'ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು'
ಮಂಗಳೂರು, ಜುಲೈ 14 : 'ಸಿದ್ದರಾಮಯ್ಯ ಅವರೇ ಪಕ್ಷಕ್ಕಿಂತ ನಿಮಗೆ ಕೆ.ಜೆ.ಜಾರ್ಜ್ ಹೆಚ್ಚಾಗಿದ್ದರೆ ನೀವು ಪಕ್ಷವನ್ನು ನಾಶ ಮಾಡುತ್ತಿದ್ದೀರಿ. ಪಕ್ಷದ ಮೇಲೆ ಪ್ರೀತಿ ಇದ್ದರೆ ಇಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ. ಮುಖ್ಯಮಂತ್ರಿಯಾಗಲು ನಮ್ಮಲ್ಲಿ ಹಲವು ಸಮರ್ಥರಿದ್ದಾರೆ' ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಒತ್ತಾಯಿಸಿದರು.
ಮಂಗಳೂರಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಜನಾರ್ದನ ಪೂಜಾರಿ ಅವರು, 'ತಕ್ಷಣ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ಶಾಸಕಾಂಗ ಪಕ್ಷದ ಸಭೆ ಕರೆದು ಹೊಸ ನಾಯಕನನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು' ಎಂದು ಆಗ್ರಹಿಸಿದರು. [ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಪಕ್ಷಕ್ಕೆ ಆತ್ಮಹತ್ಯೆಯ ಗತಿ!]
'ಸಿದ್ದರಾಮಯ್ಯ ಅವರು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅವರ ನಿಲುವುಗಳಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಜನರು ಛೀ, ಥೂ ಎನ್ನುವಂತಾಗಿದೆ. ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹೊಸ ಮುಖ್ಯಮಂತ್ರಿ ಆಯ್ಕೆ ನಡೆಯಬೇಕು' ಎಂದು ಹೇಳಿದರು. [ಲ್ಯಾಬ್ ವಿವಾದ : ಸಿದ್ದರಾಮಯ್ಯಗೆ ಪೂಜಾರಿ ಮಂಗಳಾರತಿ]
'ಕಾಂಗ್ರೆಸ್ ಪಕ್ಷಕ್ಕಿಂತ ನಿಮಗೆ ಜಾರ್ಜ್ ಅವರೆ ಹೆಚ್ಚಾದರೆ, ನೀವು ಪಕ್ಷವನ್ನು ನಾಶ ಮಾಡುತ್ತಿದ್ದೀರಿ. ಕಿಂಚಿತ್ ಆದರೂ ಪಕ್ಷದ ಮೇಲೆ ಪ್ರೀತಿ ಇದ್ದರೆ ರಾಜೀನಾಮೆ ನೀಡಿ, ನಮ್ಮಲ್ಲಿ ಮುಖ್ಯಮಂತ್ರಿಗಳಾಗಲು ಹಲವು ಸಮರ್ಥ ನಾಯಕರಿದ್ದಾರೆ' ಎಂದು ಪೂಜಾರಿ ಟೀಕಿಸಿದರು. [ಮಂಗಳೂರು : ಕಾಂಗ್ರೆಸ್ ನಾಯಕರ ವಿರುದ್ಧ ಪೂಜಾರಿ ಗರಂ]
'ಡಿವೈಎಸ್ಪಿ ಎಂ.ಕೆ.ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನೀಡಿರುವ ಹೇಳಿಕೆ ಡೈಯಿಂಗ್ ಡಿಕ್ಲೆರೇಷನ್. ಈ ಹೇಳಿಕೆಗೆ ನ್ಯಾಯಾಲಯವೂ ಮಾನ್ಯತೆ ನೀಡುತ್ತದೆ. ಇದರ ಆಧಾರದಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಬೇಕಿತ್ತು' ಎಂದು ಪೂಜಾರಿ ತಿಳಿಸಿದರು. [ಒಂದು ದಿನದ ಕಲಾಪಕ್ಕೆ ಲಕ್ಷ-ಲಕ್ಷ ವೆಚ್ಚ, ಚರ್ಚೆ ಶೂನ್ಯ]
'ತಕ್ಷಣ ಜಾರ್ಜ್ ಅವರ ರಾಜೀನಾಮೆ ಪಡೆದು, ಮೂವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ವಕೀಲರಾಗಿದ್ದ ನಿಮಗೆ ಎಫ್ಐಆರ್ ಎಂದರೆ ಗೊತ್ತಿಲ್ಲವೆ?' ಎಂದು ಸಿದ್ದರಾಮಯ್ಯ ಅವರನ್ನು ಪೂಜಾರಿ ಪ್ರಶ್ನಿಸಿದರು.
'ಪ್ರಕರಣದಲ್ಲಿ ಗಣಪತಿ ಧರ್ಮಪತ್ನಿ ಪಾವನಾ ಮಾನ ತೆಗೆಯುವ ಕೆಲಸ ಮಾಡುತ್ತಿದ್ದೀರಿ. ಅವರ ಹೇಳಿಕೆ ಪಡೆದಿಲ್ಲ, ಹೇಳಿಕೆ ಯಾಕೆ ಪಡೆದಿಲ್ಲ? ನಿಮಗೆ ನಾಚಿಕೆಯಾಗಬೇಕು. ಯಾಕಾಗಿ, ಯಾರಿಗಾಗಿ ಈ ಮೂವರನ್ನು ರಕ್ಷಿಸುತ್ತಿದ್ದೀರಿ. ನಿಮಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾದರೇ?' ಎಂದು ಪೂಜಾರಿ ವಾಗ್ದಾಳಿ ನಡೆಸಿದರು.