ಭಾರತದ ಹೆಣ್ಮಕ್ಕಳ ಶಿಕ್ಷಣಕ್ಕೆ ಆಸ್ಟ್ರೇಲಿಯಾದಿಂದ 4 ಲಕ್ಷ 80 ಸಾವಿರ?
ಮಂಗಳೂರು, ಫೆಬ್ರವರಿ,05: ಭಾರತೀಯ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾದ ಮಾಜಿ ಸಂಸದರೊಬ್ಬರು ತಮ್ಮ ತಂಡದ ಸದಸ್ಯರ ಜೊತೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮ್ಯಾರಥಾನ್ ಓಟ ಆರಂಭಿಸಿದ್ದು, ಆಸ್ಟೇಲಿಯಾದಿಂದ ಒಂದು ಲಕ್ಷ ಡಾಲರ್ (4ಲಕ್ಷದ 80ಸಾವಿರ) ನಷ್ಟು ಹಣವನ್ನು ಬಾರತಕ್ಕೆ ನೀಡಲು ಮುಂದಾಗಿದ್ದಾರೆ.
'ಸ್ಪಿರಿಟ್ ಆಫ್ ಇಂಡಿಯಾ' ಎಂಬ ಹೆಸರಿನ ಮ್ಯಾರಥಾನ್ ಜನವರಿ 26ರಿಂದ ಆರಂಭಗೊಂಡಿದ್ದು, ಮಂಗಳೂರಿಗೆ ಬಂದ ತಂಡವನ್ನು ಯುವಜನ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಪೊಲೀಸ್ ಕಮಿಷನರ್ ಚಂದ್ರಶೇಖರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಎಸ್. ಶರಣಪ್ಪ, ಅಪರ ಜಿಲ್ಲಾಧಿಕಾರಿ ಎಸ್. ಕುಮಾರ್ ಬರಮಾಡಿಕೊಂಡರು.[ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬಂತು ಮೊಬೈಲ್ ಆಪ್]
ಭಾರತ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಪ್ಯಾಟ್ರಿಕ್ ಫಾರ್ಮರ್ ಹಾಗೂ ಅವರ ತಂಡದ ಸದಸ್ಯೆ ಕೇಟ್ ಮ್ಯಾರಥಾನ್ ನಡೆಸಿದರು. ಈಗಾಗಲೇ 600 ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ. ಗುರುವಾರ ರಾತ್ರಿ ಪಡುಬಿದ್ರೆಯಲ್ಲಿ ಉಳಿದುಕೊಂಡು ಮುಂಜಾನೆ ಐದು ಗಂಟೆ ಪ್ರಯಾಣ ಮುಂದುವರಿಸಿದ್ದಾರೆ.
ಭಾರತ ಅಭಿವೃದ್ಧಿಗೊಳ್ಳುತ್ತಿದೆ. ಆದರೆ, ಬಡ ಹೆಣ್ಣು ಮಕ್ಕಳು ವಿದ್ಯಾವಂತರಾಗದಿರುವುದು ದೇಶದ ಪ್ರಗತಿಗೆ ಸವಾಲು. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಜನರ ಮನವೊಲಿಸಿ ಒಂದು ಲಕ್ಷ ಆಸ್ಟ್ರೇಲಿಯಾ ಡಾಲರ್ ನಷ್ಟು ಹಣವನ್ನು ಭಾರತಕ್ಕೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಲಾಗುವುದು. ಈ ಬಗ್ಗೆ ವಿದ್ಯುನ್ಮಾನ, ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಅರಿವು ಮೂಡಿಸಲಾಗಿದೆ ಎಂದು ಪ್ಯಾಟ್ರಿಕ್ ಫಾರ್ಮರ್ ತಿಳಿಸಿದರು.[ಕೆಆರ್.ಪೇಟೆ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವೇ ಸೂರು!]
ಹೆಣ್ಣುಮಕ್ಕಳು ಶಿಕ್ಷಣ ಪಡೆದರೆ ಕುಟುಂಬ ಕಲಿತಂತೆ. ಇಡೀ ಕುಟುಂಬ ಶಿಕ್ಷಿತವಾದರೆ ದೇಶವೇ ಸುಶಿಕ್ಷಿತಗೊಳ್ಳುತ್ತದೆ ಎಂಬುದು ತನ್ನ ನಂಬಿಕೆ. ಅದಕ್ಕಾಗಿಯೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಬೇಕು. ಕೇವಲ ಶಿಕ್ಷಣಕ್ಕಾಗಿ ಮಾತ್ರವಲ್ಲ. ಸದಾ ಲವಲವಿಕೆಯಿಂದ, ಸಾಮಾಜಿಕ ಕಾರ್ಯಗಳಿಗೆ ತೊಡಗಿಸಿಕೊಳ್ಳುವಲ್ಲಿ ಜನರು ಅರಿವು ಮೂಡಿಸಲು, ಆಸ್ಟ್ರೇಲಿಯಾ-ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶವನ್ನೂ ಮ್ಯಾರಥಾನ್ ಹೊಂದಿದೆ.
ವಿವಿಧ ಧರ್ಮ, ಭಾಷೆ, ಜನಾಂಗದವರನ್ನು ಹೊಂದಿರುವ ಭಾರತ ಜಗತ್ತಿನಲ್ಲೇ ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ. ಈ ದೇಶ ತನ್ನಲ್ಲಿ ಪ್ರತಿಬಾರಿಯೂ ಕೌತುಕವನ್ನು ಉಂಟುಮಾಡುತ್ತದೆ. ಇಲ್ಲಿ ಏಕ ರೀತಿಯ ಆರ್ಥಿಕ ನೀತಿ ಸಾಧ್ಯವಿಲ್ಲ. ಬಡವರಿಗಾಗಿ ವಿಶೇಷ ಸೌಲಭ್ಯದ ಅಗತ್ಯವಿದೆ ಎಂದರು.