'ಸಾಹಿತ್ಯದಲ್ಲಿ ಮಾನವೀಯ ಮೌಲ್ಯ ಮುಖ್ಯ' : ಸಾಹಿತಿ ಲಿಂಬಾಳೆ
ಮಂಗಳೂರು, ಡಿಸೆಂಬರ್, 24 : 'ಹಿಂದುಳಿದ ವರ್ಗ, ದಲಿತ, ಮುಸ್ಲಿಂ, ಆದಿವಾಸಿ, ಕ್ರೈಸ್ತ ಮಹಿಳೆಯರಿಂದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಹಿತ್ಯದ ಸೃಷ್ಟಿ ಹೆಚ್ಚಾಗಬೇಕಿದೆ' ಎಂದು ಮರಾಠಿ ಸಾಹಿತಿ ಶರಣ ಕುಮಾರ್ ಲಿಂಬಾಳೆ ಹೇಳಿದರು.
ಶನಿವಾರ ಅಭಿಮತ ಮಂಗಳೂರು ವತಿಯಿಂದ ನಗರದ ನಂತೂರಿನ ಶಾಂತಿ ಕಿರಣದಲ್ಲಿ 'ಸಮತೆ ಎಂಬುದು ಅರಿವು' ಘೋಷಣೆಯಡಿ' ಹಾಗೂ ಅಂಬೇಡ್ಕರ್-125 ಸ್ಮರಣೆಯೊಂದಿಗೆ ಆಯೋಜಿಸಿದ್ದ ಜನನುಡಿ ಸಮಾವೇಶವನ್ನ ಉದ್ಘಾಟಿಸಿ ಮಾತನಾಡಿದ ಅವರು, 'ನಾವು ಭಾರತೀಯ ಸಾಹಿತ್ಯವನ್ನು ನೋಡಿದಾಗ ಜಾತಿ ಹಾಗೂ ವರ್ಣ ವ್ಯವಸ್ಥೆಗೆ ಪ್ರಾಮುಖ್ಯತೆ ಕೊಡುವ ಬರಹಗಳೇ ಹೆಚ್ವಿರುವುದು ಕಂಡು ಬರುತ್ತದೆ.
ಹೀಗಾಗಿ ನಾವು ದೇಶದ ಒಳಿತಿಗಾಗಿ ಹಾಗೂ ಮುಂದಿನ ಒಳ್ಳೆಯದಕ್ಕಾಗಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಸಾಹಿತ್ಯಗಳ ಸೃಷ್ಟಿಯತ್ತ ಗಮನ' ಹರಿಸಬೇಕು ಎಂದರು.
150 ವರ್ಷ ಕಾಲ ಆಡಳಿತ ನಡೆಸಿದ್ದ ಬ್ರಿಟೀಷರ ವಿರುದ್ಧ ಗಾಂಧೀಜಿಯವರು ಹೋರಾಟ ಮಾಡಿದರು. ಆದರೆ, ಅಂಬೇಡ್ಕರ್ ಅವರು ಸಾವಿರಾರು ವರ್ಷದಿಂದ ಇದ್ದ ಶೋಷಣೆ-ಅಸಮಾನತೆ ವಿರುದ್ಧ ಹೋರಾಟ ಮಾಡಿದರು.
ಗಾಂಧೀಜಿ ಗೆದ್ದರು. ಆದರೆ, ಅಂಬೇಡ್ಕರ್ ಹೋರಾಟ ಮುಗಿದಿಲ್ಲ. ಸಿಕ್ಕಿದ್ದು ರಾಜಕೀಯ ಸ್ವಾತಂತ್ರ್ಯ ಮಾತ್ರ. ಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಅಲ್ಲದೇ ಸಾಮ್ರಾಜ್ಯಶಾಹಿ ಎಂಬುದೇ ದೊಡ್ಡ ಮೋಸ. ಆದರೆ, ಅದಕ್ಕಿಂತ ದೊಡ್ಡದು ಸಾಮಾಜಿಕ ಅಸಮಾನತೆ. ಇಂತಹ ಸಮಾವೇಶದ ಆಶಯಗಳು ಅಸಮಾನತೆಯ ವಿರುದ್ಧ ದನಿ ಎತ್ತಿರುವುದು ಗಮನಾರ್ಹ ಎಂದರು.
ಇದೇ ವೇಳೆ ಮಾತನಾಡಿದ ಚಿತ್ರ ನಟ ಚೇತನ್, ' ಕನ್ನಡ ಚಿತ್ರಗಳು ಜನಪರವಾಗಿ ಮೂಡಿ ಬರುತ್ತಿಲ್ಲ. ಹೆಚ್ಚಿನ ಸಿನೆಮಾಗಳ ಹಿಂದೆ ಕಮರ್ಷಿಯಲ್ ಮೈಂಡ್ ಇರುತ್ತೆ' ಎಂದರು.
ಆಶಯ ಭಾಷಣ ಮಾಡಿದ ಲೇಖಕಿ ಡಾ. ಎಚ್.ಎಸ್. ಅನುಪಮ ಅವರು, ಕರಾವಳಿಯಲ್ಲಿ ನಡೆಯುತ್ತಿರುವ ಕೋಮುವಾದದ ವಿರುದ್ಧ ನಾಲ್ಕು ವರ್ಷಗಳ ಹಿಂದೆ ಜನನುಡಿ ಕಾರ್ಯಕ್ರಮ ಆರಂಭವಾಯಿತು.
ಸಾಹಿತ್ಯ, ಕೋಮುವಾದದ ಕುರಿತು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಯಾವುದೇ ಒಂದು ಗುಂಪಿನ ವಿರುದ್ಧದ ಕಾರ್ಯಕ್ರಮವಲ್ಲ.
ಜನರನ್ನು ಒಂದೆಡೆ ಸೇರಿಸಿ ಬ್ರೈನ್ ವಾಶ್ ಮಾಡುವ ಉದ್ದೇಶವೂ ನಮ್ಮ ಕಾರ್ಯಕ್ರಮದ್ದಲ್ಲ ಮುಕ್ತ ಚರ್ಚೆ ಮತ್ತು ಸಂವಾದ ನಮ್ಮ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.