ಹಬ್ಬದ ನೆಪದಲ್ಲಿ ಕಿರಿಕಿರಿ ಮಾಡಿದರೆ ಹುಷಾರ್..
ಮಂಗಳೂರು, ಆಗಸ್ಟ್ 29: ಹಬ್ಬದ ನೆಪದಲ್ಲಿ ವೇಷ ಹಾಕಿಕೊಂಡು ಕಾರ್ಯಕ್ರಮ ನೀಡುವಾಗ ಯಾರಾದರೂ ಸಾರ್ವಜನಿಕರಿಗೆ ಕಿರಿಕಿರಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೆ.ಎಂ.ಶಾಂತರಾಜು ಭರವಸೆ ಹೇಳಿದರು.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡ ಈಶ್ವರ್, ನವರಾತ್ರಿ ಸೇರಿದಂತೆ ಹಬ್ಬಗಳ ಸಮಯದಲ್ಲಿ ವೇಷ ಹಾಕಿ ಕುಣಿಯುವವರು ತಡರಾತ್ರಿವರೆಗೂ ಮನೆ ಮನೆಗೆ ಭೇಟಿ ನೀಡುತ್ತಾರೆ. ರೋಗಿಗಳು, ಮಕ್ಕಳು ಹಾಗೂ ವೃದ್ದರಿಗೆ ಇದರಿಂದ ತೊಂದರೆಯಾಗುತ್ತದೆ. ಈ ರೀತಿ ವೇಷ ಹಾಕುವವರು ಕಾರ್ಯಕ್ರಮ ನೀಡುವುದಕ್ಕೆ ಸಮಯದ ಮಿತಿ ವಿಧಿಸಬೇಕು ಎಂದು ಒತ್ತಾಯಿಸಿದರು.[ಚರಣ್ ಕೊಲೆ ಪ್ರಕರಣ, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ]
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಂತರಾಜು ಪ್ರತಿಕ್ರಿಯಿಸಿ, ವೇಷ ಹಾಕಿ ಕುಣಿಯುವವರಿಗೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಆದರೆ ಅದರಿಂದ ಸಾರ್ವಜನಿಕರಿಗೆ ತೊಂದರೆ ಆಗುವಂತಿದ್ದರೆ ಪೊಲೀಸರಿಗೆ ದೂರು ನೀಡಬಹುದು. ವೇಷ ಹಾಕಿ ಆಸ್ಪತ್ರೆ ಹಾಗೂ ಮನೆಗಳ ನೆರೆಹೊರೆಯವರಿಗೆ ತೊಂದರೆಯಾಗುವ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಗಮನಕ್ಕೆ ತಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.