ಮಂಗಳೂರಿನ ಚರ್ಚ್ ಹಾಲ್ ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಹೊಡಿಬಡಿ
ಮಂಗಳೂರು, ಜನವರಿ 18: ಯುವ ಕಾಂಗ್ರೆಸ್ ನ ಎರಡು ಬಣಗಳ ಮಧ್ಯೆ ಡಿಶುಂ-ಡಿಶುಂ ಆಗಿ, ಇಬ್ಬರಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿದ್ದ ಘಟನೆ ಕುಲಶೇಖರ ಚರ್ಚ್ ಹಾಲ್ ನಲ್ಲಿ ಈಚೆಗೆ ನಡೆದಿದೆ. ಆದರೆ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವ ಕಾಂಗ್ರೆಸ್ ನ ಎರಡು ಬಣಗಳು ಕದ್ರಿ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ದೂರು ದಾಖಲಿಸಿವೆ.
ಯುವ ಕಾಂಗ್ರೆಸ್ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸುನೀತ್ ಡೇಸಾ ಮತ್ತು ಆಲ್ವಿನ್ ಡಿಸೋಜಾ ಎಂಬವರು ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದಾರೆ. ಇಬ್ಬರಿಗೂ ಆಪ್ತನಾಗಿರುವ ಸ್ನೇಹಿತನ ಮದುವೆ ಕುಲಶೇಖರ ಚರ್ಚ್ ಸಭಾಂಗಣದಲ್ಲಿ ಭಾನುವಾರ ನಡೆಯುತ್ತಿತ್ತು. ಅಲ್ಲಿ ಗುಂಡಿನ ಪಾರ್ಟಿ ಕೂಡ ಇತ್ತು.[ಜ.26ರಂದು ಎತ್ತಿನಹೊಳೆ ಯೋಜನೆ ವಿರುದ್ಧ ಸರ್ಜಿಕಲ್ ಸ್ಟ್ರೈಕ್]
ಈ ವೇಳೆ ಕಂಠ ಪೂರ್ತಿ ಕುಡಿದಿದ್ದ ಆಲ್ವಿನ್ ಡಿ ಸೋಜಾ ಹಿಂದಿನಿಂದಲೂ ಇದ್ದಂತಹ ರಾಜಕಾರಣಿಗಳ ಮೇಲಿನ ದ್ವೇಷವನ್ನು ತೀರಿಸಲು ಮುಂದಾಗಿದ್ದಾರೆ. ಇದೇ ವೇಳೆ ಸುನೀತ್ ಡಿ ಸೋಜಾ ಎದುರಿಗೆ ಕಂಡಿದ್ದು, ಸುನಿತ್ ಸಹಿತ ರಾಜಕಾರಣಿಗಳ ನಿಂದಿಸಲು ಮುಂದಾಗಿದ್ದಾರೆ.
ಈ ವೇಳೆ ಸುನೀತ್ ಡಿ ಸೋಜಾ ಎದುರು ಮಾತನಾಡಿ, ಆಲ್ವಿನ್ ರನ್ನು ನಿಂದಿಸಿದ್ದಾರೆ. ಅಷ್ಟರಲ್ಲಿ ಆಕ್ರೋಶಗೊಂಡ ಸುನಿತ್ ಬೆಂಬಲಿಗರು ಆಲ್ವಿನ್ ಸಹಿತ ಆತನ ಜತೆಯಲ್ಲಿದ್ದವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇತ್ತಂಡಗಳನಡುವೆ ಮಾರಾಮಾರಿ ನಡೆದು, ಮದುವೆ ಸಭಾಂಗಣ ಅಕ್ಷರಶಃ ರಣರಂಗವಾಗಿ ಮಾರ್ಪಾಡಾಗಿದೆ.[ಅತ್ಯಾಚಾರಗೈದು ಮಹಿಳೆ ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ]
ಆ ಬಳಿಕ ಸಭಾಂಗಣದಲ್ಲಿ ನೆರೆದಿದ್ದ ನೆಂಟರೆಲ್ಲ ಸೇರಿ ಎರಡೂ ತಂಡವನ್ನು ಸಮಾಧಾನ ಮಾಡಿದ ಮೇಲೆ ಅಲ್ಲಿಂದ ತೆರಳಿದ್ದಾರೆ. ಆ ನಂತರ ಆಲ್ವಿನ್ ಆಸ್ಪತ್ರೆಯಲ್ಲಿ ದಾಖಲಾಗಿ, ಕದ್ರಿ ಪೊಲೀಸ್ ಠಾಣೆಯಲ್ಲಿ ಸುನಿತ್ ಮತ್ತು ಬೆಂಬಲಿಗರ ವಿರುದ್ಧ ಪತ್ನಿ ನೀತಾ ಹೆಲೆನ್ ಪಾಯಸ್ ಹೆಸರಿನಲ್ಲಿ ದೂರು ದಾಖಲಿಸಿದ್ದಾರೆ. ಜ. 17ರಂದು ಸುನಿತ್ ಅವರು ಆಲ್ವಿನ್ ಮತ್ತು ತಂಡದ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.