ಮಂಗಳೂರಿನಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೆಘಾವಲ್
ಮಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಅರ್ಜುನ್ ರಾಮ್, ಕೇಂದ್ರ ಸರಕಾರದ ಕ್ರಾಂತಿಕಾರಿ ಆರ್ಥಿಕ ನೀತಿಯಿಂದ ದೇಶದ ಅಭಿವೃದ್ಧಿ ಸೂಚ್ಯಂಕ ಶೇ.10ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರು, ಮೇ 18: ಅಡ್ಯಾರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ದ.ಕ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಕೇಂದ್ರ ವಿತ್ತ, ಕಾರ್ಪೋರೇಟ್ ವ್ಯವಹಾರ ರಾಜ್ಯ ದರ್ಜೆ ಸಚಿವ ಅರ್ಜುನ್ ರಾಮ್ ಮೆಘಾವಲ್ ಇಂದು ಉದ್ಘಾಟಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರಕಾರದ ಕ್ರಾಂತಿಕಾರಿ ಆರ್ಥಿಕ ನೀತಿಯಿಂದ ದೇಶದ ಅಭಿವೃದ್ಧಿ ಸೂಚ್ಯಂಕ ಶೇ.10ಕ್ಕೆ ಏರಿಕೆಯಾಗಲಿದೆ ಎಂದರು. ಜತೆಗೆ ಜಿಎಸ್ಟಿ ಒಂದು ದೊಡ್ಡ ಮೈಲುಗಲ್ಲು ಎಂದು ಸಚಿವರು ಬಣ್ಣಿಸಿದರು.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]
"ಜಿಡಿಪಿ ಏರಿಕೆಯಾಗಬೇಕಾದರೆ ಕೊಂಡುಕೊಳ್ಳುವ ಸಾಮರ್ಥ್ಯ, ಹೂಡಿಕೆ, ರಫ್ತು ಪ್ರಮಾಣ ಹೆಚ್ಚಬೇಕು. ಈ ನಿಟ್ಟಿನಲ್ಲಿ ಮುದ್ರಾ ಯೋಜನೆ, ಸ್ಟಾರ್ಟ್ ಅಪ್ ಮತ್ತು ಸ್ಟಾಂಡ್ ಅಪ್ ಯೋಜನೆಗಳು ಜನರ ಆರ್ಥಿಕ ಮಟ್ಟ ಉತ್ತಮ ಪಡಿಸಲು ಸಹಕಾರಿಯಾಗಿದೆ. 2020ರ ಹೊತ್ತಿಗೆ ದೇಶದಲ್ಲಿ ಬಡವ -ಶ್ರೀಮಂತರ ನಡುವಿನ ಆರ್ಥಿಕ ಅಸಮಾನತೆ ಸಾಕಷ್ಟು ಕಡಿಮೆಯಾಗಲಿದೆ," ಎಂದು ಅರ್ಜುನ್ ರಾಮ್ ಮೆಘಾವಲ್ ಹೇಳಿದರು.
"ಜಿಲ್ಲೆಯಲ್ಲಿ ಮುದ್ರಾ ಯೋಜನೆಯಡಿ 50,706 ಮಂದಿ ಫಲಾನುಭವಿಗಳು ಸಾಲ ಪಡೆದುಕೊಂಡಿದ್ದು, 702.71 ಕೋಟಿ ರೂ. ಸಾಲ ಬಿಡುಗಡೆಯಾಗಿದೆ. ಪ್ರಧಾನ ಮಂತ್ರಿ ಜನ ಧನ ಯೋಜನೆಯಡಿ ಒಟ್ಟು 3,68,562 ಖಾತೆಗಳನ್ನು ತೆರೆಯಲಾಗಿದ್ದು, ದ.ಕ ಜಿಲ್ಲೆ ದೇಶದ 10 ಪ್ರಥಮ ಜಿಲ್ಲೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ," ಎಂದರು.[ಜೂನ್ 5ರಿಂದ 16, ಜಿಎಸ್ಟಿಗಾಗಿ ಮುಂದುವರಿದ ಬಜೆಟ್ ಅಧಿವೇಶನ]
ಇದೇ ವೇಳೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, "ಸ್ಪಾರ್ಟ್ ಅಪ್ ಮತ್ತು ಸ್ಟಾಂಡ್ ಅಪ್ ಇಂಡಿಯಾ ಯೋಜನೆಯಡಿ ಮಂಜೂರಾದ 80 ಪ್ರಸ್ತಾಪಗಳಿಗೆ 15.54 ಕೋಟಿ ಸಾಲ ಮಂಜೂರಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆಯಡಿ 1,23,506 ಖಾತೆ ತೆರೆಯಲಾಗಿದ್ದು, 218 ಪ್ರಕರಣಗಳಲ್ಲಿ 4.36 ಲಕ್ಷ ರೂ. ಮಂಜೂರಾಗಿದೆ," ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕ ಅಂಗಾರ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಗೌಡ, ಉಪಾಧ್ಯಕ್ಷೆ ಕಸ್ತೂರಿ ಪಂಜ ಮೊದಲಾದವರು ಉಪಸ್ಥಿತರಿದ್ದರು.