ನೇತ್ರಾವತಿ ನದಿಗೆ ಸಮುದ್ರದೊಳಗೆ ಅಣೆಕಟ್ಟು: ಐ.ಐ.ಎಸ್.ಸಿಯಿಂದ ನೂತನ ಯೋಜನೆ
ಸಮುದ್ರದೊಳಗೆ ಅಣೆಕಟ್ಟು ಕಟ್ಟಿ ಸಮುದ್ರ ಸೇರುವ ನೇತ್ರಾವತಿ ನದಿ ನೀರನ್ನು ರಾಜ್ಯದ ಜನರಿಗೆ ಸರಬರಾಜು ಮಾಡುವ ಪ್ರಸ್ತಾಪವೊಂದು ರಾಜ್ಯ ಸರಕಾರದ ಮುಂದೆ ಬಂದಿದೆ.
ಮಂಗಳೂರು, ಫೆಬ್ರವರಿ 8: ಸಮುದ್ರದೊಳಗೆ ಅಣೆಕಟ್ಟು ಕಟ್ಟಿ ಸಮುದ್ರ ಸೇರುವ ನೇತ್ರಾವತಿ ನದಿ ನೀರನ್ನು ರಾಜ್ಯದ ಜನರಿಗೆ ಸರಬರಾಜು ಮಾಡುವ ಪ್ರಸ್ತಾಪವೊಂದು ರಾಜ್ಯ ಸರಕಾರದ ಮುಂದೆ ಬಂದಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಸಿವಿಲ್ ಎಂಜಿನಿಯರಿಂಗ್ ವಿಭಾಗ)ಯ ಪ್ರೊ. ಟಿ.ಜಿ. ಸೀತಾರಾಮ್ ಈ ವಿನೂತನ ಪ್ರಸ್ತಾಪವನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರೊ. ಟಿ.ಜಿ. ಸೀತಾರಾಮ್, ' ಪರಿಸರ, ಜನರು, ಮೀನುಗಾರಿಕೆ, ಭೂಮಿ ಸೇರಿದಂತೆ ಯಾವುದೇ ಕ್ಷೇತ್ರಕ್ಕೂ ಯಾವುದೇ ಸಮಸ್ಯೆ ಆಗದ ಹಾಗೆ ಸಮುದ್ರದೊಳಗೆ ನೀರು ಸಂಗ್ರಹಿಸುವ ವಿಶೇಷ ಯೋಜನೆ ಇದು. ವಿದೇಶದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಈ ಯೋಜನೆ ಕರ್ನಾಟಕದಲ್ಲಿ ಜಾರಿಯಾಗಲಿ," ಎಂದು ಹೇಳಿದರು.[ಎಂಆರ್ ಪಿಎಲ್ ವಿಸ್ತರಣೆಗೆ ತೀವ್ರ ವಿರೋಧ]
ಯೋಜನೆ ಹೇಗಿರುತ್ತೆ?
