ಮಂಗಳೂರು: ಪತ್ರಕರ್ತರಿಗೆ ವರ್ಷ ಕಾಲ ಆರೋಗ್ಯ ತಪಾಸಣೆ
ಮಂಗಳೂರು, ಜ. 29: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಇಂಡಿಯಾನ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್ಸಿಟಿಟ್ಯೂಟ್ ನೆರವಿನಲ್ಲಿ ಕಾರ್ಯನಿರತ ಪತ್ರಕರ್ತರು ಮತ್ತು ಅವರ ಕುಟುಂಬವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಒಂದು ವರ್ಷದ ಕಾಲ ಪತ್ರಕರ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಫೆಬ್ರವರಿ 1 ರಿಂದ ಆರಂಭವಾಗುವ ತಪಾಸಣೆ ಒಂದು ವರ್ಷ ಕಾಲ ಚಾಲ್ತಿಯಲ್ಲಿರುತ್ತದೆ. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಮಾತ್ರ ತಪಾಸಣೆ ಮಾಡಿಸಿಕೊಳ್ಳಲು ಅವಕಾಶವಿದೆ.[ಮಂಗಳೂರು ನಗರದಲ್ಲಿ ಮತ್ತಷ್ಟು ಸಿಗ್ನಲ್ ವ್ಯವಸ್ಥೆ]
ಮಂಗಳೂರಿನ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್ ಮಹಾಬಲ ಮಾರ್ಲ, ಆರೋಗ್ಯವಂತ ಸಮಾಜದಿಂದ ದೇಶ, ವಿಶ್ವದ ಪ್ರಗತಿಯಾಗುತ್ತದೆ. ಪ್ರತಿಫಲಾಪೇಕ್ಷೆ ಇಟ್ಟುಕೊಂಡು ಮಾಡುವ ಸೇವೆಯಿಂದ ಸಮಾಜ ಹಾಳಾಗುತ್ತದೆ. ಆದರೆ ಜಿಲ್ಲೆಯ ಪತ್ರಕರ್ತರು ಯಾವುದೇ ನಿರೀಕ್ಷೆಯನ್ನಿಡದೇ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಮಾತನಾಡಿ, ಸದಾ ಒತ್ತಡದ ನಡುವೆ ಕಾರ್ಯನಿರ್ವಹಿಸುವುದರಿಂದ ಪತ್ರಕರ್ತರು ಅತೀ ಕಡಿಮೆ ವಯಸ್ಸಿನಲ್ಲಿಯೇ ಅನಾರೋಗ್ಯಕ್ಕೊಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಗುರುತಿಸಿಕೊಂಡಿರುವ ಮಾಧ್ಯಮ ಮಂದಿಯಲ್ಲಿ ಜಾಗೃತಿ ಮೂಡಿಸಲು ಉಚಿತ ತಪಾಸಣೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.[ಸರ್ಕಾರಿ ನೌಕರರಿಗೂ ಆರೋಗ್ಯ ಭಾಗ್ಯ]
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳಾ, ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್., ಇಂಡಿಯಾನ ಸಂಸ್ಥೆಯ ಮಾಧ್ಯಮ ಸಂಯೋಜಕ ಭಾಸ್ಕರ್ ಅರಸ್ , ರೆಹಾನ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ ಭಾಸ್ಕರ ಅರಸ 9886101511, 7760638666 ನ್ನು ಸಂಪರ್ಕಿಸಬಹುದು.