ಮಂಗಳೂರನ್ನು ಮತ್ತಷ್ಟು ಸ್ಮಾರ್ಟ್ ಮಾಡಲು ಪಣ ತೊಟ್ಟಿದೆ 'ಐಸಿರಿ'
ಮಂಗಳೂರು, ಜನವರಿ. 02 : ಸ್ಮಾರ್ಟ್ ಸಿಟಿಯಾಗುವತ್ತ ಹೆಜ್ಜೆ ಹಾಕುತ್ತಿರುವ ಮಂಗಳೂರನ್ನು 'ಐಸಿರಿ' ಎಂಬ ಕಲಾ ತಂಡದ ಕಲಾವಿದರು ಮತ್ತಷ್ಟು ಸ್ಮಾರ್ಟ್ ಗೊಳಿಸಲು ಪಣ ತೊಟ್ಟಿದೆ.
ಹೌದು. ರಸ್ತೆಯ ಇಕ್ಕೆಲಗಳಲ್ಲಿರುವ ಮನೆ ಗೋಡೆಗಳೇ ಇರಲಿ, ಮಳೆ ಬಿದ್ದು ಪಾಚಿ ಹಿಡಿದು ಕಪ್ಪಾದ ಗೋಡೆಗಳೇ ಇರಲಿ ಅವುಗಳನ್ನು ಶುಚಿಗೊಳಿಸಿ ಚಿತ್ರಗಳನ್ನು ಬಿಡಿಸುತ್ತಾರೆ ಈ 'ಐಸಿರಿ' ಎಂಬ ಕಲಾ ತಂಡದ ಕಲಾವಿದರು.
ಕಲಾ ಕ್ಷೇತ್ರದ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕೆಂಬುವುದೇ ಈ 'ಐಸಿರಿ' ಎಂಬ ಕಲಾ ತಂಡದ ಉದ್ದೇಶವಾಗಿದೆ. ಸ್ವಚ್ಛ ಭಾರತದ ಅಭಿಯಾನದಡಿ ನಗರದಲ್ಲಿ ಸ್ವಚ್ಛತಾ ಕಾರ್ಯ ಆರಂಭಗೊಂಡಾಗ ಅದಕ್ಕೆ ಪೂರಕವಾಗಿ ಈ ತಂಡ 'ಭವ್ಯ ಭಾರತ್' ಎನ್ನುವ ಚಿಂತನೆಯಡಿ ಸ್ವಚ್ಚತಾ ಕಾರ್ಯವನ್ನು ಆರಂಭಿಸಿತು.
2014ರ ಜನವರಿಯಲ್ಲಿ ರಚಿತವಾದ 'ಐಸಿರಿ' ಚಿತ್ರ ರಚಿಸುವ ಮುನ್ನ ತಂಡವು ಸ್ಥಳಕ್ಕೆ ಭೇಟಿ ನೀಡಿ ಫೋಟೊ ತೆಗೆದುಕೊಳ್ಳುತ್ತದೆ. ಅನಂತರ ಇಲ್ಲಿ ಯಾವ ರೀತಿಯ ಚಿತ್ರವನ್ನ ಬಿಡಿಸಬಹುದೆಂದು ಯೋಚಿಸಿ ಕಂಪ್ಯೂಟರ್ ಮೂಲಕ ಡಿಜಿಟಲ್ ಚಿತ್ರ ತಯಾರಿಸುತ್ತದೆ. ಬಳಿಕ ತಂಡದ ಸದಸ್ಯರ ಜತೆ ಚರ್ಚಿಸಿ ಅಂತಿಮಗೊಳಿಸುತ್ತಾರೆ.
ಗೋಡೆಗಳನ್ನು ಮೂರು ನಾಲ್ಕು ದಿನಗಳ ಮುನ್ನವೇ ಸ್ವಚ್ಛಗೊಳಿಸಿ, ಶನಿವಾರ ಮತ್ತು ರವಿವಾರದಂದು ಚಿತ್ರ ಬಿಡಿಸಲಾಗುತ್ತದೆ. ಈ ಚಿತ್ರಗಳಿಗೆ ಬಣ್ಣ ಹಚ್ಚಲಾಗುತ್ತದೆ. ದೀರ್ಘ ಕಾಲದ ಬಾಳಿಕೆಗೆ ಬೇಕಾದ ಬಣ್ಣಗಳನ್ನು ಬಳಸಲಾಗುತ್ತದೆ.
ಈ ಯೋಚನೆ ಹುಟ್ಟಿದ್ದು ಯಾರಲ್ಲಿ?
ಅಂದಹಾಗೇ ಐಸಿರಿ ಎಂಬ ಕಲಾ ತಂಡವನ್ನು ರಚಿಸಿ ಮಂಗಳೂರು ನಗರವನ್ನು ಸುಂದರಗೊಳಿಸಬೇಕು ಎಂಬ ಕನಸು ಹುಟ್ಟಿಕೊಂಡಿದ್ದು ರತನ್ ರೂಬಿ ಎಂಬ ಕಲಾವಿದನ ಮನದಲ್ಲಿ. ತಮ್ಮ ಆದಾಯದ ಒಂ ದಷ್ಟು ಭಾಗವನ್ನು ಇಂತಹ ಸುಂದರವಾದ ಚಿತ್ರಗಳ ರಚನೆಗೆ ಖರ್ಚು ಮಾಡುತ್ತಾರೆ. ಇವರ ಈ ಶ್ರಮಕ್ಕೆ ಅದೆಷ್ಟೋ ಮಂದಿ ಕೈ ಜೋಡಿಸಿದ್ದಾರೆ.
