ತಾಕತ್ತಿದ್ದರೆ ಬಿಜೆಪಿ ಸಿಡಿ ಬಿಡುಗಡೆ ಮಾಡಿ ಹೆಚ್ ಡಿಕೆಗೆ ಪೂಜಾರಿ ಸವಾಲ್
ಮಂಗಳೂರು, ಫೆಬ್ರವರಿ 27 : ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಗೆ ಕಪ್ಪ ಕೊಟ್ಟಿರುವುದಕ್ಕೆ ಸಿಡಿ ಇದೆ, ಕ್ರಮಕೈಗೊಂಡರೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಸವಾಲ್ ಹಾಕಿದ್ದಾರೆ.
ಮುಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 'ಕುಮಾರಸ್ವಾಮಿ ಅವರು ಬಿಜೆಪಿ ಅವರು ಹೈಕಮಾಂಡ್ ಗೆ ನೀಡಿರುವ ಬಗ್ಗೆ ಸಿಡಿ ಇದೆ ಎನ್ನುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಕ್ರಮ ತೆಗೆದುಕೊಂಡರೆ ಬಿಡುಗಡೆ ಮಾಡುತ್ತೇನೆ ಅಂತಿದ್ದಾರೆ'.
ಬಿಜೆಪಿಯವರು ಕಪ್ಪ ಕೊಟ್ಟಿರುವ ವಿಚಾರ ಇದ್ದರೆ ಜನರಿಗೆ ತೋರಿಸಿ. ಇಲ್ಲದಿದ್ದರೆ ಜನರನ್ನು ಮೋಸ ಮಾಡಿದಂತಾಗುತ್ತದೆ. ತಾಕತ್ತಿದ್ದರೆ ಸಂಜೆಯೊಳಗೆ ಸಿಡಿ ಬಿಡುಗಡೆ ಮಾಡಿ ಎಂದು ಕುಮಾರಸ್ವಾಮಿಗೆ ಜನಾರ್ದನ ಪೂಜಾರಿ ಸವಾಲ್ ಹಾಕಿದರು.
ಈ ಸಂಧರ್ಭದಲ್ಲಿ ಬರಗಾಲದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮಲೆನಾಡು ಬರದಿಂದ ತತ್ತರಿಸಿ ಹೋಗಿದೆ. ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಸುರಿಸಿದ್ದಾರೆ. ಹೀಗಿರಬೇಕಾದರೆ ಮುಖ್ಯಮಂತ್ರಿ ನಿದ್ದೆ ಮಾಡುತ್ತಿದ್ದಾರೆಯೇ?
ಸಿದ್ದರಾಮಯ್ಯನವರೇ ಆಡಳಿತ ನಡೆಸಲಾಗದಿದ್ದರೆ ಕುರ್ಚಿ ಬಿಟ್ಟುಬಿಡಿ ಎಂದು ಜನಾರ್ದನ ಪೂಜಾರಿ ಸಿದ್ದರಾಮಯ್ಯನವರು ವಿರುದ್ಧ ಕಿಡಿಕಾರಿದರು.
'ಹಗರಣದಲ್ಲಿ ಮುಳುಗಿರುವ ಜನಪ್ರತಿನಿಧಿಗಳಿಗೆ ಬರಗಾಲ ಕಾಣ್ತಾ ಇಲ್ಲ. ಟಿವಿ ಮಾಧ್ಯಮಗಳು ಎಲ್ಲವನ್ನೂ ತೋರಿಸುತ್ತಿವೆ. ಈಗ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಸಿಎಂ ನೇತೃತ್ವದ ಕೋರ್ ಕಮಿಟಿ ಸಭೆಯಲ್ಲೂ ಚರ್ಚೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಚಪ್ಪಲಿಯಲ್ಲಿ ಹೊಡೆಯಬೇಕೆಂಬ ಸಚಿವ ಖಾದರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ' ಯು.ಟಿ.ಖಾದರಿದ್ದು ಮೂರ್ಖತನದ ಪರಮಾವಧಿ. ಪ್ರಜಾಪ್ರಭುತ್ವದಲ್ಲಿ ಚಪ್ಪಲಿಯಲ್ಲಿ ಹೊಡೆಯುತ್ತಾರೆಯೇ? ಮಾತಾಡುವಾಗ ಜಾಗ್ರತೆ ಇರಲಿ.
ಸಂವಿಧಾನದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ ಎಂದು ಸಚಿವ ಯು.ಟಿ.ಖಾದರ್ ಗೆ ಪೂಜಾರಿ ಛಾಟಿ ಬೀಸಿದರು.