ನೇತ್ರಾವತಿ ನದಿ ಸಮುದ್ರ ಸೇರುವ ಜಾಗದಲ್ಲಿ ಸುಮಾರು 14 ಕಿ.ಮೀ ಉದ್ದ ಹಾಗೂ ಅಷ್ಟೇ ಕಿ.ಮೀ ಅಗಲದ (ಅಥವಾ ಅದರ ಅರ್ಧದಷ್ಟು) ಅಣೆಕಟ್ಟು ಮಾದರಿಯ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿರುವ ಉಪ್ಪು ನೀರನ್ನು ಸಮುದ್ರಕ್ಕೆ ಹೊರಚೆಲ್ಲಿ, ನದಿಯಿಂದ ಸಹಜವಾಗಿ ಹರಿದು ಸಮುದ್ರ ಸೇರುವ ಸಿಹಿ ನೀರನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸುವ ನೀರನ್ನು ಕೃಷಿ, ಕೈಗಾರಿಕೆ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಬಳಸಬಹುದು.[ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ]
ಸಮುದ್ರದೊಳಗೆಯೇ ಈ ಯೋಜನೆ ಬರುವುದರಿಂದ ಇಲ್ಲಿ ಸಿಹಿ ನೀರಿನ ಮೀನುಗಾರಿಕೆಗೆ ಅವಕಾಶವಿರಲಿದೆ. ಗುಣಮಟ್ಟದ ಮರಳು ಲಭ್ಯವಾಗಲಿದೆ. ಜಲಾಶಯದ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿ ವಿದ್ಯುತ್ ಉತ್ಪಾದಿಸಬಹುದು. ಜತೆಗೆ ಜಲಾಶಯಕ್ಕೆ ಬಡಿಯುವ ಸಮುದ್ರದ ಅಲೆಗಳಿಂದ ಜಲವಿದ್ಯುತ್ ಕೂಡ ಉತ್ಪಾದಿಸಬಹುದು. ಲಕ್ಷಾಂತರ ಕೋಟಿ ರೂ. ಖರ್ಚು ಮಾಡಿ ಬೇರೆ ಬೇರೆ ಯೋಜನೆ ಸಿದ್ಧಪಡಿಸುವ ಬದಲು ಈ ಯೋಜನೆಯನ್ನು ಕೇವಲ 2,200 ಕೋ. ರೂಪಾಯಿಗಳಲ್ಲಿ ಸಿದ್ಧಪಡಿಸಬಹುದು ಎನ್ನುತ್ತಾರೆ ತಜ್ಞರು.
ಎತ್ತಿನಹೊಳೆಯಲ್ಲೂ ಸರಕಾರ ಅಂದುಕೊಂಡಷ್ಟು ನೀರು ಲಭ್ಯವಿಲ್ಲ. ಅದರ ವೆಚ್ಚ ಕೂಡ ಹೆಚ್ಚಾಗಿದೆ. ಆದರೆ, ಸಾಗರದಲ್ಲಿ ನೀರು ನಿಲ್ಲಿಸುವ ಈ ಯೋಜನೆ ಜಾರಿಗೊಳಿಸಿದರೆ ಕಡಿಮೆ ಹಣದಲ್ಲಿ ಅತ್ಯಂತ ಯಶಸ್ವಿ ಹಾಗೂ ರಾಜ್ಯದ ಎಲ್ಲ ಜನರಿಗೂ ಲಭ್ಯವಾಗುವ ನೀರು ಸಿಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಈ ಪ್ರಸ್ತಾಪಕ್ಕೆ ವಿರೋಧ ಕೂಡಾ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿರುವ ಎನ್ಐಟಿಕೆ ನಿವೃತ್ತ ಪ್ರೊಫೆಸರ್ ಪ್ರೊ. ಎಸ್. ಜಿ.ಮಯ್ಯ 'ಇದರಲ್ಲಿ ಹಲವು ಗೊಂದಲಗಳು ಹಾಗೂ ಅಪಾಯಗಳಿವೆ. ಇಲ್ಲಿನ ಭೌಗೋಳಿಕ ಅಂಶಗಳು ಈ ಪ್ರಸ್ತಾವಕ್ಕೆ ತಕ್ಕುದಲ್ಲ. ಹೊರದೇಶದಲ್ಲಿ ಇದು ಸಾಧ್ಯವಾದರೂ ಇದು ಇಲ್ಲಿಗೆ ಒಪ್ಪುವುದಿಲ್ಲ. ಇಲ್ಲಿನ ಮಣ್ಣಿನ ಸವೆತ ಹಾಗೂ ಉಪ್ಪು ನೀರಿನ ಅಂಶಗಳ ಬಗ್ಗೆ ಗಹನವಾದ ಅಧ್ಯಯನ ಮಾಡಬೇಕಿದೆ' ಅಂದರು. ಒಟ್ಟಿನಲ್ಲಿ ಈ ಪ್ರಸ್ತಾಪದ ಬಗ್ಗೆ ಸರ್ಕಾರ ಆಸಕ್ತಿ ನೀಡುತ್ತಾ ಕಾದು ನೋಡಬೇಕು.