ರಾಷ್ಟ್ರಪತಿ ಹುದ್ದೆಯ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ – ಧರ್ಮಸ್ಥಳದಿಂದ ಸ್ಪಷ್ಟನೆ
ಮಂಗಳೂರು, ಜೂನ್ 13: ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಧರ್ಮಸ್ಥಳದ ಆಡಳಿತ ಮಂಡಳಿ ಒನ್ ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದೆ.
ಜುಲೈ 17ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಇದರಲ್ಲಿ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸರ್ವಸಮ್ಮತ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ವಿಜಯವಾಣಿ ಪತ್ರಿಕೆ ವರದಿ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ಭಾರಿ ಚರ್ಚೆ ಹುಟ್ಟು ಹಾಕಿದೆ.
ಆದರೆ ಇದನ್ನು ತಳ್ಳಿ ಹಾಕಿರುವ ಧರ್ಮಸ್ಥಳದ ಆಡಳಿತ ಮಂಡಳಿ, "ಇಂಥಹ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಈ ಕುರಿತು ಯಾರೂ ನಮನ್ನು ಸಂಪರ್ಕಿಸಿಲ್ಲ. ಅಂತಹ ಪ್ರಸ್ತಾಪ ಬಂದರೂ ಅದನ್ನು ಧರ್ಮಾಧಿಕಾರಿ ಸ್ವೀಕರಿಸುವುದಿಲ್ಲ. ಮಂಜುನಾಥನ ಸೇವೆಗಿಂತ ಅವರಿಗೆ ಯಾವುದೇ ಹುದ್ದೆಯೂ ದೊಡ್ಡದಲ್ಲ," ಎಂದು ಒನ್ ಇಂಡಿಯಾ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ಮುಂದಿನ ರಾಷ್ಟ್ರಪತಿ ಯಾರಾಗುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಬಿರುಸಿನಿಂದ ನಡೆಯುತ್ತಿದೆ. ಪ್ರತಿ ಬಾರಿಯೂ ರಾಜಕೀಯ ಕ್ಷೇತ್ರದಲ್ಲಿ ಮಿಂಚಿದವರೇ ಈ ಪರಮೋಚ್ಛ ಪದವಿಯನ್ನು ಸ್ವೀಕರಿಸಬೇಕೆಂದೇನಿಲ್ಲ. ಈ ಹಿಂದೆ ವಿಜ್ಞಾನಿ ದಿವಂಗತ ಡಾ. ಎ. ಪಿ.ಜೆ. ಅಬ್ದುಲ್ ಕಲಾಂ ಈ ಹುದ್ದೆ ನಿಭಾಯಿಸಿದ್ದರು.
ರಾಜಕೀಯ ರಹಿತ, ಇಡೀ ದೇಶ ಒಪ್ಪುವ ಅಪಾರ ಜ್ಞಾನವುಳ್ಳ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಅಭ್ಯರ್ಥಿಯೆಂದು ಘೋಷಿಸಿದಾಗ ಜಾತಿ, ಧರ್ಮ, ಪಕ್ಷ ಮರೆತು ಬೆಂಬಲ ವ್ಯಕ್ತವಾಗಿತ್ತು. ಇದೀಗ ಅಂಥಹದ್ದೇ ವ್ಯಕ್ತಿಯ ಹುಡುಕಾಟದಲ್ಲಿ ಕೇಂದ್ರ ಸರ್ಕಾರವಿದೆ. ಆಗ ಕೇಳಿಬಂದ ಹೆಸರೇ ಡಾ. ವೀರೇಂದ್ರ ಹೆಗ್ಗಡೆ.
ಆದರೆ 'ಅಂತಹ (ರಾಷ್ಟ್ರಪತಿ ಅಭ್ಯರ್ಥಿ) ಪ್ರಸ್ತಾಪ ಬಂದರೂ ಅದನ್ನು ಧರ್ಮಾಧಿಕಾರಿ ಸ್ವೀಕರಿಸುವುದಿಲ್ಲ' ಎಂದಿರುವುದರಿಂದ ಮುಂದೆ ಇದು ಯಾವ ತಿರುವುಗಳನ್ನು ಪಡೆದುಕೊಳ್ಳಲಿದೆ ನೋಡಬೇಕಷ್ಟೆ.