ಫಲ್ಗುಣಿ ನದಿಯ ತೂಗು ಸೇತುವೆಯ ಅಂದ, ಚೆಂದ ನೋಡಿ
ಮಂಗಳೂರು, ಆಗಸ್ಟ್ 18 : ದೋಣಿಯಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. 8 ರಿಂದ 10 ಕಿಲೋಮೀಟರ್ ಹೆಚ್ಚು ಅಲೆದಾಡುವುದು ತಪ್ಪಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳು ಮತ್ತಷ್ಟು ಹತ್ತಿರವಾಗಿವೆ.
ಹೌದು. ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆ ನೂರಾರು ಜನರ ಸಂಕಷ್ಟ ಬಗೆಹರಿಸಿದೆ. ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಬಡಗಬೆಳ್ಳೂರು ಮತ್ತು ಮುತ್ತೂರು ಗ್ರಾಮಸ್ಥರು ಅನುಭವಿಸುತ್ತಿದ್ದ ಸಮಸ್ಯೆಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಬಗೆಹರಿಸಿದೆ.[75 ವರ್ಷಗಳ ಕನಸಾದ ಫಲ್ಗುಣಿ ತೂಗುಸೇತುವೆ ಉದ್ಘಾಟನೆ]
ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳನ್ನು ಮತ್ತಷ್ಟು ಹತ್ತಿರವಾಗಿಸುವ ತೂಗು ಸೇತುವೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮತ್ತು ಅರಣ್ಯ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದ್ದಾರೆ. ಸೇತುವೆ ಸದ್ಬಳಕೆಯಾಗಲಿ ಎಂದು ಶುಭಹಾರೈಸಿದ್ದಾರೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ 1.47 ಕೋಟಿ ಅನುದಾನದಲ್ಲಿ ಈ ತೂಗು ಸೇತುವೆಯನ್ನು ನಿರ್ಮಾಣ ಮಾಡಿದೆ. ತೂಗು ಸೇತುವೆ ನಿರ್ಮಾಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಗಿರೀಶ್ ಭಾರದ್ವಾಜ್ ಅವರು, ಫಲ್ಗುಣಿ ನದಿಯ ತೂಗು ಸೇತುವೆಯನ್ನು ನಿರ್ಮಿಸಿದ್ದಾರೆ.
ಬಹುಕಾಲದ ಬೇಡಿಕೆ ಈಡೇರಿದೆ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ಬಂಟ್ವಾಳ ತಾಲೂಕುಗಳು ಹತ್ತಿರವಾಗಿವೆ. ಎರಡೂ ತಾಲೂಕುಗಳಿಗೆ ಸಂಪರ್ಕ ಕಲ್ಪಿಸಲು ಫಲ್ಗುಣಿ ನದಿಗೆ ಅಡ್ಡವಾಗಿ ತೂಗು ಸೇತುವೆ ನಿರ್ಮಾಣ ಮಾಡಲಾಗಿದೆ. ಆಗಸ್ಟ್ 11ರಂದು ಅರಣ್ಯ ಸಚಿವ ರಮಾನಾಥ ರೈ ಅವರು ಸೇತುವೆಯನ್ನು ಉದ್ಘಾಟಿಸಿದ್ದಾರೆ.
ಪರದಾಡುತ್ತಿದ್ದ ಜನರು
ಫಲ್ಗುಣಿ ನದಿ ಉಕ್ಕಿ ಹರಿಯುವಾಗ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಹಾಗೂ ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ನಿವಾಸಿಗಳು ಸಂಚಾರಕ್ಕೆ ಪರದಾಡುತ್ತಿದ್ದರು. ಶಾಲಾ ಮಕ್ಕಳು 8 ರಿಂದ 10 ಕಿಲೋ ಮೀಟರ್ ಹೆಚ್ಚುವರಿಯಾಗಿ ಅಲೆದಾಟ ನಡೆಸಬೇಕಿತ್ತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸೇತುವೆ
ಗ್ರಾಮಗಳ ಜನರ ಸಂಕಷ್ಟ ತಿಳಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ 1.47 ಕೋಟಿ ವೆಚ್ಚದಲ್ಲಿ ಫಲ್ಗುಣಿ ನದಿಗೆ ಅಡ್ಡವಾಗಿ ತೂಗು ಸೇತುವೆ ನಿರ್ಮಾಣ ಮಾಡಲು ಮುಂದಾಯಿತು. ಸೇತುವೆ ಉದ್ಘಾಟನೆಗೊಂಡಿದ್ದು 20 ಸಾವಿರಕ್ಕೂ ಅಧಿಕ ಜನರಿಗೆ ಅನುಕೂಲವಾಗಿದೆ.
127ನೇ ಸೇತುವೆ ನಿರ್ಮಾಣ
ತೂಗು ಸೇತುವೆ ನಿರ್ಮಾಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಗಿರೀಶ್ ಭಾರದ್ವಾಜ್ ಅವರು, ಫಲ್ಗುಣಿ ನದಿಯ ತೂಗು ಸೇತುವೆಯನ್ನು ನಿರ್ಮಿಸಿದ್ದಾರೆ. ಗಿರೀಶ್ ಅವರು ನಿರ್ಮಾಣ ಮಾಡಿರುವ 127ನೇ ಸೇತುವೆ ಇದಾಗಿದೆ.