ಬಪ್ಪನಾಡು ದೇವಸ್ಥಾನದಲ್ಲಿ ದೊಡ್ಡಣ್ಣ ಸೆಲ್ಫಿಗಾಗಿ ಮುಗಿಬಿದ್ದ ಭಕ್ತರು!
ಮಂಗಳವಾರ ಬಪ್ಪನಾಡು ದೇವಸ್ಥಾನದಲ್ಲಿ ಕನ್ನಡದ ಹಿರಿಯ ನಟ ದೊಡ್ಡಣ್ಣ ಪ್ರತ್ಯಕ್ಷರಾದರು. ದೊಡ್ಡಣ್ಣರನ್ನು ನೋಡುತ್ತಿದ್ದಂತೆ ಭಕ್ತರು ದೇವರನ್ನು ಮರೆತು ದೊಡ್ಡಣ್ಣ ಜತೆ ಸೆಲ್ಫೀ ತೆಗೆದುಕೊಳ್ಳಲು ಮುಗಿ ಬಿದ್ದಿರು.
ಮಂಗಳೂರು, ಏಪ್ರಿಲ್ 11: ಕನ್ನಡದ ಹಿರಿಯ ಚಿತ್ರ ನಟ ದೊಡ್ಡಣ್ಣ ಇಂದು ಮುಲ್ಕಿಯ ಬಪ್ಪನಾಡು ದೇವಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೊಡ್ಡಣ್ಣ ಜತೆ ಸೆಲ್ಪೀ ತೆಗೆಸಿಕೊಳ್ಳಲು ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಮುಗಿಬಿದ್ದಿದ್ದರು.
ಒಂದು ಹಂತದಲ್ಲಿ ಭಕ್ತರ ನೂಕು ನುಗ್ಗಲಿನಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರೇ ಬರಬೇಕಾಯಿತು. ನಂತರ ದೊಡ್ಡಣ್ಣ ದೇವಳದಲ್ಲಿ ಮೇ 5ರಂದು ನಡೆಯಲಿರುವ ಶತ ಚಂಡಿಕಾ ಯಾಗ ಹಾಗೂ ರಜತ ಕವಚ ಸಮರ್ಪಣಾ ಕಾರ್ಯಕ್ರಮದ ಕಾರ್ಯಾಲಯವನ್ನು ದೊಡ್ಡಣ್ಣ ಉದ್ಘಾಟಿಸಿದರು.[ಸಸಿಹಿತ್ಲು ಬೀಚ್ ನಲ್ಲಿ ಮೇ 26ರಿಂದ ಇಂಡಿಯನ್ ಓಪನ್ ಸರ್ಫಿಂಗ್]
ಬಳಿಕ ಮಾಧ್ಯಮದವರೊಡನೆ ಮಾತನಾಡಿದ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು. ತುಳುನಾಡಿನ ನಾಗಾರಾಧನೆಯನ್ನು ಹೊಗಳಿದರು. ಉತ್ತಮ ಚಿತ್ರಗಳ ಅಗತ್ಯತೆಯ ಬಗ್ಗೆಯೂ ಮಾತನಾಡಿದರು. ತಾವು ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕರಾವಳಿ ಜನ ದೈವಭಕ್ತರು
"ಕರಾವಳಿ ಭಾಗದ ಜನರು ದೊಡ್ಡ ದೈವಭಕ್ತರು. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ನಾಗಾರಾಧನೆ ದೇಶಕ್ಕೇ ಮಾದರಿಯಾಗಿದೆ. ಇಲ್ಲಿಗೆ ಬರುವುದೆಂದರೆ ನನಗೆ ಬಲು ಸಂತೋಷ," ಎಂದರು.