ಐಸಿರಿ ತಂಡ
ಅಂದಹಾಗೇ ಈ ತಂಡದಲ್ಲಿ ರತನ್ ರೂಬಿ, ಹರ್ಷಿತ್ ಕೆ. ಬಲ್ಲಾಳ್, ನವೀನ್ ಕುಮಾರ್ ಜಿ., ವಿಕ್ರಮ್ ಶೆಟ್ಟಿ, ನಿತೇಶ್ ಕಳ್ನಾಡು, ರಂಜಿತ್ ಆಚಾರ್ಯ, ಶಿವಾನಂದ ಉಳಿ, ಶರತ್ ಕುಲಾಲ್, ಅಭಿಲಾಷ್ ಜೇಕಬ್, ಜಯರಾಮ್ ನಾವಡ, ನಾಗೇಶ್ ಶೆಟ್ಟಿ, ಭವ್ಯಾ, ದಿವ್ಯ, ಸೂರಜ್, ಪ್ರಸನ್ನ ಆಚಾರ್ಯ, ಅಭಿಷಯ, ನಾಗೇಂದ್ರ ಎಂಬುವವರು ಇದ್ದಾರೆ.
ಶನಿವಾರ ಮತ್ತು ಭಾನುವಾರ ಮಾತ್ರ ಚಿತ್ರ ಬಿಡಿಸಲಾಗುತ್ತದೆ
ಇವರಲ್ಲಿ ಕೆಲವರು ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಮತ್ತು ರವಿವಾರದಂದು ಚಿತ್ರ ಬಿಡಿಸುವ ಸಲುವಾಗಿ ಬೆಂಗಳೂರಿನಿಂದ - ಮಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ.
ಐಸಿರಿ ತಂಡ ಬಿಡಿಸಿದ ಚಿತ್ರ ಎಲ್ಲಿ ನೋಡಬಹುದು
ಕದ್ರಿ ಪೊಲೀಸ್ ಠಾಣೆಯ ಮುಂಭಾಗದ ಬಸ್ ನಿಲ್ದಾಣ, ಸಂತ ಆಗ್ನೇಸ್ ಕಾಲೇಜ್ ಬಳಿಯ ವೃತ್ತ, ಹಾಗು ನಗರದ ಪ್ರಮುಖ ಸ್ಥಳಗಳಲ್ಲಿ ಚಿತ್ರ ಬಿಡಿಸಿದ್ದಾರೆ ಇತ್ತೀಚೆಗೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ರಾಷ್ಟ್ರಪಕ್ಷಿ ನವಿಲು ಹಾಗೂ ಮಂಗಳೂರಿಗೆ ಸಂಬಂಧಿಸಿ ಮೀನಿನ ಚಿತ್ರವನ್ನು ಆಕರ್ಷಕವಾಗಿ ಈ ತಂಡ ಬಿಡಿಸಿದೆ.
ಚಿತ್ರ ರಚಿಸಲು ಸ್ಪ್ರೇ ಪೇಂಟ್ ಹಾಗೂ ಪೆನ್ಸಿಲ್
ಈ ಚಿತ್ರ ರಚಿಸಲು ಸ್ಪ್ರೇ ಪೇಂಟ್ ಹಾಗೂ ಪೆನ್ಸಿಲ್ ಕಲೆಯನ್ನು ಬಳಸಲಾಗುತ್ತದೆ. ಆದರೆ, ಇದಕ್ಕೆ ಹೆಚ್ಚು ವೆಚ್ಚ ತಗಲುವುದರಿಂದ ಈ ತಂಡ ಬ್ರಷ್ ನಿಂದ ಚಿತ್ರ ಬಿಡಿಸುತ್ತಿದೆ. ಆಯಿಲ್ ಪೇಂಟ್ ಬಳಸಿದಲ್ಲಿ ಅಳಿದುಹೋಗುವ ಸಾಧ್ಯತೆಯಿರುವುದರಿಂದ ಪ್ರೈಮರ್ ಬಳಸಿ ಎಮಲ್ಶನ್, ಎಕ್ಸ್ಟೀರಿಯರ್ ಪೇಂಟ್ ಬಳಸಲಾಗುತ್ತದೆ.
ಐಸಿರಿ ತಂಡದ ಉದ್ದೇಶವೇನು?
ಪೇಂಟ್ ಗಾಗಿಯೇ 4,500 ರೂ.ನಿಂದ 5,000 ರೂ.ವರೆಗೆ ವೆಚ್ಚವಾಗುತ್ತದೆ. ಮೊದಲಿಗೆ ನಾವೇ ಭರಿಸಿದ್ದೆವು. ಬಳಿಕ ಕೆಲವರು ಪೇಂಟ್ ಒದಗಿಸಿದರು. ಇದಕ್ಕೆ ನಾವು ಸಂಭಾವನೆ ಪಡೆಯುವುದಿಲ್ಲ. ತಂಡದಲ್ಲಿ ಕಲಾವಿದರಲ್ಲದೇ, ಉಪನ್ಯಾಸಕರು, ಸಾಫ್ಟ್ವೇರ್ ಎಂಜಿನಿಯರ್ಗಳು, ಇತರ ವೃತ್ತಿಯವರೂ ಇದ್ದಾರೆ. ನಗರವನ್ನು ಸುಂದರಗೊಳಿಸಬೇಕೆಂಬುದೇ ನಮ್ಮ ಕನಸು ಎಂದು ರತನ್ ರೂಬಿ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.