ಬಂಟ್ವಾಳ ನೂತನ ಎಎಸ್ಪಿಯಾಗಿ ಅರುಣ್ ಕುಮಾರ್ ನೇಮಕ
ಮಂಗಳೂರು, ಜುಲೈ 12: ಬಂಟ್ವಾಳ ಉಪವಿಭಾಗದ ನೂತನ ಎಎಸ್ಪಿಯಾಗಿ ಐಪಿಎಸ್ ಅಧಿಕಾರಿ ಡಾ. ಕೆ. ಅರುಣ್ ಕುಮಾರ್ ರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ಅರುಣ್ ಕುಮಾರ್ ಹಾಸನದ ಹೊಳೆನರಸೀಪುರ ಉಪವಿಭಾಗದಲ್ಲಿ ಎಎಸ್ಪಿಯಾಗಿದ್ದರು. ಬಂಟ್ವಾಳ ಡಿವೈಎಸ್ಪಿ ಆಗಿದ್ದ ಸಿ.ಆರ್. ರವೀಶ್ ಅವರನ್ನು ಗಲಭೆಯ ಕಾರಣದಿಂದ ವರ್ಗಾವಣೆ ಮಾಡಲಾಗಿತ್ತು. ಇದೀಗ ಅವರ ಜಾಗಕ್ಕೆ ಡಿವೈಎಸ್ಪಿ ಬದಲಿಗೆ ಎಎಸ್ಪಿಯಾಗಿ ಅರುಣ್ ಕುಮಾರ್ ನೇಮಿಸಲಾಗಿದೆ.
ಇದೇ ಸಂದರ್ಭದಲ್ಲಿಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಬ್ರಿಜೇಶ್ ಮ್ಯಾಥ್ಯೂ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರದ ಅಧಿಕೃತ ಆದೇಶ ಹೊರಡಿಸಿದೆ.
ಗಲಭೆ ಕಾರಣಕ್ಕೆ ಬಿ.ಕೆ. ಮಂಜಯ್ಯ ರನ್ನು ವರ್ಗಾವಣೆ ಮಾಡಿದ್ದರಿಂದ ಬಂಟ್ವಾಳ ವೃತ್ತ ನಿರೀಕ್ಷಕ ಹುದ್ದೆ ಖಾಲಿ ಇತ್ತು. ಈ ಜಾಗಕ್ಕೆ ಚಿಕ್ಕಮಗಳೂರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಸಬ್ ಇನ್ಸ್ ಪೆಕ್ಟರ್ ಆಗಿದ್ದ ಬ್ರಿಜೇಶ್ ಮ್ಯಾಥ್ಯೂರನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ಅದರಲ್ಲೂ ಪ್ರಮುಖವಾಗಿ ಬಂಟ್ವಾಳ ತಾಲೂಕಿನಲ್ಲಿ ನಿರಂತರವಾಗಿ ಕೋಮು ಗಲಭೆಗಳು ನಡೆಯುತ್ತಿರುವುದರಿಂದ ಪ್ರಮುಖ ಹುದ್ದೆಗಳಿಗೆ ಸರಕಾರ ಹೊಸಬರನ್ನು ನೇಮಕ ಮಾಡಿದೆ.
ವಾರದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ವೇದಮೂರ್ತಿ ಜಾಗಕ್ಕೆ ಉಡುಪಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ರನ್ನೂ ಇದೇ ಸಮಯದಲ್ಲಿ ನೇಮಿಸಲಾಗಿದೆ. ವಿಷ್ಣುವರ್ಧನ್ ಒಂದು ವಾರದಿಂದ ದಕ್ಷಿಣ ಕನ್ನಡದಲ್ಲಿ ಪ್ರಭಾರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.