ಚಿತ್ರೀಕರಣಕ್ಕೆ ಪೊಲೀಸರ ಅಗತ್ಯವಿಲ್ಲ
"ಈ ಭಾಗದಲ್ಲಿ ಚಿತ್ರೀಕರಣ ಬಲು ಸುಲಭ. ಚಿತ್ರೀಕರಣಕ್ಕೆ ಪೊಲೀಸರನ್ನು ಬಳಸುವ ಅವಶ್ಯಕತೆಯೇ ಇಲ್ಲ. ಇಲ್ಲಿನ ಜನ ಕಲಾವಿದರನ್ನು ಯಾವತ್ತೂ ನೋಯಿಸುವುದಿಲ್ಲ. ಪ್ರತಿಯೊಬ್ಬರೂ ಸಹಕಾರ ನೀಡುತ್ತಾರೆ," ಎಂದರು.[ರಾಜ್ಯಸಭೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ತುಳು ಹಾಡು ಹಾಡಿದ ಗಮ್ಮತ್ತು]
ಗಡ್ಡಧಾರಿ ದೊಡ್ಡಣ್ಣ
ಗಡ್ಡಧಾರಿಯಾಗಿದ್ದ ಅವರನ್ನು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, "ತೆಲುಗಿನಲ್ಲಿ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಾನು ನಟಿಸುತ್ತಿದ್ದು, ಅದಕ್ಕಾಗಿ ಈ ವೇಷ. ಈಗಾಗಲೇ ಚಿತ್ರೀಕರಣವು ಅಂತಿಮ ಹಂತದಲ್ಲಿದೆ. ನಾನು ಈಗಾಗಲೇ ವಿವಿಧ ಭಾಷೆಗಳಲ್ಲಿ ಒಟ್ಟು 637 ಚಿತ್ರಗಳಲ್ಲಿ ನಟಿಸಿದ್ದೇನೆ," ಎಂದರು.
ರಿಯಾಲಿಟಿ ಶೋಗಳತ್ತ ಆಸಕ್ತಿ
ಇತ್ತೀಚಿನ ದಿನಗಳಲ್ಲಿ ಜನರು ರಿಯಾಲಿಟಿ ಶೋಗಳತ್ತ ಆಸಕ್ತಿ ತೋರಿಸುತ್ತಿರುವ ಕಾರಣ ಕನ್ನಡ ಚಿತ್ರಗಳತ್ತ ಒಲವು ಕಡಿಮೆಯಾಗಿದೆ. ಆದರೆ ಜನಮೆಚ್ಚುವ ಚಿತ್ರಗಳನ್ನು ಈಗಲೂ ಜನರು ಇಷ್ಟಪಡುತ್ತಾರೆ. ರಿಯಾಲಿಟಿ ಶೋಗಳನ್ನು ಮೀರಿಸಿದ ಚಿತ್ರಗಳ ಅವಶ್ಯಕತೆ ಇದೆ. ಜನರು ಈಗಲೂ ಡಾ. ರಾಜಕುಮಾರ್ ಚಿತ್ರಗಳನ್ನು ನೋಡುವುದಿಲ್ಲವೇ? ಅದೇ ರೀತಿಯ ಚಿತ್ರಗಳು ಬರಬೇಕು ಎಂದವರು ಅಭಿಪ್ರಾಯಪಟ್ಟರು.
ಸೆಲ್ಫಿಗಾಗಿ ಮುಗಿಬಿದ್ದರು
ಬಪ್ಪನಾಡಿಗೆ ನಟ ದೊಡ್ಡಣ್ಣ ಅನಿರೀಕ್ಷಿತ ಭೇಟಿ ನೀಡುತ್ತಿದ್ದಂತೆ ನೆರೆದಿದ್ದ ಭಕ್ತರು ನಟರೊಡನೆ ಸೆಲ್ಫಿಗಾಗಿ ಮುಗಿಬಿದ್ದರು. ಇದರಿಂದ ದೇವಳದಲ್ಲಿ ಕೊಂಚ ನೂಕು ನುಗ್ಗಲು ಉಂಟಾಯಿತು. ಕೂಡಲೇ ಮುಲ್ಕಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.