ರುಚಿಕರ ಬೊಂಡಾ ಹಿಂದಿದೆ ಕೂಲಿಗಾರರ ಬೆವರಿನ ಹನಿ
ಮಂಗಳೂರು, ಜೂನ್ 17: ಬೇಸಿಗೆಯ ಬಿಸಿಲ ಧಗೆ ಮತ್ತು ದೇಹದ ಉಷ್ಣಾಂಶ ಹೆಚ್ಚಾದಾಗ ಅಥವಾ ಆರೋಗ್ಯದಲ್ಲಿ ಏರುಪೇರಾದಾಗ ನಮಗೆ ಮೊದಲು ನೆನಪಾಗುವುದು ಎಳನೀರು. ಇದನ್ನು ಕರಾವಳಿ ಜಿಲ್ಲೆಯಾದ ಮಂಗಳೂರಿನ ತುಳು ಭಾಷೆಯಲ್ಲಿ ಎಳನೀರನ್ನು 'ಬೊಂಡ' ಅಂತಾ ತೆಂಗಿನಕಾಯಿನಾ 'ತಾರಾಯಿ' ಕರೀತಾರೆ. ಎಳನೀರು ಅಥವಾ ತೆಂಗಿನಕಾಯಿ ನಮ್ಮ ದಿನನಿತ್ಯದ ಜೀವನದಲ್ಲಿ ಅತ್ಯಂತ ಮೂಲಭೂತ ಅವಶ್ಯಕತೆಗಳಲ್ಲಿ ಒಂದು.
ತೆಂಗು ಬೆಳೆಯುವವರ ಸಮಸ್ಯೆಗಳನ್ನು ಎಲ್ಲರೂ ಗಮನಿಸುತ್ತಾರೆ, ಮಾಧ್ಯಮಗಳೂ ಅದರ ಬಗ್ಗೆ ಗೀಚುತ್ತವೆ. ಆದರೆ, ತೆಂಗನ್ನು ಮರಗಳಿಂದ ಇಳಿಸುವವರದ್ದೇ ಒಂದು ಸಮೂಹವಿದೆ. ಸಾಮಾನ್ಯವಾಗಿ ಇವರನ್ನು ಯಾರೂ ಗಮನಿಸುವುದಿಲ್ಲ. ಇವರ ಬದುಕು, ಬವಣೆ ಹೇಗೆ ಎಂಬಿತ್ಯಾದಿ ಮಾಹಿತಿಗಳ ಸಂಕಲನವೇ ಈ ಬರಹ.
ಪ್ರಾಸ್ತಾವಿಕವಾಗಿ ಹೇಳುವುದಾದರೆ, ಕರಾವಳಿಯಲ್ಲಂತೂ ತೆಂಗಿನ ತುರಿ ಇಲ್ಲದೇ ಪದಾರ್ಥ ರೆಡಿಯಾಗೋದೇ ಇಲ್ಲ. ಯಾಕಪ್ಪಾ ಈ ವಿಷ್ಯ ಅಂದ್ರೆ ನಮಗೇನೋ ಅಂಗಡಿ ಅಥವಾ ಕೈಗಾಡಿಯಲ್ಲಿ ಬರೋ ಎಳನೀರು ಮತ್ತು ತೆಂಗಿನಕಾಯಿ ಹಿಂದಿನ ಕಷ್ಟ ನಷ್ಟ ಗೊತ್ತಿಲ್ಲ.
ವಿಶ್ವದ 70 ರಾಷ್ಟ್ರಗಳು ತೆಂಗಿನ ಕೃಷಿ ನಡೆಸುತ್ತಿವೆ. ಅದರಲ್ಲಿ ಭಾರತವೂ ಒಂದು, ಜೊತೆಗೆ ವಿಶ್ವದ ಇತರ ದೇಶಗಳಿಗೂ ಇದನ್ನು ರಫ್ತು ಮಾಡುವುದರಲ್ಲಿ 3ನೇ ಸ್ಥಾನ ಪಡೆದಿದೆ. ಪ್ರತೀ ವರ್ಷ ಭಾರತದಿಂದ 21,500 ಮಿಲಿಯನ್ ಟನ್ ರಫ್ತಾಗುತ್ತಿದೆ. ದೇಶದಲ್ಲಿ ತಮಿಳುನಾಡು ಅತೀ ಹೆಚ್ಚು ತೆಂಗಿನ ಕೃಷಿ ಮಾಡುತ್ತಿದೆ. ತದನಂತರ ಕೇರಳ ಮೂರನೇ ಸ್ಥಾನದಲ್ಲಿ ನಮ್ಮ ರಾಜ್ಯವಿದೆ. ನಮ್ಮ ರಾಜ್ಯ ಪ್ರತೀ ವರ್ಷ 5041.15 ಮಿಲಿನ್ ಟನ್ ತೆಂಗಿನಕಾಯಿ ಬೆಳೆಯುತ್ತೇವೆ. ಅಂದರೆ ದೇಶದಲ್ಲಿ 23% ತೆಂಗಿನ ಕಾಯಿ ಬೆಳೆಯುತ್ತೇವೆ.
