ಏಕನಾಥ ಶೆಟ್ಟಿ ಸುರಕ್ಷಿತವಾಗಿ ಮರಳುವ ನಿರೀಕ್ಷೆಯಲ್ಲಿದೆ ಕುಟುಂಬ
ಮಂಗಳೂರು, ಜುಲೈ 27 : ಚೆನ್ನೈನಿಂದ ಪೋರ್ಟ್ ಬ್ಲೇರ್ಗೆ ಪ್ರಯಾಣಿಸುತ್ತಿದ್ದ ವಾಯುಸೇನೆಯ ಎಎನ್-32 ವಿಮಾನ ನಾಪತ್ತೆಯಾಗಿ ಇಂದಿಗೆ 6 ದಿನ. ಅದರಲ್ಲಿ ನಾಪತ್ತೆಯಾಗಿರುವ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ, ಯೋಧ ಏಕನಾಥ ಶೆಟ್ಟಿ ಅವರ ಮನೆಯಲ್ಲಿ ಮೌನ ಮಡುಗಟ್ಟಿದೆ.
ನಾಪತ್ತೆಯಾದ ವಿಮಾನ ಹಾಗೂ ಅದರಲ್ಲಿದ್ದವರಿಗಾಗಿ ಎಲ್ಲ ರೀತಿಯಲ್ಲೂ ಶೋಧ ಕಾರ್ಯ ನಡೆಯುತ್ತಿದೆ. ಶೋಧ ಕಾರ್ಯದ ಬಗ್ಗೆ ಸೇನೆಯ ಕಂಟ್ರೋಲ್ ರೂಂನಿಂದ ದಿನಕ್ಕೆರಡು ಬಾರಿ ಮನೆಯವರಿಗೆ ಕರೆಗಳು ಬರುತ್ತಿವೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಯೋಧನ ಮನೆಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ.[ಯೋಧ ಏಕನಾಥ ಶೆಟ್ಟಿ ಬಗ್ಗೆ ಸಿಗುತ್ತಿಲ್ಲ ಮಾಹಿತಿ]
ಕೇರಳ ರಾಜ್ಯ ಇಬ್ಬರು ಯೋಧರು ಈ ವಿಮಾನದಲ್ಲಿದ್ದರು. ಅಲ್ಲಿನ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದೆ. ಆದರೆ, ರಾಜ್ಯ ಸರ್ಕಾರ ಇದುವರೆಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಮನೆಯವರ ನೋವು ಏನೆಂಬುದು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎಂದು ಸಂಬಂಧಿಕರು ದೂರಿದ್ದಾರೆ.[29 ಜನರಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ]
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಕೆ. ವಸಂತ ಬಂಗೇರ, ಶಾಸಕಿ ಶಕುಂತಲಾ ಶೆಟ್ಟಿ ಅವರು ಬಂದು ಧೈರ್ಯ ತುಂಬಿದ್ದಾರೆ. ಯೋಧ ಕಣ್ಮರೆಯಾದ ಬಗ್ಗೆ ರಾಜ್ಯ ಸರಕಾರ ಏನು ಕ್ರಮ ಕೈಗೊಂಡಿದೆ? ಎಂಬುದು ಇನ್ನೂ ಧೃಧಪಡಿಸಿಲ್ಲ.[ವಿಮಾನದಲ್ಲಿದ್ದರು ಮಂಗಳೂರ ಯೋಧ]
ರಾಜ್ಯ ಸರಕಾರ ಇನ್ನಾದರೂ ಎಚ್ಚೆತ್ತು ನಾಪತ್ತೆಯಾದ ವಿಮಾನದಲ್ಲಿದ್ದ ಯೋಧ ಏಕನಾಥ ಶೆಟ್ಟಿ ಅವರ ಬಗ್ಗೆ ಗಮನ ಹರಿಸಲಿ ಎಂಬುದು ಸಂಬಂಧಿಕರ ಮನದಾಳದ ಮಾತುಗಳಾಗಿದೆ. ಪುತ್ತೂರು ಉಪವಿಭಾಗಾಧಿಕಾರಿ ಡಾ. ರಾಜೇಂದ್ರ , ಮಂಗಳೂರು ಸೈನಿಕ್ ಬೋರ್ಡ್ ಅಧಿಕಾರಿಗಳು ಯೋಧನ ಮನೆಗೆ ಭೇಟಿ ನೀಡಿದ್ದಾರೆ.