'ವಿದೇಶಗಳಲ್ಲಿರುವ ಕನ್ನಡಿಗರೇ ಆಧಾರ್ ಬಳಿಸಿ ರೇಷನ್ ಕಾರ್ಡ್ ಪಡೆಯಿರಿ'
ಮೆಕ್ಕಾ, ಫೆಬ್ರವರಿ. 21 : ವಿದೇಶದಲ್ಲಿರುವ ಭಾರತೀಯರು ಆಧಾರ್ ಕಾರ್ಡ್ ಬಳಸಿಕೊಂಡು ತಮ್ಮ ಪಡಿತರ ಚೀಟಿಗಳನ್ನು ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಮದೀನಾ ಸೆಕ್ಟರ್ ವತಿಯಿಂದ ಮದೀನಾದ ಕೆ.ಸಿ.ಎಫ್ ಭವನದಲ್ಲಿ ಸೋಮವಾರ ನಡೆದ ಅಸುಪ್ಫಾ 2ನೇ ಆವೃತ್ತಿಯ ಸ್ಪೋಕನ್ ಇಂಗ್ಲೀಷ್ ತರಗತಿ ಉದ್ಘಾಟಿಸಿ ಮಾತನಾಡಿದ ಅವರು, 'ಭಾರತೀಯ ನಿವಾಸಿಗಳಾದ ನೀವು ವಿದೇಶದಲ್ಲಿದ್ದುಕೊಂಡೇ ಅರ್ಜಿ ಸಲ್ಲಿಸಿ, ತಿಂಗಳೊಳಗೆ ರೇಷನ್ ಕಾರ್ಡ್ ನಿಮ್ಮ ಕೈ ಸೇರಲಿದೆ' ಎಂದರು. [ಪವಿತ್ರ ಕ್ಷೇತ್ರ ಮಕ್ಕಾದಲ್ಲಿ ಕರ್ನಾಟಕ ಸಂಘದಿಂದ ರಕ್ತದಾನ]
ಕಲಿಯುವ ಕಾಲಘಟ್ಟದಲ್ಲಿ ಇಂಗ್ಲೀಷ್ ಕಲಿಯಲು ಅಸಾಧ್ಯವಾಗಿದ್ದು, ಇದೀಗ ಭಾಷೆಯ ಸಮಸ್ಯೆ ತಲೆದೋರುತ್ತಿದೆ, ಆದರೆ, ಈ ಎಲ್ಲಾ ಸಮಸ್ಯೆಗಳಿಗೆ ಕೆ.ಸಿ.ಎಫ್ ಆಧಾರ ಸ್ತಂಭವಾಗಿ ಇಂಗ್ಲೀಷ್ ಭಾಷೆ ಕಲಿಸಲು ಹೆಜ್ಬೆ ಇಟ್ಟಿರುವುದು ಶ್ಲಾಘನೀಯ.
ಪ್ರಸಕ್ತ ಸನ್ನಿವೇಶದಲ್ಲಿ ಇಂಗ್ಲೀಷ್ ಭಾಷೆ ಅತ್ಯಗತ್ಯವಾಗಿದ್ದು, ನಾವು ಇತರೆ ಭಾಷೆಗಳನ್ನು ಕಲಿತಂತೆ ನಮ್ಮ ವ್ಯಕ್ತಿತ್ವವು ಕೂಡ ಬೆಳೆಯುತ್ತಾ ಹೋಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ಇಹ್ಸಾನ್ ಮುಖ್ಯಸ್ಥ ಇಬ್ರಾಹಿಂ ಸಖಾಫಿ ದಾವಣಗೆರೆ ಮಾತನಾಡಿ ಭಾಷೆ ಕಲಿತರೆ ಮಾತ್ರ ಪ್ರಬೋಧನ ರಂಗದಲ್ಲಿ ಮುನ್ನಡೆಯಲು ಸಾಧ್ಯ.
ಈ ಹಿನ್ನೆಲೆಯಲ್ಲಿ ನಾವು ಇತರ ಭಾಷೆಯನ್ನು ಕಲಿಯಬೇಕು. ಇಂಗ್ಲೀಷ್ ಕಲಿತರೆ ಪೈಪೋಟಿ ಯುಗದಲ್ಲಿ ಎಲ್ಲವನ್ನೂ ಎದುರಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕೆ.ಎಸಿ.ಎಫ್. ರಾಷ್ಟ್ರೀಯ ಸಮಿತಿ ಆಯೋಜಿಸಿದ ಅಸುಫ್ಫಾ ಪರೀಕ್ಷೆ ಯಲ್ಲಿ ಪ್ರಥಮ ಪಡೆದ ಉಮ್ಮರ್ ಗೇರುಕಟ್ಟೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.