ತೆಂಗಿನ ಕೃಷಿ ತ್ರಾಸದಾಯಕ
ತೆಂಗಿನ ಬೆಳೆ ವಿಷ್ಯದಲ್ಲಿ ರಾಜ್ಯಕ್ಕೆ ಬರುವುದಾದರೆ ಕಲ್ಪತರು ಊರು ಎಂದೇ ನಾಮಾಂಕಿತ ತುಮಕೂರು ಮೊದಲನೇ ಸ್ಥಾನದಲ್ಲಿದೆ. 2ನೇ ಸ್ಥಾನ ಕರಾವಳಿಯದ್ದು, ಬಾರ್ಕೂರಿನಿಂದ ಹಿಡಿದು ಕಾಸರಗೋಡಿನವರೆ ತೆಂಗಿನ ಕೃಷಿ ಪಸರಿಸಿದೆ. ಇನ್ನು ತೆಂಗಿನಕೃಷಿಯ ನಿರ್ವಹಣೆ ಅತ್ಯಂತ ತ್ರಾಸದಾಯಕವಾದ್ದು, ಅದನ್ನು ಸರಿಯಾದ ಸಮಯಕ್ಕೆ ಕೀಳುವುದರಿಂದ ಹಿಡಿದು ಸರಿಯಾದ ಜಾಗದಲ್ಲಿ ಕೂಡಿಟ್ಟು, ಮಾರುಕಟ್ಟೆ ತಲುಪೋವರೆಗೂ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿ ನಮ್ಮ ಕೈಗೆ ಸಿಗುವಂತಹ ಪಾಡು ಅತ್ಯಂತ ಕಷ್ಟ ಕಷ್ಟ. ಇಷ್ಟೆಲ್ಲದರ ಮಧ್ಯೆ ತೆಂಗಿನ ಮರದಿಂದ ಕೀಳುವ ಕಾರ್ಮಿಕರ ಪಾಡು ಹೇಳತೀರದು.
ಅಚ್ಚರಿಯ ಕಾಯಕ
ತೆಂಗಿನ ಕಾಯಿ ಕೀಳೋದು ಒಂದು ಅದ್ಭುತ ಕಲೆ. ಯಾಕಂದ್ರೆ ಸಾಮಾನ್ಯವಾಗಿ ಮರವನ್ನು ಏರುವವರಿಗೂ ಈ ಕೆಲಸ ಅಸಾಧ್ಯ. ತೆಂಗಿನಕಾಯಿ ಕೀಳುವವರನ್ನು ಕೆಳಗಿನಿಂದ ನಿಂತು ನೋಡಿದಾಗ ಆಶ್ಚರ್ಯ ಅನಿಸುತ್ತೆ. ಸುಮಾರು 20 ರಿಂದ 30 ಮೀಟರ್ ಬಾನೆತ್ತರವಿರುವ ಮರವನ್ನೇರಿ ಕಾಯಿ ಕೀಳುವ ಸಾಹಸ ಅವರದ್ದು.
ಇವರಿಗೂ ವಿಶೇಷ ವಸ್ತ್ರ !
ಕೇವಲ ಒಂದು ತುಂಡು ಹಗ್ಗದ ಮೂಲಕ ಮರವೇರಿ ಜೀವದ ಹಂಗು ತೊರೆದು 15 ರಿಂದ 20 ನಿಮಿಷಗಳ ಕಾಲ ತೆಂಗಿನ ಮರದಲ್ಲಿ ಕುಳಿತು ನಾವು ತಿಳಿದಷ್ಟು ಸುಲಭವಲ್ಲ. ಅವರು ಬಳಸುವ ಹಗ್ಗಕ್ಕೆ ತುಳು ಭಾಷೆಯಲ್ಲಿ 'ತಲೆ' ಅಂತ ಕರೆಯುತ್ತಾರೆ. ಈಗಲೂ ಹಳ್ಳಿಪ್ರದೇಶದಲ್ಲಿ ಮರವೇರುವ ಸಮಯ ಅವರ ವೇಷಭೂಷಣ ಅಂದ್ರೆ ವಿಶೇಷ ಕೇವಲ ಒಂದು ಲುಂಗಿ ಮತ್ತು ಸೊಂಟಕ್ಕೆ ಹಾಳೆಯ ಹೊದಿಕೆ ಮಾಡಿಕೊಂಡಿರುತ್ತಾರೆ.
