂಟವನ್ನು ಆಯೋಜಿಸಿದ್ದವು.