ಅಪರಿಚಿತರಿಂದ 40,000 ರೂ. ಡ್ರಾ, ಪ್ರಧಾನಿಗೆ ಮಂಗಳೂರಿಗನ ಮೊರೆ
ನಗರದ ಬಿಎಸ್ಎನ್ಎಲ್ ಉದ್ಯೋಗಿ ಹರೀಶ್ ಅವರ ಅಕೌಂಟ್ ಹ್ಯಾಕ್ ಮಾಡಿ ತಮಿಳುನಾಡಿನಲ್ಲಿ 40,000 ರೂಪಾಯಿ ಡ್ರಾ ಮಾಡಲಾಗಿದೆ. ಈ ಕುರಿತು ಅವರು ಪ್ರಧಾನಮಂತ್ರಿ ಕಚೇರಿಗೂ ಪತ್ರ ಬರೆದು ನ್ಯಾಯ ಒದಗಿಸುವಂತೆ ಕೋರಿಕೊಂಡಿದ್ದಾರೆ.
ಮಂಗಳೂರು, ಮೇ 17: ನಗರದ ಬಿಎಸ್ಎನ್ಎಲ್ ಉದ್ಯೋಗಿ ಹರೀಶ್ ಎಂಬವರ ಬ್ಯಾಂಕ್ ಖಾತೆಯಿಂದ ತಮಿಳುನಾಡು ಜಿಲ್ಲೆಯ ಕಾಂಚಿಪುರಂನ ತಂಬರಂ ಪಶ್ಚಿಮದ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕೇಂದ್ರದಿಂದ ಅಪರಿಚಿತರು 40,000 ರೂ ನಗದು ಡ್ರಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹರೀಶ್ ಮೊಬೈಲಿಗೆ ಮೇ 2ರಂದು ಸಂಜೆ ವೇಳೆಗೆ ತಲಾ 10,000 ರೂ ಮೊತ್ತ ನಾಲ್ಕು ಬಾರಿ ಎಟಿಎಂ ಮೂಲಕ ಹಣ ಡ್ರಾ ಮಾಡಿರುವ ಮೆಸೇಜ್ ಬಂದಿದೆ.
ಆದರೆ ಕಾರ್ಡ್ ಇವರ ಬಳಿಯೇ ಇರುವಾಗ ಹಣ ಡ್ರಾ ಆಗಿರುವುದು ಕಂಡು ಕಂಗಾಲಾದ ಇವರು ಕೂಡಲೇ ತನ್ನ ಖಾತೆಯ ಬ್ಯಾಂಕ್ ಶಾಖೆಗೆ ತೆರಳಿ ಮ್ಯಾನೇಜರ್ ಬಳಿ ವಿಚಾರ ತಿಳಿಸಿದ್ದಾರೆ. ಅವರು ಕೂಡಲೇ ಎಟಿಎಂ ಕಾರ್ಡನ್ನು ಬ್ಲಾಕ್ ಮಾಡಿಸಿದ್ದಾರೆ.
ಎಂ ಜಿ ರೋಡ್ ಶಾಖೆಗೆ ಭೇಟಿ ನೀಡಿದ ಹರೀಶ್ ಬ್ಯಾಂಕ್ ಟ್ರಾನ್ಸಾಕ್ಷನ್ ಮಾಹಿತಿ ಪಡೆದುಕೊಂಡಾಗ ಹಣ ಕಾಂಚಿಪುರಂನ ಬ್ಯಾಂಕಿನಿಂದ ಡ್ರಾ ಆಗಿದೆ ಎಂದು ತಿಳಿದು ಬಂದಿದೆ. ಬಳಿಕ ಇವರು ಬರ್ಕೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಹರೀಶ್ ಕಾಂಚಿಪುರ ತಂಬರಮ್ ಪಶ್ಚಿಮದ ಎಸ್ಬಿಐ ಮ್ಯಾನೇಜರ್ ಅವರನ್ನೂ ಸಂಪರ್ಕಿಸಿ ಘಟನೆ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಕಚೇರಿಗೂ ಪತ್ರ ಬರೆದು ನ್ಯಾಯ ಒದಗಿಸುವಂತೆ ಕೋರಿಕೊಂಡಿದ್ದಾರೆ.
{promotion-urls}