ಕಾಯಿ ಕೀಳುವುದಕ್ಕೆ ಮಾತ್ರ ಸೀಮಿತ
ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಅಂದರೆ ಮೊದಲ ಬಾರಿ ಮಾರ್ಚ್ ತಿಂಗಳ ಕೊನೆಯಲ್ಲಿ ಅಂದರೆ ತುಳುವರ 'ಬಿಸು' ಮಾಸದ ನಂತರದಲ್ಲಿ ತೆಂಗಿನ ಮಾರುಕಟ್ಟೆ ಗರಿಗೆದರುವುದರಿಂದ ಅದಕ್ಕೂ ಮೊದಲು ತೆಂಗಿನಕಾಯಿ ಕೀಳುತ್ತಾರೆ. ಅದೇ ರೀತಿ ಡಿಸೆಂಬರ್ ತಿಂಗಳಲ್ಲಿ ಕೊಯ್ಯಲಾಗುತ್ತದೆ. ಕೆಲವೊಮ್ಮೆ ಮೂರು ಕೊಯ್ಲುಗಳನ್ನೂ ಪಡೆಯುತ್ತಾರೆ. ಈ ವೇಳೆ ತೆಂಗಿನ ಕಾಯಿ ಕೀಳುವ ಕಾರ್ಮಿಕರು ಮಾತ್ರ ಫುಲ್ ಬ್ಯುಸಿ. ಪ್ರಸ್ತುತ ಕರಾವಳಿಯಲ್ಲಿ ಪ್ರತೀ ಮರವೊಂದಕ್ಕೆ 25 ರಿಂದ 30 ರೂಪಾಯಿಗಳನ್ನು ಪಡೆಯುತ್ತಾರೆ. ಉಳಿದ ಸಮಯದಲ್ಲಿ ಬೇರೆ ಬೇರೆ ಕೆಲಸ ಮಾಡೋ ಇವರು ಕೊಯ್ಲಿನ ಸಂದರ್ಭ ಕಾಯಿ ಕೀಳುವ ಕಾಯಕಕ್ಕೆ ಮಾತ್ರ ಸೀಮಿತ.
ಕಷ್ಟದಲ್ಲಿರುವ ಜನ ಸಮೂಹ
ಮೊದಲೇ ಹೇಳಿದಂತೆ ಇದೊಂದು ಸಾಹಸ ಕೆಲಸ. ಈ ಕಾಯಕದಿಂದ ಅದೆಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಸಂಖ್ಯಾತ ಜನ ಅಂಗಾಂಗ ಕಳೆದುಕೊಂಡಿದ್ದಾರೆ. ಎಷ್ಟೋ ಜನ ಕಾರ್ಮಿಕರು ಕಾಯಿ ಕೀಳುವ ಸಂದರ್ಭ ಮರದಿಂದ ಆಯತಪ್ಪಿ ಬಿದ್ದು ತಮ್ಮ ಜೀವತೆತ್ತಿದ್ದಾರೆ. ಇನ್ನೂ ಕೆಲವರು ತೀವ್ರವಾಗಿ ಗಾಯಗೊಂಡು ಜೀವನಪೂರ್ತಿ ಹಾಸಿಗೆ ಹಿಡಿದಿದ್ದಾರೆ. ಅಂತಹವರ ಕುಟುಂಬದ ಪಾಡು ಹೇಳತೀರದು.
ಕೆಲ ವರ್ಷಗಳಿಂದ ಕಾಯಿ ಕೀಳಲು ವೈಜ್ಞಾನಿಕ ಉಪಕರಣಗಳು ಬಂದಿವೆಯಾದರೂ ಕರಾವಳಿಯ ಹಳ್ಳಿ ಪ್ರದೇಶದಲ್ಲಿ ಇನ್ನೂ ಇದು ಪರಿಚಯವಾಗಿಲ್ಲ ಎಂಬುವುದು ಖೇದಕರ ಸಂಗತಿ