ಶ್ರೀರಾಮ ಸೇನೆಯಂಥ ಸಂಘಟನೆಗಳನ್ನು ಬ್ಯಾನ್ ಮಾಡಬೇಕು - ಕುಮಾರಸ್ವಾಮಿ
ಮಂಗಳೂರು, ಜೂನ್ 27: "ಮುತಾಲಿಕ್ ಗೆ ದೇಶದ ರಕ್ಷಣೆ ಬೇಕಾಗಿಲ್ಲ, ಅವರಿಗೆ ಹಿಂದೂಗಳ ಬಗ್ಗೆ ಮಾತಾಡಲು ಒಂದು ವಿಷಯ ಬೇಕು ಅಷ್ಟೇ. ಸಮಾಜ ಒಡೆಯುವ ಇಂತಹ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಪೇಜಾವರ ಬಗ್ಗೆ ಲಘುವಾಗಿ ಮಾತನಾಡಬೇಡಿ," ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ದಿನಗಳಿಂದ ಕರಾವಳಿಯಲ್ಲಿ ಕುಟುಂಬ ಸಮೇತ ಪ್ರವಾಸ ಕೈಗೊಂಡಿರುವ ಕುಮಾರಸ್ವಾಮಿಯವರು ಇಂದು ಧರ್ಮಸ್ಥಳದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ತುಲಾಭಾರ ಸೇವೆ ಸಲ್ಲಿಸಿದರು.
ಪೇಜಾವರ ಶ್ರೀಗಳ ಹಿಂಸಿಸಿದರೆ ಮತ್ತೆ ಕೃಷ್ಣನ ದರ್ಶನ ಸಹ ಸಿಗಲಿಕ್ಕಿಲ್ಲ
ಈ ಸಂದರ್ಭದಲ್ಲಿ ಅವರು ಪ್ರಮೋದ್ ಮುತಾಲಿಕ್ ವಿರುದ್ಧ ಹರಿಹಾಯ್ದರು. "ಪೇಜಾವರ ಶ್ರೀ ಗಳು ಸಮಾಜಕ್ಕೆ ಐತಿಹಾಸಿಕ ಸಂದೇಶ ಸಾರಿದ್ದಾರೆ. ಸಮಾಜಕ್ಕೆ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ, ಅವರ ಕಾರ್ಯ ನಿಜಕ್ಕೂ ಅಭಿನಂದನೀಯ," ಎಂದರು. ಈ ಹಿಂದೆ ಕೃಷ್ಣ ಮಠದಲ್ಲಿ ಇಫ್ತಾರ್ ಮಾಡಿದ್ದಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಮುಂದುವರಿದು ಮಾತನಾಡಿದ ಅವರು, "ಸಮಾಜದಲ್ಲಿ ದ್ವೇಷದ ಮನೋಭಾವ ಹೋಗಲಾಡಿಸಲು ಇಂಥಹ ನಡೆಗಳು ಸಹಕಾರಿ. ಹಿಂದೂ ಸಂಘಟನೆಗಳು ಸಂಕುಚಿತ ಭಾವನೆ ಹೊಂದಿವೆ ಮತ್ತು ಮುತಾಲಿಕ್ ನಿಲುವು ಒಪ್ಪಲು ಸಾಧ್ಯವಿಲ್ಲ," ಎಂದರು. ಜತೆಗೆ ಶೂದ್ರರು ಕೂಡ ಬಹುತೇಕ ಮಾಂಸಹಾರಿಗಳು ಎಂಬ ಪೇಜಾವರರ ಹೇಳಿಕೆಗೆ ಧ್ವನಿಗೂಡಿಸಿದರು.
ಕುಮಾರಸ್ವಾಮಿ ಜತೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ಗೌಡ ಕೂಡ ಹಾಗೂ ಜೆಡಿಎಸ್ ಪಕ್ಷದ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.